ಬೆಂಗಳೂರು : ರೆಡ್ ಕ್ರಾಸ್ ಸಂಸ್ಥೆಯು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಅಂತಾರಾಷ್ಟ್ರೀಯ ಸೇವಾ ಸಂಸ್ಥೆಯಾಗಿದೆ. ಇದರೊಂದಿಗೆ ರೋಟರಿ ಸಂಸ್ಥೆ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಶಾಖೆಯ ಅಧ್ಯಕ್ಷ ಥಾವರ್ ಚಂದ್ ಗೆಹ್ಲೋಟ್ ಸಾರ್ವಜನಿಕ ಸ್ಥಳಗಳಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರಗಳನ್ನು ಆಯೋಜಿಸಲು ಸಹಕಾರಿಯಾಗುವ ಸಂಚಾರಿ ರಕ್ತ ಸಂಗ್ರಹಣ ವಾಹನಕ್ಕೆ ಬುಧವಾರ ರಾಜಭವನದಲ್ಲಿ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯಪಾಲ ಗೆಹ್ಲೋಟ್, ರೆಡ್ ಕ್ರಾಸ್ ಸಂಸ್ಥೆಯು ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವ ಅಂತಾರಾಷ್ಟ್ರೀಯ ಸೇವಾ ಸಂಸ್ಥೆಯಾಗಿದೆ. ಇವರೊಂದಿಗೆ ರೋಟರಿ ಸಂಸ್ಥೆ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು.
ರಕ್ತ ಒದಗಿಸುವ ಕಾರ್ಯಕ್ಕೆ ಸಂಜೀವಿನಿ : ಕೋವಿಡ್-19 ಸೋಂಕಿನ ಪರಿಣಾಮ, ಸ್ವಯಂಪ್ರೇರಿತ ರಕ್ತದಾನ ಶಿಬಿರಗಳನ್ನು ಆಯೋಜಿಸುತ್ತಿದ್ದ ಬಹುತೇಕ ಸಂಸ್ಥೆಗಳಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರಗಳು ಇಳಿಮುಖವಾಗಿವೆ. ಸಂಚಾರಿ ರಕ್ತ ಸಂಗ್ರಹಣಾ ವಾಹನದ ಲಭ್ಯತೆಯೂ ರಕ್ತ ಅಗತ್ಯವಿರುವವರಿಗೆ ರಕ್ತ ಒದಗಿಸುವ ಕಾರ್ಯಕ್ಕೆ ಸಂಜೀವಿನಿಯಾಗಿದೆ ಎಂದು ಹೇಳಿದರು.
100ಕ್ಕೂ ಹೆಚ್ಚು ರಕ್ತದ ಯೂನಿಟ್ ಸಂಗ್ರಹ : ಸಾರ್ವಜನಿಕ ಸ್ಥಳಗಳಲ್ಲಿ ರಕ್ತದ ಅಗತ್ಯತೆಯ ಬಗ್ಗೆ ಅರಿವು ಮೂಡಿಸುವುದು, ರಕ್ತದಾನ ಮಾಡಲು ಪ್ರೇರೇಪಿಸುವುದರ ಮೂಲಕ ರಕ್ತ ಸಂಗ್ರಹಣೆ ಮಾಡುವುದು ಸಂಚಾರಿ ರಕ್ತ ಸಂಗ್ರಹಣಾ ವಾಹನದ ಮೂಲ ಉದ್ದೇಶ. ಏಕಕಾಲದಲ್ಲಿ ನಾಲ್ಕು ಮಂದಿ ರಕ್ತದಾನ ಮಾಡಲು ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಹೊಂದಿರುವುದು ಈ ವಾಹನದ ವಿಶೇಷತೆ. ಒಂದು ದಿನದಲ್ಲಿ ಸುಮಾರು 100ಕ್ಕೂ ಹೆಚ್ಚು ರಕ್ತದ ಯೂನಿಟ್ಗಳನ್ನು ಸಂಗ್ರಹಿಸುವ ಸಾಮರ್ಥ್ಯವನ್ನು ಈ ವಾಹನವು ಒಳಗೊಂಡಿದೆ ಎಂದರು.
46 ಲಕ್ಷ ರೂ. ಮೌಲ್ಯದ ಸಂಚಾರಿ ರಕ್ತಸಂಗ್ರಹಣ ವಾಹನವನ್ನು ರೋಟರಿ ಬೆಂಗಳೂರು ದಕ್ಷಿಣ ಸಂಸ್ಥೆಯು ಭಾರತೀಯ ರೆಡ್ಕ್ರಾಸ್ ಸಂಸ್ಥೆಗೆ ದಾನವಾಗಿ ನೀಡಿದೆ. ಕಾರ್ಯಕ್ರಮದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕರ್ನಾಟಕ ರಾಜ್ಯ ಶಾಖೆಯ ಸಭಾಪತಿಗಳಾದ ಎಸ್ ನಾಗಣ್ಣ, ಉಪಸಭಾಪತಿಗಳಾದ ಡಾ.ಕುಮಾರ್ ವಿಎಲ್ಎಸ್ ರಾಜ್ಯಪಾಲರಿಂದ ನಾಮನಿರ್ದೇಶನಗೊಂಡ ಬಾಲಕೃಷ್ಣ ಶೆಟ್ಟಿ ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ಹೆಚ್ ಎಸ್ ಬಾಲಸುಬ್ರಹ್ಮಣ್ಯ ಉಪಸ್ಥಿತರಿದ್ದರು.
ಓದಿ: ಕೋವಿಡ್ನಿಂದ ಮಕ್ಕಳ ಸಾಮಾನ್ಯ ಲಸಿಕೆಯಲ್ಲಿಯೂ ವಿಳಂಬದ ಎಫೆಕ್ಟ್ : ಹೆಚ್ಚಿದ ಚಿಣ್ಣರ ಸೋಂಕಿನ ಪ್ರಕರಣಗಳು