ಬೆಂಗಳೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ಷೇತ್ರ ಹುಡುಕಾಟ ನಡೆಸುತ್ತಿರುವ ಬಗ್ಗೆ, ಅವರು ಕೋಲಾರಕ್ಕೆ ಹೋಗಿರುವ ಬಗ್ಗೆ ನಾನು ಲಘುವಾಗಿ ಮಾತನಾಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಬಗ್ಗೆ ನಾನು ಲಘುವಾಗಿ ಮಾತನಾಡಲ್ಲ. ಅವರು ಮಾಜಿ ಮುಖ್ಯಮಂತ್ರಿಗಳು, ಸಚಿವರಾಗಿದ್ದವರು ಹಾಗೂ ಉಪಮುಖ್ಯಮಂತ್ರಿ ಆಗಿದ್ದವರು. ಅವರು ಎಲ್ಲಿ ಬೇಕಾದರೂ ಚುನಾವಣೆಗೆ ನಿಲ್ಲಬಹುದು. ಅವರಿಗೆ ಕ್ಷೇತ್ರವೇ ಇಲ್ಲ ಎಂಬ ಕ್ಷುಲ್ಲಕ ಮಾತುಗಳು ನಮಗೆ ಅವಶ್ಯಕತೆ ಇಲ್ಲ. ಸಿದ್ದರಾಮಯ್ಯ ಹೋದರು ಎಂದು ಕೋಲಾರದಲ್ಲಿ ನಮ್ಮ ಯಾವುದೇ ಕಾರ್ಯತಂತ್ರ ಬದಲಾಗಲ್ಲ. ಕೋಲಾರದಲ್ಲಿ ನಮ್ಮ ಪಕ್ಷಕ್ಕೆ ಸಮರ್ಥ ಅಭ್ಯರ್ಥಿಗಳಿದ್ದಾರೆ. ಸಿದ್ದರಾಮಯ್ಯ ಅಷ್ಟೇ ಅಲ್ಲ, ಯಾರೇ ನಿಂತರೂ ನಮ್ಮ ಪಕ್ಷಕ್ಕೆ ಆತಂಕ ಇಲ್ಲ ಎಂದು ಹೇಳಿದರು.
ಸಿದ್ದರಾಮಯ್ಯ ಅವರಿಗೆ ಸಮಸ್ಯೆಯೇ ಶ್ರೀನಿವಾಸ್ ಗೌಡರು : ಕೋಲಾರದಲ್ಲಿ ಸಿದ್ದರಾಮಯ್ಯ ಅವರಿಗೆ ಸಮಸ್ಯೆ ಎಂದರೆ ನಮ್ಮ ಪಕ್ಷಕ್ಕೆ ಕೈಕೊಟ್ಟು ಹೋದ ಹಾಲಿ ಶಾಸಕ ಶ್ರೀನಿವಾಸ್ ಗೌಡರು. ಅವರು ನಮಗೆ ಮಾಡಿದ ದ್ರೋಹವೇ ಈ ಬಾರಿ ಕೋಲಾರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮುಳುವಾಗಲಿದೆ. ಸಿದ್ದರಾಮಯ್ಯ ಅವರಿಗೆ ನಕಾರಾತ್ಮಕ ಅಂಶಗಳು ಇರುವುದೇ ಅಲ್ಲಿ. ಹೀಗಾಗಿ ನಮ್ಮ ಪಕ್ಷಕ್ಕೆ ಆತಂಕ ಏನೂ ಇಲ್ಲ. ಬಹುತೇಕ ಎಲ್ಲ ಕ್ಷೇತ್ರದಲ್ಲಿ ಜಾತಿ ಲೆಕ್ಕಾಚಾರದಲ್ಲಿ ಚುನಾವಣೆ ನಡೆಯುತ್ತಿದೆ. ಸಿದ್ದರಾಮಯ್ಯ ಕೂಡ ಅದೇ ಲೆಕ್ಕದಲ್ಲಿ ಕೋಲಾರಕ್ಕೆ ಹೋಗಿರಬಹುದು ಎಂದರು.

