ಬೆಂಗಳೂರು: ಜಿವಿಕೆ ಸಂಸ್ಥೆಯು ತನ್ನ ಸಿಬ್ಬಂದಿಗೆ ವೇತನ ನೀಡಲು ಮೀನಾಮೇಷ ಎಣಿಸುತ್ತಿರುವ ಹಿನ್ನೆಲೆಯಲ್ಲಿ ಗುರುವಾರದಿಂದ ರಾಜ್ಯಾದ್ಯಂತ 108 ಆ್ಯಂಬುಲೆನ್ಸ್ ಸೇವೆ ಸ್ಥಗಿತಗೊಳಿಸುವ ಎಚ್ಚರಿಕೆಯನ್ನು ಸಿಬ್ಬಂದಿ ನೀಡಿದ್ದಾರೆ. ಕಳೆದ ಹಲವು ತಿಂಗಳುಗಳಿಂದ ಸಂಸ್ಥೆ ವೇತನ ಬಿಡುಗಡೆ ಮಾಡದೆ ಸತಾಯಿಸುತ್ತಿದೆ ಎನ್ನುವುದು ಸಿಬ್ಬಂದಿಯ ಆರೋಪ.
ಈ ವೇಳೆ ಮಧ್ಯಪ್ರವೇಶಿಸಿದ ಸರ್ಕಾರ ಜಿವಿಕೆ ಸಂಸ್ಥೆಯವರೊಂದಿಗೆ ಮಾತುಕತೆ ನಡೆಸಿ ಸಿಬ್ಬಂದಿಗೆ ಕೂಡಲೇ ಮೂರು ತಿಂಗಳ ವೇತನ ಬಿಡುಗಡೆ ಮಾಡುವಂತೆ ಸೂಚಿಸಿತ್ತು. ಆರೋಗ್ಯ ಇಲಾಖೆ ಆಯುಕ್ತರ ಸೂಚನೆಯ ಮೇರೆಗೆ ಜಿವಿಕೆ ಕೇವಲ ಒಂದು ತಿಂಗಳ ವೇತನ ಪಾವತಿಸಿದ್ದರು. ಉಳಿದ ವೇತನ ಬಿಡುಗಡೆ ಮಾಡದೆ ಜಿವಿಕೆಯವರು ಸತಾಯಿಸುತ್ತಿದ್ದಾರೆ ಎಂದು ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹದಿನೈದು ದಿನಗಳ ಹಿಂದೆ ನಡೆದ ಸಭೆಯಲ್ಲಿ ಸಂಬಳ ನೀಡಲು ಆರೋಗ್ಯ ಇಲಾಖೆ ಅಯುಕ್ತ ರಂದೀಪ್ ಸೂಚಿಸಿದ್ದರು. ಆದರೆ, ಜಿವಿಕೆ ಸಂಸ್ಥೆಯವರು ವೇತನ ಬಿಡುಗಡೆಗೆ ಮೀನಾಮೇಷ ಎಣಿಸುತ್ತಿದ್ದಾರೆ. ಹಾಗಾಗಿ ನಾಳೆ ಸಂಜೆ ವೇಳೆಗೆ ಬಾಕಿ ಇರುವ ಮೂರು ತಿಂಗಳ ವೇತನ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಗುರುವಾರದಿಂದ ಆ್ಯಂಬುಲೆನ್ಸ್ ಸೇವೆ ಸ್ಥಗಿತಗೊಳಿಸಲಾಗುವುದು ಎಂದು ಆ್ಯಂಬುಲೆನ್ಸ್ ನೌಕರರ ಸಂಘದ ಕಾರ್ಯದರ್ಶಿ ಪರಮಶಿವಯ್ಯ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: 108 ಆರೋಗ್ಯ ಕವಚ ಸಿಬ್ಬಂದಿಗೆ ಇಲ್ಲದ ದಸರಾ ಹಬ್ಬದ ಸಂಭ್ರಮ : ಎರಡು ತಿಂಗಳಿಂದ ಸಂಬಳ ನೀಡದ ಜಿವಿಕೆ ಸಂಸ್ಥೆ
ರಾಜ್ಯದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಮಂದಿ ಸಿಬ್ಬಂದಿ 108 ಆ್ಯಂಬುಲೆನ್ಸ್ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಸುಮಾರು 750 ಆ್ಯಂಬುಲೆನ್ಸ್ ವಾಹನಗಳಿವೆ. ಒಂದು ವೇಳೆ ಜಿವಿಕೆ ಸಂಸ್ಥೆಯವರು ನಾಳೆ ಸಂಜೆ ವೇಳೆಗೆ ವೇತನ ಬಿಡುಗಡೆ ಮಾಡದಿದ್ದರೆ, ಗುರುವಾರದಿಂದ ರೋಗಿಗಳಿಗೆ ಬಿಸಿ ತಟ್ಟಲಿದೆ.