ಬೆಂಗಳೂರು: ನೈಸರ್ಗಿಕ ಆರೋಗ್ಯ ಕ್ರಮಗಳ ಮೂಲಕ ಮಹಾಮಾರಿ ಕೋವಿಡ್-19 ಸೋಂಕನ್ನು ತಡೆಯಬಹುದು ಎಂದು ಇಂಟರ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮಹಾ ಯೋಗ ಮತ್ತು ನ್ಯಾಚುರಲ್ ಹೈಜನ್ ಸಂಸ್ಥೆಯ ನಿರ್ದೇಶಕ ಹಾಗೂ ಖ್ಯಾತ ನ್ಯಾಚುರೋಪತಿ ಡಾ. ಅರುಣ್ ಶರ್ಮಾ ತಿಳಿಸಿದ್ದಾರೆ.

ದೇವನಹಳ್ಳಿಯ ಐವಿಸಿ ರಸ್ತೆಯಲ್ಲಿರು ಸ್ಕೂಲ್ ಆಫ್ ಏನ್ಸಿಯಂಟ್ ವಿಸ್ಡಂ ಶಾಲೆಯಲ್ಲಿ ಆಯೋಜಿಸಲಾಗಿದ್ದ ನೈಸರ್ಗಿಕ ಆಹಾರ ಕ್ರಮಗಳು ಎಂಬ ವಿಷಯ ಕುರಿತ ಐದು ದಿನಗಳ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಈ ಕಾರ್ಯಾಗಾರದಲ್ಲಿ ಸುಮಾರು 60 ಜನ ಶಿಬಿರಾರ್ಥಿಗಳು ಪಾಲ್ಗೊಂಡು ನೈಸರ್ಗಿಕ ಆರೋಗ್ಯದ ಮಹತ್ವವನ್ನು ಅರಿತುಕೊಂಡರು.

ಇತ್ತೀಚಿನ ದಿನಗಳಲ್ಲಿ ಜನ ಹಲವಾರು ಖಾಯಿಲೆಗಳಿಂದ ಬಳಲುತ್ತಿದ್ದಾರೆ. ಖಾಯಿಲೆ ವಾಸಿಯಾಗಲು ಜನರು ರಾಸಾಯನಿಕ ಔಷಧಿಗಳ ಮೊರೆ ಹೋಗುತ್ತಿದ್ದಾರೆ ಎಂದ ಡಾ. ಅರುಣ್ ಶರ್ಮಾ ಅವರು, ನಮ್ಮ ಹಿರಿಯರು ನಡೆಸಿಕೊಂಡು ಬಂದಂತಹ ಪ್ರಕೃತ್ತಿದತ್ತವಾಗಿ ದೊರೆಯುವ ಔಷಧಗಳನ್ನು ನಾವು ಸರಿಯಾಗಿ ಬಳಕೆ ಮಾಡಿಕೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ದೇಹಕ್ಕೆ ಅಗತ್ಯವಾದ ಬ್ಯಾಕ್ಟೀರಿಯಾಗಳಿಂದ ದೇಹದೊಳಗಿನ ಕಲ್ಮಶಗಳು ನಿವಾರಣೆಯಾಗುತ್ತಿವೆ. ಕೆಲವು ಬ್ಯಾಕ್ಟೀರಿಯಾಗಳು ಮಾನವನ ದೇಹದ ಸಮತೋಲನ ಮತ್ತು ಆರೋಗ್ಯ ನಿರ್ವಹಣೆಗೆ ಅತ್ಯಗತ್ಯ ಎಂದರು. ಸಾಮಾನ್ಯವಾಗಿ ಎರಡು ಬಗೆಯ ಬ್ಯಾಕ್ಟೀರಿಯಾಗಳಿರುತ್ತವೆ. ಒಂದು ಬ್ಯಾಕ್ಟೀರಿಯಾ ಆಹಾರವನ್ನು ರಕ್ತವನ್ನಾಗಿ ಪರಿವರ್ತಿಸಿದರೇ, ಇನ್ನೊಂದು ಬಗೆಯ ಬ್ಯಾಕ್ಟೀರಿಯಾ ದೇಹವನ್ನು ಶುದ್ಧೀಕರಿಸುತ್ತದೆ ಎಂಬುದು ಡಾ. ಅರುಣ್ ಶರ್ಮಾ ಅವರ ಅಭಿಪ್ರಾಯವಾಗಿದೆ.

