ಬೆಂಗಳೂರು : ಕೋವಿಡ್ ಲಸಿಕೆ ವಿತರಣೆಗೆ ರಾಜ್ಯದಲ್ಲಿ ಮೂರು ಸಮಿತಿಗಳ ರಚನೆಗೆ ನಿರ್ಧರಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದರು.
ಲಸಿಕೆ ವಿತರಣೆ ಪೂರ್ವ ಸಿದ್ಧತೆ, ಕೋವಿಡ್ ಸ್ಥಿತಿಗತಿ ಸಂಬಂಧ ಪ್ರಧಾನಿ ಮೋದಿ ಜೊತೆಗಿನ ವರ್ಚುವಲ್ ಸಭೆ ಬಳಿಕ ಮಾತನಾಡಿದ ಅವರು, ಸಿಎಂ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಉಸ್ತುವಾರಿ ಮಟ್ಟದ ಸಮಿತಿಗಳ ರಚನೆಗೆ ನಿರ್ಧರಿಸಲಾಗಿದೆ. ಲಸಿಕೆ ಹಂಚಿಕೆಗೆ ಬೂತ್ಗಳ ರಚನೆ ಮಾಡಲಾಗುತ್ತದೆ. ಚುನಾವಣಾ ಬೂತ್ಗಳ ಮಾದರಿಯಲ್ಲಿ ವಿತರಣಾ ಕೇಂದ್ರಗಳ ರಚನೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಕೋವಿಡ್ ಲಸಿಕೆ ವಿತರಣೆ ಬಗ್ಗೆ ಪ್ರಧಾನಿ ಜೊತೆ ಚರ್ಚಿಸಲಾಗಿದೆ. ಹೆಚ್ಚು ಕೋವಿಡ್ ಪ್ರಕರಣಗಳಿರುವ ಮತ್ತು ಕಡಿಮೆ ಪ್ರಕರಣಗಳಿರುವ ರಾಜ್ಯಗಳ ಜೊತೆ ಸಭೆ ನಡೆಸಲಾಗಿದೆ. ನೀತಿ ಆಯೋಗದ ಸದಸ್ಯರು ಡಾ.ವಿ.ಕೆ.ಪೌಲ್ ಲಸಿಕೆ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ. ಯಾವ್ಯಾವ ದೇಶಗಳಲ್ಲಿ ಯಾವ ರೀತಿ ಲಸಿಕೆ ತಯಾರಿಸಲಾಗುತ್ತದೆ ಎಂಬುವುದರ ಕುರಿತು ಮಾಹಿತಿ ನೀಡಿದ್ದಾರೆ.
ಜಗತ್ತಿನಾದ್ಯಂತ ಹಲವೆಡೆ ಲಸಿಕೆ ತಯಾರಾಗ್ತಿವೆ, 50 ಲಸಿಕೆಗಳು ಕ್ಲಿನಿಕಲ್ ಸಂಶೋಧನೆಗಳ ಹಂತದಲ್ಲಿವೆ. 25 ಲಸಿಕೆಗಳು ಅಡ್ವಾನ್ಸ್ ಟ್ರಯಲ್ನಲ್ಲಿವೆ. 5 ಲಸಿಕೆಗಳು ಕ್ಲಿನಿಕಲ್ ಟ್ರಯಲ್ನಲ್ಲಿವೆ. ಭಾರತದಲ್ಲಿ 24 ಸಂಸ್ಥೆಗಳಿಗೆ ಲಸಿಕೆ ತಯಾರಿಸುವ ಸಾಮರ್ಥ್ಯವಿದೆ ಎಂದು ತಿಳಿಸಿದರು.
![Government prepadness for covid vaccine delivery](https://etvbharatimages.akamaized.net/etvbharat/prod-images/9647515_.jpg)
ದೇಶದಲ್ಲಿ ಆರಂಭದಲ್ಲಿ 30 ಕೋಟಿ ಜನರಿಗೆ ಲಸಿಕೆ ವಿತರಣೆ ಮಾಡುವ ಉದ್ದೇಶವಿದೆ. ಈ ಪೈಕಿ 1 ಕೋಟಿ ಆರೋಗ್ಯ ಕಾರ್ಯಕರ್ತರು ಮತ್ತು 2 ಕೋಟಿ ಕೊರೊನಾ ವಾರಿಯರ್ಸ್ಗೆ ಲಸಿಕೆ ಹಾಕಲಾಗುವುದು. 26 ಕೋಟಿ 50 ರಿಂದ 60 ವಯೋಮಿತಿಯವರಿಗೆ ಲಸಿಕೆ ಕೊಡುವ ಉದ್ದೇಶವಿದೆ ಎಂದು ವಿವರಿಸಿದರು.