ಬೆಂಗಳೂರು: ರಾಜ್ಯ ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ನೀಡಿದ್ದ ಕರ್ನಾಟಕದ "ಸಾರ್ವಭೌಮತ್ವ" ಹೇಳಿಕೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿರುವ ಪೋಸ್ಟ್ಗಳನ್ನು ಸರಿಪಡಿಸುವಂತೆ ಹಾಗೂ ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಸೂಚಿಸಿ ಚುನಾವಣಾ ಆಯೋಗ ಸೋಮವಾರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದಿದೆ.
ಬಿಜೆಪಿ ಮುಖಂಡರಾದ ಭೂಪೇಂದರ್ ಯಾದವ್, ಡಾ.ಜಿತೇಂದ್ರ ಸಿಂಗ್, ತರುಣ್ ಚುಗ್, ಅನಿಲ್ ಬಲುನಿ ಮತ್ತು ಓಂ ಪಾಠಕ್ ಅವರು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಕಾಂಗ್ರೆಸ್ ಮಾಡಿರುವ ಟ್ವೀಟ್ 1951 ರ ಜನತಾ ಪ್ರಾತಿನಿಧ್ಯ ಕಾಯಿದೆಯ ಸೆಕ್ಷನ್ 29A (5) ಅಡಿಯಲ್ಲಿ ರಾಜಕೀಯ ಪಕ್ಷಗಳು ಕೈಗೊಳ್ಳುವ ಕಡ್ಡಾಯ ಪ್ರಮಾಣ ವಚನದ ಉಲ್ಲಂಘನೆ ಎಂದು ದೂರಿನಲ್ಲಿ ಉಲ್ಲೇಖಿಸಿದೆ.
ಕರ್ನಾಟಕಕ್ಕೆ "ಸಾರ್ವಭೌಮತ್ವ" ಎಂಬ ಪದವನ್ನು ಬಳಸಿದ ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ ತೀವ್ರಗೊಳಿಸಿದ ಬೆನ್ನಲ್ಲೇ ಈ ನೋಟಿಸ್ ಬಂದಿದೆ. ಸೋನಿಯಾ ಗಾಂಧಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಾಗೂ ಅವರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಬಿಜೆಪಿ ಒತ್ತಾಯಿಸಿದೆ. ಕರ್ನಾಟಕ ವಿಧಾನಸಭೆಗೆ ಮೇ 10 ರಂದು ಮತದಾನ ನಡೆಯಲಿದೆ. ಇದಕ್ಕೂ ಮುನ್ನ ಕೇಂದ್ರ ಸಚಿವ ಭೂಪೇಂದರ್ ಯಾದವ್ ನೇತೃತ್ವದ ಬಿಜೆಪಿ ನಿಯೋಗ ದೆಹಲಿಯಲ್ಲಿ ಚುನಾವಣಾ ಸಮಿತಿಗೆ ಮನವಿ ಸಲ್ಲಿಸಿತು. "ಕರ್ನಾಟಕವು ಭಾರತದ ಒಕ್ಕೂಟದಲ್ಲಿ ಅತ್ಯಂತ ಪ್ರಮುಖ ಸದಸ್ಯ ರಾಜ್ಯವಾಗಿದೆ ಮತ್ತು ಭಾರತದ ಒಕ್ಕೂಟದ ಸದಸ್ಯ ರಾಜ್ಯದ ಸಾರ್ವಭೌಮತ್ವವನ್ನು ರಕ್ಷಿಸುವ ಯಾವುದೇ ಕರೆ ಪ್ರತ್ಯೇಕತೆಯ ಕರೆಗೆ ಸಮಾನವಾಗಿರುತ್ತದೆ. ಇದು ಅಪಾಯಕಾರಿ ಹಾಗೂ ವಿನಾಶಕಾರಿ ಪರಿಣಾಮಗಳಿಂದ ಕೂಡಿದೆ" ಎಂದು ಬಿಜೆಪಿ ಹೇಳಿದೆ.
