ಬೆಂಗಳೂರು: ಗಡಿಯಲ್ಲಿ ಸೈನಿಕರು ದೇಶ ಕಾಯುತ್ತಿದ್ದರೆ, ದೇಶದೊಳಗೆ ಜೀವ ಉಳಿಸುವ ಕೆಲಸವನ್ನು ವೈದ್ಯರು ಮಾಡುತ್ತಿದ್ದಾರೆ. ತಮ್ಮ ಜೀವವನ್ನು ಮುಡಿಪಾಗಿಟ್ಟು ಮತ್ತೊಂದು ಜೀವ ಉಳಿಸಲು ಹೋರಾಡುತ್ತಿರುವ ವೈದ್ಯರು ದೇವರಿಗೆ ಸಮಾನ ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದ್ದಾರೆ.
ವೈದ್ಯ ದಿನದ ಪ್ರಯಕ್ತ ವೈದ್ಯರಿಗೆ ಶುಭಾಶಯ ತಿಳಿಸಿ ಮಾತನಾಡಿದ ಅವರು, ಈ ಹಿಂದೆ ಚಿಕುನ್ ಗುನ್ಯಾ, ಹೆಚ್1 ಎನ್ 1 ಬಂದಾಗಲೂ ಮುಂದಿನ ಸಾಲಿನಲ್ಲಿ ನಿಂತು ಕೆಲಸ ಮಾಡಿದವರು ವೈದ್ಯರು. ಕಣ್ಣಿಗೆ ಕಾಣದ ಕೋವಿಡ್ ವೈರಸ್ ವಿರುದ್ಧ ಎದೆಗುಂದದೆ ಚಿಕಿತ್ಸಾ ಸೇವೆ ನೀಡುತ್ತಿರುವುದು ನಿಜಕ್ಕೂ ಸಂತಸದ ವಿಷಯ ಎಂದರು.
ಇದರಲ್ಲಿ ವೈದ್ಯರ ಕುಟುಂಬಸ್ಥರ ಪಾತ್ರವೂ ಅತೀ ಮುಖ್ಯವಾಗಿದೆ. ಸೈನಿಕರ ಕುಟುಂಬಸ್ಥರು ಹೇಗೆ ಅವರನ್ನು ಸಜ್ಜುಗೊಳಿಸಿ ದೇಶ ಕಾಯಲು ಕಳುಹಿಸುತ್ತಾರೋ, ಹಾಗೆಯೇ ವೈದ್ಯರುಗಳ ಕುಟುಂಬಸ್ಥರು ಇತರರ ಪ್ರಾಣ ಉಳಿಸಲು ಅವರನ್ನು ಕಳುಹಿಸುತ್ತಿದ್ದಾರೆ. ಅವರಿಗೆ ನಮ್ಮದೊಂದು ಸಲಾಂ ಎಂದು ಹೇಳಿದರು.