ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಿವಾಸಕ್ಕೆ ಆಗಮಿಸಿದ ಶಾಸಕ ಜಿ.ಟಿ.ದೇವೇಗೌಡ ಸಮಾಲೋಚನೆ ನಡೆಸಿದರು.
ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ.ಟಿ.ಡಿ ಪ್ರಮುಖ ವಕ್ಕಲಿಗ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಸದ್ಯ ಜೆಡಿಎಸ್ ಪಕ್ಷದಲ್ಲಿದ್ದರೂ ಅದರಿಂದ ಅವರು ಅಂತರ ಕಾಯ್ದುಕೊಂಡಿದ್ದಾರೆ. ಸದಾಶಿವನಗರದಲ್ಲಿ ಇರುವ ಡಿ.ಕೆ.ಶಿ ನಿವಾಸಕ್ಕೆ ಆಗಮಿಸಿದ ಅವರು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದಾರೆ.
ನಾವೇ ಇಳಿಸೋಕೆ ಪ್ರಯತ್ನ ಮಾಡ್ತಿದ್ವಾ?
ಇದೇ ಸಂದರ್ಭ ಮಾಧ್ಯಮಗಳಿಗೆ ಮಾತನಾಡಿದ ಅವರು, "ನಾನು ಉಪಮುಖ್ಯಮಂತ್ರಿ ಆಗೋದಾಗಿದ್ರೆ ಬಿಜೆಪಿಯಿಂದ ಆಗಲೇ ಆಗಬಹುದಿತ್ತು. ಮೊದಲೇ ನನಗೆ ಬಿಜೆಪಿಯಿಂದ ಆಫರ್ ಬಂದಿತ್ತು. ನಾವು ಕುಮಾರಸ್ವಾಮಿ ಅವರನ್ನು ಸಿಎಂ ಮಾಡಿದ್ವಿ. ಐದು ವರ್ಷ ಅವರೇ ಇರ್ಬೇಕು ಅಂತ ಬಯಸಿದ್ವಿ. ನಾವೇ ಮಾಡಿ ನಾವೇ ಇಳಿಸೋಕೆ ಪ್ರಯತ್ನ ಮಾಡ್ತಿದ್ವಾ?. ಇನ್ನೂ ಎರಡೂವರೆ ವರ್ಷ ಇದೆ, ಮುಂದೆ ನೋಡೋಣ" ಎಂದರು.
"ಡಿ.ಕೆ.ಶಿ ಕುಟುಂಬ ಮತ್ತು ಸ್ನೇಹಿತರು ಸೇರಿ ಒಟ್ಟು 14 ಕಡೆ ಸಿಬಿಐ ದಾಳಿ ಆಗಿತ್ತು. ನಾನು ಮತ್ತು ಡಿಕೆಶಿ ಬಹಳ ವರ್ಷಗಳಿಂದ ಸ್ನೇಹಿತರು. ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಪ್ರಯತ್ನಿಸಿದ್ದವರು. ಬಾಂಬೆಗೆ ಸಹ ಹೋಗಿದ್ವಿ. ಚುನಾವಣೆ ಸಮಯದಲ್ಲಿ ರೈಡ್ ಮಾಡಬಾರದು. ರೈಡ್ ಮಾಡಿದ್ದು ತಪ್ಪು, ಇದು ನನ್ನ ವೈಯಕ್ತಿಕ ಅಭಿಪ್ರಾಯ. ಜೊತೆಗೆ ಡಿ.ಕೆ.ಶಿರವರ ಶ್ರೀಮತಿ ನಮ್ಮ ಮೈಸೂರಿನವರು" ಎಂದರು.
ಜೆಡಿಎಸ್ನಿಂದ ದೂರ ಉಳಿದ ವಿಚಾರ ಮಾತನಾಡಿ, "ಎಲ್ಲವೂ ನಿಮಗೆ ಗೊತ್ತಿದೆ. ಮುಂದಿನ ಚುನಾವಣೆಯಲ್ಲಿ ನನ್ನ ಸ್ಪರ್ಧೆ ನಿರ್ಧಾರ ಮಾಡುವವರು ಚಾಮುಂಡೇಶ್ವರಿ ಕ್ಷೇತ್ರದ ಜನರು. ಮುಂದಿನ ಚುನಾವಣೆಯಲ್ಲಿ ಜೆಡಿಎಸ್ನಲ್ಲಿ ನಿಲ್ಲುತ್ತೇನೊ, ಬಿಜೆಪಿನಲ್ಲಿ ನಿಲ್ಲುತ್ತೇನೊ ಅಥವಾ ಕಾಂಗ್ರೆಸ್ನಲ್ಲಿ ನಿಲ್ಲುತ್ತೇನೊ ಗೊತ್ತಿಲ್ಲ. ಅದನ್ನು ಕ್ಷೇತ್ರದ ಜನತೆಗೆ ಬಿಡುತ್ತೇನೆ. ಒಂದು ಕಾಲು ಲಕ್ಷ ವೋಟ್ಗಳನ್ನು ನನ್ನ ಜನ ನನಗೆ ಕೊಟ್ಟಿದ್ದಾರೆ" ಎಂದರು.