ಚಾಮುಂಡೇಶ್ವರಿ, ಬಾದಾಮಿಯಲ್ಲೂ ಜಾತಿ ಲೆಕ್ಕಾಚಾರದಲ್ಲಿ ಚುನಾವಣೆ ನಡೆದಿದೆ. ಕಳೆದ ಚುನಾವಣೆಯಲ್ಲಿ ಕೊನೆ ಸಮಯದಲ್ಲಿ ನಾನು ಮೂರು ದಿನ ಬದಾಮಿಗೆ ಹೋಗದೆ ಇದ್ದಿದ್ದರೆ ಹತ್ತು ಸಾವಿರಕ್ಕೂ ಹೆಚ್ಚು ಮತಗಳಿಂದ ಸಿದ್ದರಾಮಯ್ಯ ಅವರು ಸೋಲುತ್ತಿದ್ದರು. ಗುಳೇದಗುಡ್ಡ ಸೇರಿದಂತೆ ಹಲವೆಡೆ ನಾನು ಅಂತಿಮ ಕ್ಷಣದಲ್ಲಿ ಪ್ರಚಾರ ಮಾಡಿದ್ದೆ, ಜನರಿಂದ ಹೆಚ್ಚು ಪ್ರತಿಕ್ರಿಯೆ ವ್ಯಕ್ತವಾಯಿತು. ನಮ್ಮ ಅಭ್ಯರ್ಥಿ 28 ಸಾವಿರ ಮತ ಪಡೆದರು. ಆಗ ಸಿದ್ದರಾಮಯ್ಯ ಚಿಕ್ಕ ಅಂತರದಲ್ಲಿ ಗೆದ್ದರು. ಇಲ್ಲವಾಗಿದ್ದರೆ ಹತ್ತು ಸಾವಿರ ಮತಗಳ ಅಂತರದಿಂದ ಸೋಲುತ್ತಿದ್ದರು. ಹಾಗೆ ನೋಡಿದರೆ ಅವರ ಗೆಲುವಿಗೆ ನಾನೇ ಕಾರಣ. ಇದರಲ್ಲಿ ಯಾವುದೇ ಸಂಶಯ ಇಲ್ಲ. ಸಿದ್ದರಾಮಯ್ಯ ಅವರಿಗೆ ಎರಡು ಬಾರಿ ನನ್ನಿಂದ ರಾಜಕೀಯ ಮರುಜನ್ಮ ಸಿಕ್ಕಿದೆ. ಕೋಲಾರದಲ್ಲಿ ಕಾಂಗ್ರೆಸ್ ಭಿನ್ನಾಭಿಪ್ರಾಯಕ್ಕಿಂತ ನಮ್ಮ ಪಕ್ಷದ ಅಭ್ಯರ್ಥಿ ಗೆಲ್ಲಬೇಕು. ಮಿಷನ್ 123 ಗುರಿಯಲ್ಲಿ ಕೋಲಾರ ಕ್ಷೇತ್ರವೂ ಒಂದು. ಈ ಬಗ್ಗೆ ನಾವು ಎಚ್ಚರ ತಪ್ಪುವುದಿಲ್ಲ ಎಂದರು.
18 ಅಥವಾ 20ರಂದು ಪಂಚರತ್ನ ರಥಯಾತ್ರೆ : ಈ ತಿಂಗಳ 18 ಅಥವಾ 20ರಂದು ಪಂಚರತ್ನ ರಥಯಾತ್ರೆ ಮತ್ತೆ ಆರಂಭ ಮಾಡಲಾಗುವುದು. ಈ ಎರಡು ದಿನದಲ್ಲಿ ಒಂದು ದಿನಾಂಕವನ್ನು ಇನ್ನೆರಡು ಮೂರು ದಿನದಲ್ಲಿ ನಿರ್ಧಾರ ಮಾಡುತ್ತೇವೆ ಎಂದು ಕುಮಾರಸ್ವಾಮಿ ಅವರು ತಿಳಿಸಿದರು.
