ಬೆಂಗಳೂರು : ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ವಿಶೇಷ ಸಕ್ಷಮ ಪ್ರಾಧಿಕಾರ ವಿಶೇಷಾಧಿಕಾರಿಯಾಗಿರುವ ಐಎಎಸ್ ಅಧಿಕಾರಿ ಹರ್ಷಾ ಗುಪ್ತಾ ಮಾಜಿ ಶಾಸಕ ಆರ್.ರೋಷನ್ ಬೇಗ್ ಪಾತ್ರದ ಬಗ್ಗೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿರುವುದು ಬೆಳಕಿಗೆ ಬಂದಿದೆ.
ಪತ್ರದಲ್ಲಿ ಮನ್ಸೂರ್ ಖಾನ್ ಯಾವ ರೀತಿಯಾಗಿ ಜನರಿಂದ ಹೂಡಿಕೆ ಮಾಡಿಸಿಕೊಳ್ಳುತ್ತಿದ್ದರು ಎಂಬುದರ ಬಗ್ಗೆ ಉಲ್ಲೇಖಿಸಿದ್ದಾರೆ. ಐಎಂಎ ಸಮೂಹ ಸಂಸ್ಥೆಯ ಚುಟುವಟಿಕೆಗಳಿಗೆ ರೋಷನ್ ಬೇಗ್ ಹೆಚ್ಚು ಪ್ರಚಾರ ಕೊಟ್ಟಿದ್ದರು.
ಸ್ಥಳೀಯ ಶಾಸಕನಾಗಿದ್ದ ರೋಷನ್ ಬೇಗ್ ಅವರನ್ನ ಶಾಸಕನಾಗಿದ್ದಾಗ ಹಲವು ಬಾರಿ ಭೇಟಿಯಾಗಿದ್ದ ಮಾನ್ಸೂರ್ ಖಾನ್, ಇನ್ ಫೆಂಟ್ರಿ ರಸ್ತೆಯಲ್ಲಿರುವ ಮಾನ್ಸೂರ್ ಖಾನ್ ಕಚೇರಿಯಲ್ಲೇ ರೋಷನ್ ಬೇಗ್ ಹೂಡಿಕೆದಾರೊಂದಿಗೆ ಭೇಟಿ ಮಾಡಿದ್ದರು.
ಐಎಂಎ ಸಂಸ್ಥೆ ದೊಡ್ಡದಾಗಿ ಬೆಳೆಯುವುದಕ್ಕೆ ಪ್ರಮುಖ ಕಾರಣ ರೋಷನ್ ಬೇಗ್ ಪ್ರಚಾರ ಎಂದು ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ರೋಷನ್ ಬೇಗ್ ಇದ್ದಾರೆ ಎಂದು ನಂಬಿಕೊಂಡು ಸಾಕಷ್ಟು ಜನರು ದುಡಿದ ಹಣವನ್ನ ಸಂಸ್ಥೆಗೆ ಹೂಡಿಕೆ ಮಾಡಿದ್ದರು. ಈಗಾಗಲೇ ವಂಚನೆ ಪ್ರಕರಣದಲ್ಲಿ 1 ಲಕ್ಷ ಜನರು ಹಣ ಹೂಡಿಕೆ ಮಾಡಿದ್ದು, ಒಟ್ಟು 2,900 ಕೋಟಿ ರೂ. ವಂಚನೆಯಾಗಿದೆ.
ಇದರಲ್ಲಿ 1,500 ಕೋಟಿ ರೂಪಾಯಿ ಹಣ ಗ್ರಾಹಕರು ವಾಪಸ್ ಪಡೆದಿದ್ದಾರೆ. ಇನ್ನು 1,400 ಕೋಟಿ ರೂ. ವಾಪಸ್ ಆಗಬೇಕಿದೆ. ಈ ಪೈಕಿ 475 ಕೋಟಿ ರೂ. ಚರಾಸ್ತಿ ಹಾಗೂ ಸ್ಥಿರಾಸ್ತಿ ಆರೋಪಿಗಳಿಂದ ಜಪ್ತಿ ಮಾಡಿಕೊಳ್ಳಲಾಗಿದೆ.