ಬೆಂಗಳೂರು: ಮೈತ್ರಿ ಸರ್ಕಾರದಲ್ಲಿ ಸಚಿವರಾಗಿದ್ದ ಹಲವರು ತಮ್ಮ ಸರ್ಕಾರಿ ಬಂಗ್ಲೆ ಖಾಲಿ ಮಾಡದಿರುವುದು ಹಾಲಿ ಸಚಿವರುಗಳಿಗೆ ಸರ್ಕಾರಿ ಬಂಗ್ಲೆಯಲ್ಲಿ ವಾಸ ಮಾಡಲಾಗದಂತಹ ಪರಿಸ್ಥಿತಿ ಇದೆ.
ಬೆಂಗಳೂರಿನ ಸೆವೆನ್ ಮಿನಿಸ್ಟರ್ಸ್ ಕ್ವಾಟರ್ಸ್, ತ್ರೀ ಮಿನಿಸ್ಟರ್ಸ್ ಕ್ವಾಟರ್ಸ್ ಮತ್ತಿತರ ಕಡೆಗಳಲ್ಲಿ ಮೈತ್ರಿ ಸರ್ಕಾರದಲ್ಲಿ ಸಚಿವರಾಗಿದ್ದವರು ಮನೆಗಳನ್ನು ಪಡೆದಿದ್ದು, ಇದುವರೆಗೂ ಖಾಲಿ ಮಾಡಿಲ್ಲ. ಸರ್ಕಾರ ಪತನವಾಗಿ ಒಂದೂವರೆ ತಿಂಗಳು ಕಳೆದಿದ್ದು ನೂತನ ಸಚಿವರಿಗೆ ಖಾತೆ ಹಂಚಿಕೆಯಾಗಿ 15 ದಿನ ಕಳೆಯುತ್ತಿದೆ. ವಾರದ ಹಿಂದೆಯೇ ನೂತನ ಸಚಿವರಿಗೆ ಮನೆಗಳನ್ನು ಹಂಚಿಕೆ ಮಾಡಲಾಗಿದ್ದು ಸಿಎಂ, ಡಿಸಿಎಂ ಸೇರಿದಂತೆ ಹಲವು ಸಚಿವರು ತಮಗೆ ನೀಡಲಾದ ಮನೆಗಳನ್ನು ಪಡೆಯಲಾಗದೇ ಹೋಗಿದ್ದಾರೆ.
ಈಗಾಗಲೇ ಡಿಪಿಎಆರ್ನಿಂದ ಬಂಗ್ಲೆಗಳ ಹಂಚಿಕೆಯಾಗಿದ್ದು, ಅಧಿಕಾರಿಗಳು ಸರ್ಕಾರಿ ನಿವಾಸದಲ್ಲಿ ಇರುವ ಮಾಜಿ ಸಚಿವರಿಗೆ ಆದಷ್ಟು ಬೇಗ ಮನೆ ಖಾಲಿ ಮಾಡುವಂತೆ ಮಾಹಿತಿ ರವಾನಿಸಿದ್ದರು. ಆದರೂ ಮಾಜಿ ಸಚಿವರುಗಳು ಕ್ಯಾರೆ ಎನ್ನುತ್ತಿಲ್ಲ. ಖಾಲಿ ಮಾಡೋಕೆ ಇನ್ನು ಅವಕಾಶವಿದೆ ಅನ್ನೋ ಉತ್ತರ ನೀಡುತ್ತಿದ್ದಾರೆ ಎನ್ನಲಾಗಿದೆ.
ಇದಕ್ಕೆ ಕಾರಣ ಹುಡುಕಿ ಹೊರಟರೆ ಸರ್ಕಾರಿ ಬಂಗ್ಲೆ ಖಾಲಿ ಮಾಡೋಕೆ ಮಾಜಿಗಳಿಗೆ ಇಷ್ಟವಿಲ್ಲ ಹಾಗೂ ನೆಮ್ಮದಿಯಾಗಿದ್ದ ತಮ್ಮ ಸರ್ಕಾರವನ್ನು ವಾಮಮಾರ್ಗದಿಂದ ಬಿಜೆಪಿ ಉರುಳಿಸಿದ್ದು, ಈ ಸಿಟ್ಟನ್ನು ತೀರಿಸಿಕೊಳ್ಳುವ ನಿಟ್ಟಿನಲ್ಲಿ ಕೆಲವರು ಮನೆ ಖಾಲಿ ಮಾಡುತ್ತಿಲ್ಲ ಎನ್ನಲಾಗುತ್ತಿದೆ.
ಸಪ್ತ ಸಚಿವರ ಕ್ವಾಟ್ರಸ್ನಲ್ಲಿಯೇ ಮಾಜಿ ಸಚಿವರಾದ ರಮೇಶ್ ಜಾರಕಿಹೊಳಿ, ಶಿವಾನಂದ ಪಾಟೀಲ್, ಪ್ರಿಯಾಂಕ ಖರ್ಗೆ, ಎಂ.ಸಿ.ಮನಗೂಳಿ, ಬಂಡೆಪ್ಪ ಕಾಶೆಂಪುರ್ ಸರ್ಕಾರಿ ಬಂಗ್ಲೆ ಖಾಲಿ ಮಾಡಿಲ್ಲ. ಪಕ್ಕದಲ್ಲಿರುವ ಜಮೀರ್, ರಾಜಶೇಖರ್ ಪಾಟೀಲ್ ಕೂಡ ತೆರವು ಮಾಡಿಲ್ಲ. ಸಿಎಂ ಬಿಎಸ್ ಯಡಿಯೂರಪ್ಪ, ಡಿಸಿಎಂಗಳಾದ ಡಾ. ಅಶ್ವಥ್ ನಾರಾಯಣ್, ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ ಸಚಿವರಾದ ಕೆಎಸ್ ಈಶ್ವರಪ್ಪ, ಜಗದೀಶ್ ಶೆಟ್ಟರ್, ಜೆಸಿ ಮಾಧುಸ್ವಾಮಿ ಸಿಟಿ ರವಿ, ವಿ ಸೋಮಣ್ಣ, ಬಿ ಶ್ರೀರಾಮುಲು, ಉತ್ತರ ಕರ್ನಾಟಕ ಭಾಗದ ಸಚಿವರಾದ ಪ್ರಭು ಚವ್ಹಾಣ್, ಸಿ.ಸಿ.ಪಾಟೀಲ್, ಕೋಟಾ ಶ್ರೀನಿವಾಸ ಪೂಜಾರಿ ಬಂಗ್ಲೆಗಾಗಿ ಕಾಯುತ್ತಿದ್ದಾರೆ.
ತಾವು ಮನೆ ಖಾಲಿ ಮಾಡಲು ಮೂರು ತಿಂಗಳ ಕಾಲಾವಕಾಶ ಇದ್ದು, ಒತ್ತಾಯಮಾಡಿ ಮನೆ ಖಾಲಿ ಮಾಡಿಸಲು ಸಾಧ್ಯವಿಲ್ಲ ಎಂದು ಮಾಜಿ ಸಚಿವರುಗಳು ವಾದ ಮಾಡುತ್ತಿದ್ದು, ಇದಕ್ಕೆ ಸರ್ಕಾರ ಯಾವ ರೀತಿ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.