ಇನ್ನು ಕೊರೊನಾ ರೋಗಿಯ ಸಾವಿಗೆ ಕಾರಣ ವೈರಸ್ ಅಲ್ಲ ವೈದ್ಯರು ಕೊಡುತ್ತಿರುವ ಅಸಮರ್ಪಕ ಔಷಧಿ ಮಾತ್ರೆಗಳು ಎಂದ ಡಾ. ಅರುಣ್ ಶರ್ಮಾ, ಮಾನವನ ದೇಹ ಶುದ್ಧವಾಗಿದ್ದಾಗ ಯಾವ ವೈರಸ್ ಸಹ ದೇಹಕ್ಕೆ ಹಾನಿ ಮಾಡುವುದಿಲ್ಲ.
ಕೊರೊನಾ ಪಾಸಿಟಿವ್ ಇದ್ದವರೂ ಸಹ ಎಳನೀರು ಕುಡಿದು ಸೂರ್ಯನ ಕಿರಣದ ಚಿಕಿತ್ಸೆ ಪಡೆದು ಪ್ರಾಣಾಯಾಮ ಮತ್ತು ಯೋಗದ ಮೂಲಕ ಎರಡರಿಂದ ಮೂರು ದಿನಗಳಲ್ಲಿ ವಾಸಿಯಾಗಿದ್ದಾರೆ. ಯಾವುದೇ ಮಾತ್ರೆ ಔಷದಗಳ ಸಹಾಯವಿಲ್ಲದೇ ಸಹಜ ನೈಸರ್ಗಿಕ ಚಿಕಿತ್ಸೆ ವಾಸಿ ಮಾಡಿದೆ. ಇದಕ್ಕೆ ವೈದ್ಯಕೀಯ ವಲಯದಲ್ಲಿ ಉತ್ತರವಿಲ್ಲ ಎಂದರು.
ಪ್ರತಿ ದಿನ ನಿರ್ದಿಷ್ಟವಾದ ಆಹಾರ ಸೇವನೆಯ ಪದ್ಧತಿ, ವ್ಯಾಯಾಮ, ಪ್ರಾಣಾಯಾಮಗಳನ್ನು ಕ್ರಮಬದ್ಧವಾಗಿ ಮಾಡಿಕೊಂಡಾಗ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಅಲ್ಲದೆ ಯಾವುದೇ ರೋಗ ಖಾಯಿಲೆಗಳು ನಮ್ಮ ಬಳಿ ಸುಳಿಯುವುದಿಲ್ಲ ಎಂದು ಅವರು ಹೇಳಿದರು. ಕಾರ್ಯಾಗಾರದಲ್ಲಿ ಕೋವಿಡ್-19 ಸೋಂಕನ್ನು ನೈಸರ್ಗಿಕ ಆರೋಗ್ಯ ಕ್ರಮಗಳ ಮೂಲಕ ಯಾವ ರೀತಿ ತಡೆಗಟ್ಟಬಹುದು ಹಾಗೂ ಅದರಿಂದ ಆಗುವಂತಹ ಪ್ರಯೋಜನಗಳು ಏನು ಎಂಬುದರ ಮಾಹಿತಿ ಜೊತೆಗೆ ಸಂವಾದ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.
ಸಾಮಾಜಿಕ ಅಂತರ ಹಾಗೂ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಂಡು ಕಾರ್ಯಾಗಾರ ನಡೆಸಲಾಯ್ತು. ಕಾರ್ಯಾಗಾರ ಮತ್ತು ಸಂವಾದದಲ್ಲಿ ಡಾ. ಅರುಣ್ ಶರ್ಮಾ ಅವರು, ನೈಸರ್ಗಿಕ ಆರೋಗ್ಯ ವಿಧಾನಗಳನ್ನು ಏಕೆ ಅನುಸರಿಸಬೇಕು?. ನಿಸರ್ಗದತ್ತವಾದ ಶಕ್ತಿಯ ವಿಜ್ಞಾನದ ಕುರಿತು ಅರಿವು ಮೂಡಿಸುವುದು, ಕೋವಿಡ್-19 ನಿಂದ ಸುರಕ್ಷಿತವಾಗಿರಲು ಪ್ರತಿಯೊಬ್ಬರೂ ಪಾಲಿಸಬಹುದಾದ ಐದು ಸರಳ ಮತ್ತು ಪ್ರಭಾವೀ ಕ್ರಮಗಳ ಕುರಿತು ಸಂಕ್ಷಿಪ್ತ ವಿವರಣೆಯನ್ನು ನೀಡಿದರು.