ದೂರಿನ ಸಂಪೂರ್ಣ ವಿವರ: ಕಾಂಗ್ರೆಸ್ ಟ್ವೀಟ್ಗಳನ್ನು ಉಲ್ಲೇಖಿಸಿದ ಬಿಜೆಪಿ "ಒಂದು ದೇಶ ಸ್ವತಂತ್ರವಾದಾಗ ಆ ದೇಶವನ್ನು ಸಾರ್ವಭೌಮ ದೇಶ ಎಂದು ಕರೆಯುತ್ತಾರೆ. ಭಾರತ ಸಾರ್ವಭೌಮ ರಾಷ್ಟ್ರವಾಗಿದ್ದು, ಕರ್ನಾಟಕ ರಾಜ್ಯವು ಅದರ ಭಾಗವಾಗಿದೆ. ರಾಷ್ಟ್ರದ ಸಾರ್ವಭೌಮತ್ವದೊಂದಿಗೆ ಕನ್ನಡಿಗರ ಸಮಗ್ರತೆಯ ಬಗ್ಗೆ ಇಂದು ಯಾರೂ ಪ್ರಶ್ನೆ ಎತ್ತಲಿಲ್ಲ. ಕಾಂಗ್ರೆಸ್ ಹೇಳುತ್ತಿರುವುದರ ಅರ್ಥವೇನೆಂದರೆ, ಕರ್ನಾಟಕವು ಭಾರತದಿಂದ ಪ್ರತ್ಯೇಕವಾಗಿದೆ ಎಂದು. ಈ ಹೇಳಿಕೆಯು ವಿಭಜಿಸುವ ಸ್ವರೂಪದ್ದಾಗಿದೆ. ಇದು ನಾಗರಿಕರನ್ನು ವಿಭಜಿಸುವ ಮತ್ತು ವಿವಿಧ ರಾಜ್ಯಗಳ ಜನರ ನಡುವೆ ಬಿರುಕು ಮೂಡಿಸುವ ಗುರಿಯನ್ನು ಹೊಂದಿದೆ. ಕರ್ನಾಟಕ ಭಾರತಕ್ಕಿಂತ ಭಿನ್ನವಾಗಿಲ್ಲ. ಇದು ಆಘಾತಕಾರಿ ಹೇಳಿಕೆಯಾಗಿದ್ದು, ವಿಭಜಕ ಭಾವನೆಗಳನ್ನು ಹುಟ್ಟುಹಾಕಲು ಮತ್ತು ಸಮಾಜದಲ್ಲಿ ಅಸಂಗತತೆಯನ್ನು ಸೃಷ್ಟಿಸಲು ಕಾರಣವಾಗುತ್ತದೆ" ಎಂದು ಆಕ್ಷೇಪ ವ್ಯಕ್ತಪಡಿಸಿದೆ.
ಮೋದಿ ವಾಗ್ದಾಳಿ: ಭಾನುವಾರ ತಮ್ಮ ಸಾರ್ವಜನಿಕ ಸಭೆಗಳಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಪಕ್ಷವು ಕರ್ನಾಟಕವನ್ನು ಭಾರತದಿಂದ "ಬೇರ್ಪಡಿಸಲು" ಬಹಿರಂಗವಾಗಿ ಪ್ರತಿಪಾದಿಸುತ್ತಿದೆ ಎಂದು ಆರೋಪಿಸಿದರು. "ತುಕ್ಡೆ-ತುಕ್ಡೆ ಗ್ಯಾಂಗ್" (ದೇಶ ವಿರೋಧಿ ಅಂಶಗಳು) ಕಾಯಿಲೆಯು ಕಾಂಗ್ರೆಸ್ನ ಅವನತಿಯ ಹಂತವನ್ನು ತಲುಪಿಸಿದೆ ಎಂದು ಮೋದಿ ಟೀಕಿಸಿದರು.
ಇದಕ್ಕೆ ತಿರುಗೇಟು ನೀಡಿರುವ ಕರ್ನಾಟಕದ ಉಸ್ತುವಾರಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ, "ಕರ್ನಾಟಕದ ಮೇಲೆ ಮೋದಿ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ. ಅವರಲ್ಲಿ ಹತಾಶೆ ಎದ್ದುಕಾಣುತ್ತಿದೆ. ಬಿಜೆಪಿಯವರು ಕರ್ನಾಟಕದ ಸ್ವಾಭಿಮಾನವನ್ನು ಏಕೆ ಅವಹೇಳನ ಮಾಡುತ್ತಿದ್ದಾರೆ?. ಈ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಪ್ರಧಾನಿಯವರು ಸಾರುತ್ತಿರುವ ಸುಳ್ಳನ್ನು ನಾವು ತಿರಸ್ಕರಿಸುತ್ತೇವೆ" ಎಂದು ಹೇಳಿದರು.
ಇದನ್ನೂ ಓದಿ: ಚುನಾವಣಾ ಆಯೋಗದಿಂದ ಕಾಂಗ್ರೆಸ್ ಅಧ್ಯಕ್ಷ ಮತ್ತು ಬಿಜೆಪಿ ರಾಜ್ಯಾಧ್ಯಕ್ಷರಿಗೆ ಷೋಕಾಸ್ ನೋಟಿಸ್