ಬೆಂಗಳೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿಯನ್ನೇ ಪತಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ರಾಜಗೋಪಾಲನಗರದ ಬಸಪ್ಪನ ಕಟ್ಟೆ ಬಳಿ ನಡೆದಿದೆ.

ಸರಸ್ವತಿ ಮೃತ ದುರ್ದೈವಿ. 15 ವರ್ಷದ ಹಿಂದೆ ಮಲ್ಲಿಕಾರ್ಜುನ ಎಂಬಾತನ ಜೊತೆ ಸರಸ್ವತಿ ಮದ್ವೆಯಾಗಿದ್ದಳು. ಇಬ್ಬರು ಮಕ್ಕಳಿರುವ ಇವರ ಸಂಸಾರ ಮೊದ ಮೊದಲು ಚೆನ್ನಾಗಿಯೇ ಇತ್ತು. ನಂತರ ಕೌಟುಂಬಿಕ ಕಲಹದ ಹಿನ್ನೆಲೆ ಅವರಿಬ್ಬರ ನಡುವೆ ಹೊಂದಾಣಿಕೆ ಕಡಿಮೆಯಾಗಿತ್ತು. ಸಣ್ಣ ಪುಟ್ಟ ವಿಚಾರಕ್ಕೂ ಕಿರಿಕ್ ಶುರುವಾಗಿತ್ತು ಎನ್ನಲಾಗಿದೆ. ಕಳೆದ ಮೂರು ವರ್ಷದಿಂದ ಗಂಡ ಮಲ್ಲಿಕಾರ್ಜುನ್ ಆರೇಳು ತಿಂಗಳಿಗೊಮ್ಮೆ ಮನೆಗೆ ಬರುತ್ತಿದ್ದನಂತೆ. ನೆನಪಾದಾಗ ಪತ್ನಿಯ ಬಳಿ ಬರುತ್ತಿದ್ದವನು ನಿನ್ನೆ ಕೊಲೆಯನ್ನೇ ಮಾಡಿ ಬಿಟ್ಟಿದ್ದಾನೆ.
ನಿನ್ನೆ ತಡರಾತ್ರಿ ಬಂದವನೇ ಮತ್ತೆ ಹಣಕ್ಕಾಗಿ ಕಿರಿಕ್ ತೆಗೆದಿದ್ದನಂತೆ. ವಿಪರೀತ ಕುಡಿದಿದ್ದರಿಂದ ನಶೆಯಲ್ಲಿ ಅಲ್ಲೆ ಇದ್ದ ಮಚ್ಚಿನಿಂದ ಕೊಚ್ಚಿ ಪತ್ನಿಯನ್ನ ಹತ್ಯೆಗೈದಿದ್ದಾನೆ ಎನ್ನಲಅಗಿದೆ. ಕೂಗಾಟ ಕೇಳಿ ಅಕ್ಕಪಕ್ಕದ ಮನೆಯವರು ವಿಚಾರಿಸಲು ಬಂದಾಗ ಅವರ ಮುಂದೆಯೇ ಅಲ್ಲಿಂದ ಎಸ್ಕೇಪ್ ಆಗಿದ್ದ. ತಕ್ಷಣ ಸ್ಥಳೀಯರು ರಾಜಾಗೋಪಲನಗರ ಪೊಲೀಸರಿಗೆ ಮಾಹಿತಿ ನೀಡಿದ್ದು, ಸದ್ಯ ಆರೋಪಿಯನ್ನು ಪೊಲೀಸರು ತಮ್ಮ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.