ಕೆಂಪೇಗೌಡರ ಪ್ರತಿಮೆ ನಿಲ್ಲಿಸಿ ಬಿಟ್ಟರೆ ಒಕ್ಕಲಿಗರ ನಾಯಕರಾಗಲ್ಲ: ಬಿಜೆಪಿಯಲ್ಲಿ ಒಕ್ಕಲಿಗ ನಾಯಕರ ಬೆಳವಣಿಗೆಯನ್ನು ಕುಮಾರಸ್ವಾಮಿ ಅವರು ಸಹಿಸುತ್ತಿಲ್ಲ ಎಂದು ಬಿಜೆಪಿಯ ಕೆಲ ನಾಯಕರು ನೀಡಿರುವ ಹೇಳಿಕೆಗಳ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಹೆಚ್ಡಿಕೆ, ನಾನು ಎರಡು ಕಡೆಗಳಲ್ಲಿ ನಾಡಪ್ರಭುಗಳ ಪ್ರತಿಮೆ ಅನಾವರಣ ಮಾಡಿ ಬಂದೆ. ಹಾಗಂತ ನನ್ನ ಜೊತೆ ಜನರು ಓಡಿ ಬರ್ತಾರಾ? ಕೆಂಪೇಗೌಡರ ಆಶಯಕ್ಕೆ ತಕ್ಕಂತೆ ಕೆಲಸ ಮಾಡಿದರೆ ಜನರು ಗೌರವ ನೀಡುತ್ತಾರೆ ಎಂದು ಮಾರ್ಮಿಕವಾಗಿ ಹೇಳಿದರು.
ಪ್ರತಿಮೆ ಅನಾವರಣ ಮಾಡಿರೋದಕ್ಕೂ, ಮುಂದಿನ ಚುನಾವಣೆಗೂ ಬಹಳ ವ್ಯತ್ಯಾಸ ಇದೆ. ನೆರೆ, ಬರ ಬಂದಾಗ ಜನರು ಬೀದಿಗೆ ಬಂದರು. ಜೀವಂತ ಪ್ರತಿಮೆಗಳಿಗೆ ಈ ನಾಯಕರು ಏನು ಕೊಟ್ಟಿದ್ದಾರೆ? ಹಾಗೆ ನೋಡಿದರೆ ಒಕ್ಕಲಿಗ ಸಮಾಜಕ್ಕೆ ಬಿಜೆಪಿಯ ಕೊಡುಗೆ ಏನು? ಕೆಂಪೇಗೌಡರ ಪ್ರತಿಮೆ ಮಾಡಿ ಹೆಸರಿನಲ್ಲಿ ಗಿನ್ನೆಸ್ ರೆಕಾರ್ಡ್ ಮಾಡಿದ್ದಾರೆ ಎಂದು ಹೇಳುತ್ತಾರೆ. ಅದೇ ಕೆಂಪೇಗೌಡರು ನಿರ್ಮಿಸಿದ ಕೆರೆಗಳನ್ನು ನುಂಗಿದ ಕಾರಣಕ್ಕೆ ಬಿಜೆಪಿಯವರನ್ನು ಗಿನ್ನೆಸ್ ದಾಖಲೆಗೆ ಸೇರಿಸಬೇಕು ಎಂದು ಮಾಜಿ ಮುಖ್ಯಮಂತ್ರಿಗಳು ಕುಟುಕಿದರು.

