ಬೆಂಗಳೂರು: ಕೊರೊನಾ ಸೋಂಕು ತಗುಲಿದ ಕಾರಣ ಆಸ್ಪತ್ರೆಗೆ ಕರೆದೊಯ್ಯಲು ಪಾಲಿಕೆ ಆರೋಗ್ಯ ವಿಭಾಗದ ಸಿಬ್ಬಂದಿ ಮನೆ ಬಳಿ ಬಂದಾಗ ಸಹಕಾರ ನೀಡದ ಆರೋಪದ ಮೇಲೆ ಪಾದರಾಯನಪುರ ಕಾರ್ಪೊರೇಟರ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪಶ್ಚಿಮ ವಿಭಾಗ ಡಿಸಿಪಿ ರಮೇಶ್ ಬಾನೋತ್, ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಜನರ ಮಧ್ಯೆ ತನಗೆ ಕೊರೊನಾ ಇರುವುದನ್ನ ಲೆಕ್ಕಿಸದೇ ಕಾರ್ಪೊರೇಟರ್ ಜನರನ್ನು ಸೇರಿಸಿಕೊಂಡು ಓಡಾಡಿದ್ದಾರೆ. ಇದಕ್ಕಾಗಿ ಐಪಿಸಿ ಸೆಕ್ಷನ್ 143, 270, 271, 188, ಹಾಗೂ NDMA (ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ )ಅಡಿಯಲ್ಲಿ ಜೆ.ಜೆ. ನಗರ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಕಾರ್ಪೊರೇಟರ್ ನಿರ್ಲಕ್ಷ್ಯದಿಂದ ಮನೆಯಲ್ಲೇ ಇರುವುದಾಗಿ ಹೇಳಿದ್ದರು. ಕೊರೊನಾ ಸಾಂಕ್ರಾಮಿಕ ರೋಗವಾಗಿದ್ದು ಮನೆಯಲ್ಲೇ ಉಳಿದುಕೊಂಡರೆ ಇತರರಿಗೂ ಹರಡುವ ಸಾಧ್ಯತೆ ಇದೆ.
ಕೊರೊನಾ ಬಂದರೂ ಕಾರ್ಪೊರೇಟರ್ ರೋಡ್ ಶೋ... ನೆಟ್ಟಿಗರಿಂದ ತರಾಟೆ
ಹೀಗಾಗಿ ಪಾದರಾಯನಪುರ ಕಾರ್ಪೊರೇಟರ್ ವಿರುದ್ಧ ಬಿಬಿಎಂಪಿ ಆರೋಗ್ಯಾಧಿಕಾರಿಗಳು ದೂರು ನೀಡಿದ್ದರು. ಇನ್ನು ಆಸ್ಪತ್ರೆಗೆ ತೆರಳುವಾಗ ಬೆಂಬಲಿಗರನ್ನು ಸೇರಿಸಿರುವ ಆರೋಪ ಕೂಡ ಇದೆ. ಹೆಚ್ಚಿನ ಜನ ಸೇರಲು ಕಾರಣವಾಗಿದ್ದ ಹಿನ್ನೆಲೆ NDMA ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಡಿಸಿಪಿ ತಿಳಿಸಿದರು.