ಪ್ರತಿಮೆಯಿಂದ ಮತ ಬರುತ್ತೆ ಎನ್ನುವ ಭ್ರಮೆಯಲ್ಲಿ ಇದ್ದಾರೆ ಬಿಜೆಪಿ ನಾಯಕರು. ಆ ಪ್ರತಿಮೆ ನಿರ್ಮಾಣಕ್ಕೆ 64 ಕೋಟಿ ಹಣ ಖರ್ಚು ಮಾಡಿದ್ದಾರೆ. ಪ್ರತಿಮೆ ಮಾಡಿ ದೊಡ್ಡ ಲೀಡರ್ ಅನ್ನಿಸಿಕೊಳ್ತಾರಾ ಇವರು. ಇದು ಜನರಿಗೆ ಗೊತ್ತಿದೆ ಎಂದು ಅವರು ಹೇಳಿದರು.
ನಡುರಾತ್ರಿ ಆಹ್ವಾನ : ಕಾರ್ಯಕ್ರಮಕ್ಕೆ ಬರುವಂತೆ ನಡುರಾತ್ರಿ ಬಂದು ದೇವೇಗೌಡರಿಗೆ ಆಹ್ವಾನ ನೀಡಿದ್ದಾರೆ. ಯಾರೋ ಮನೆ ಹತ್ತಿರ ಬಂದು ಪತ್ರ ಕೊಟ್ಟು ಹೋಗಿದ್ದಾರೆ. ರಾತ್ರಿ ಕೊಟ್ಟ ಪತ್ರ ನೋಡಿ ಬೆಳಗ್ಗೆ ಹೋಗೋಕೆ ಆಗುತ್ತಾ? ಆಹ್ವಾನ ಪತ್ರಿಕೆ ಮುದ್ರಣ ಮಾಡಿ 10 ದಿನ ಆಗಿದೆ. ಅದರಲ್ಲೂ ದೇವೇಗೌಡರ ಹೆಸರು ಇರಲಿಲ್ಲ. ಅವರು ಮಾಜಿ ಪ್ರಧಾನಿಗಳು ಹಾಗೂ ಹಾಲಿ ರಾಜ್ಯಸಭೆ ಸದಸ್ಯರು. ಇದೇನಾ ಶಿಷ್ಟಾಚಾರ? ಉದ್ದೇಶ ಪೂರ್ವಕವಾಗಿಯೇ ಹೀಗೆ ಮಾಡಿದ್ದಾರೆ. ಸರ್ಕಾರದ ದುಡ್ಡನಲ್ಲಿ ಬಿಜೆಪಿ ಕಾರ್ಯಕ್ರಮ ಮಾಡಿಕೊಂಡಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಮೋದಿ ಅವರು ಡಬಲ್ ಎಂಜಿನ್ ಸರ್ಕಾರ ಎಂದು ಹೇಳಿದ್ದಾರೆ. ಇದು ದುಡ್ಡು ಲೂಟಿ ಮಾಡುವ ಡಬಲ್ ಎಂಜಿನ್ನಾ? ಹಣ ಹೊಡೆದುಕೊಂಡು ಹೋಗಿ ದೆಹಲಿಯಲ್ಲಿ ಇಟ್ಟುಕೊಂಡು ಹೋಗೋದಾ? ನಿಮ್ಮ ಡಬಲ್ ಎಂಜಿನ್ ಸರ್ಕಾರನಾ? ಎಂದು ಪ್ರಹಾರ ನಡೆಸಿದರು. ವೀರಶೈವ ಸಮುದಾಯದವರು ಸೇರಿ ಎಲ್ಲರೂ ಇದನ್ನು ಅರ್ಥ ಮಾಡಿಕೊಳ್ಳಬೇಕು. 2006ರಲ್ಲಿ ಬಿಜೆಪಿಯ ಯಾವುದೇ ನಿರ್ಧಾರಗಳು ರಾಜ್ಯದಲ್ಲಿ ಆಗುತ್ತಿದ್ದವು. ಈಗ ಎಲ್ಲವೂ ದೆಹಲಿಯಲ್ಲಿ ಆಗುತ್ತವೆ. ರಾಜ್ಯದ ಜನ ಇದನ್ನು ಅರ್ಥ ಮಾಡಿಕೊಳ್ಳಬೇಕು. ಎಲ್ಲಾ ಲಕೋಟೆಗಳು ದೆಹಲಿಯಿಂದಲೇ ಬರುತ್ತವೆ. ಕರ್ನಾಟಕ ಲಕೋಟೆ ಎನ್ನುವುದು ಬಿಜೆಪಿಯಲ್ಲಿ ಮುಗಿದ ಅಧ್ಯಾಯ ಎಂದು ಹೇಳಿದರು.
ಇದನ್ನೂ ಓದಿ : ಚಿಕ್ಕನಾಯಕನಹಳ್ಳಿ ಕ್ಷೇತ್ರಕ್ಕೆ ಸಿದ್ದರಾಮಯ್ಯ ಬಂದ್ರೆ ಸ್ವಾಗತಿಸುತ್ತೇನೆ : ಸಚಿವ ಮಾಧುಸ್ವಾಮಿ
ಕೈ, ಕಮಲದಿಂದ ಜೆಡಿಎಸ್ಗೆ: ತುಮಕೂರು ಜಿಲ್ಲೆಯ ಶಿರಾ ವಿಧಾನಸಭೆ ಕ್ಷೇತ್ರದ ವಿವಿಧ ಪಕ್ಷಗಳ ಮುಖಂಡರು ಇಂದು ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಜೆಡಿಎಸ್ಗೆ ಸೇರ್ಪಡೆಯಾದರು. ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ವಿಧಾನ ಪರಿಷತ್ ಸದಸ್ಯ ಕೆ.ಎನ್.ತಿಪ್ಪೇಸ್ವಾಮಿ ಅವರ ಸಮ್ಮುಖದಲ್ಲಿ ಶಿರಾ ಕ್ಷೇತ್ರದ ಕಾಂಗ್ರೆಸ್, ಬಿಜೆಪಿ ಮುಖಂಡರು ಪಕ್ಷಕ್ಕೆ ಸೇರ್ಪಡೆಯಾದರು.
ಕುಮಾರಸ್ವಾಮಿ ಅವರು ಸೇರ್ಪಡೆಗೊಂಡ ಮುಖಂಡರಿಗೆ ಜೆಡಿಎಸ್ ಶಾಲು ಹಾಕಿ ಪಕ್ಷಕ್ಕೆ ಸ್ವಾಗತಿಸಿದರು. ತುಮಕೂರು ಜಿಪಂ ಮಾಜಿ ಅಧ್ಯಕ್ಷ ಕಲ್ಕೆರೆ ರವಿಕುಮಾರ್, ಕೆಎಂಎಫ್ ನಿರ್ದೇಶಕ ಎಸ್.ಆರ್.ಗೌಡ, ಸುಧಾಕರ್ ಗೌಡ, ವೀರೇಶ್, ಪ್ರವೀಣ್ ಮುಂತಾದ ಪ್ರಮುಖರು ತಮ್ಮ ನೂರಾರು ಜನ ಬೆಂಬಲಿಗರೊಂದಿಗೆ ಪಕ್ಷಕ್ಕೆ ಸೇರಿದರು.
ಮರಳಿ ಜೆಡಿಎಸ್ಗೆ: ಇವರೆಲ್ಲರೂ ಈ ಹಿಂದೆ ಜೆಡಿಎಸ್ನಿಂದ ಕಾಂಗ್ರೆಸ್, ಬಿಜೆಪಿಗೆ ಸೇರಿದ್ದರು. ಈಗ ಅವರೆಲ್ಲರೂ ಮರಳಿ ಮನೆಗೆ ವಾಪಸ್ ಆಗಿದ್ದಾರೆ.