ಈ ನೈಸರ್ಗಿಕ ಕಾರ್ಯಾಗಾರವನ್ನು ಆಯೋಜನೆ ಮಾಡಿದ್ದ ನಿವೃತ್ತ ಐಪಿಎಸ್ ಅಧಿಕಾರಿ ವೆಂಕಟೇಶ್ ಅವರು ತಮ್ಮ ಅನುಭವ ಹಂಚಿಕೊಂಡರು. ನಮ್ಮ ದೇಹದಲ್ಲಿ ಸಾಕಷ್ಟು ಕಲ್ಮಶಗಳು ನಿತ್ಯ ಸೇರುತ್ತಲೇ ಇರುತ್ತವೆ. ಆ ಕಲ್ಮಶಗಳನ್ನು ಹೊರಹಾಕಲು ಪ್ರಾಣಾಯಾಮ, ಯೋಗ ಮತ್ತು ಆಸನಗಳು ಜೊತೆ ದೈಹಿಕ ಚಟುವಟಿಕೆಗಳು ಅಗತ್ಯವಿದೆ ಎಂದರು.
ಪ್ರತಿನಿತ್ಯ ವಾಕಿಂಗ್ ಅಥವಾ ಜಾಗಿಂಗ್ ಗೂ ಮೊದಲು ಒಂದಷ್ಟು ಪ್ರಾಣಾಯಾಮ ಮತ್ತು ಯೋಗ ಮಾಡುವುದರಿಂದ ದೇಹದಲ್ಲಿ ಚೇತರಿಕೆ ಮತ್ತು ಚಟುವಟಿಕೆ ಇರುತ್ತದೆ. ನಮ್ಮ ಎಲ್ಲಾ ಕಲ್ಮಶಗಳು ಕೇವಲ ವಿಸರ್ಜನೆಯಿಂದ ಹೊರಹೋಗುವುದಿಲ್ಲ. ನಮ್ಮ ಆಹಾರ ಕ್ರಮಗಳು ಮತ್ತು ದೈಹಿಕ ವ್ಯಾಯಾಮದಿಂದ ದೇಹದ ಸಮತೋಲನ ಸಾಧ್ಯವಿದೆ ಎಂದರು.
ಪಂಚಭೂತಗಳಲ್ಲೊಂದಾದ ಅಗ್ನಿ ಎಂದರೆ ಸೂರ್ಯ ದೇಹಕ್ಕೆ ವಿಟಮಿನ್ ಡಿ ಮಾತ್ರ ಕೊಡುವುದಿಲ್ಲ. ಸೂರ್ಯನ ಕಿರಣಗಳಿಂದ ದೃಷ್ಟಿ ದೋಷ, ಮಧುಮೇಹ, ರಕ್ತದೊತ್ತಡ ಮತ್ತು ಸ್ಥೂಲಕಾಯಗಳೂ ಕ್ರಮೇಣ ಕಡಿಮೆಯಾಗುತ್ತವೆ ಎನ್ನುವುದನ್ನು ನೈಸರ್ಗಿಕ ಆರೋಗ್ಯ ಶಿಬಿರದಲ್ಲಿ ಕಲಿತೆವು ಎಂದು ನಿವೃತ್ತ ಐಪಿಎಸ್ ಅಧಿಕಾರಿ ವೆಂಕಟೇಶ್ ಹೇಳಿದರು.
ಪಂಚಭೂತಗಳು ದೇಹದ ಒಳಗೂ ಇರುತ್ತವೆ ಅವುಗಳನ್ನು ಅರ್ಥ ಮಾಡಿಕೊಂಡಾಗ ಮಾತ್ರ ದೇಹದ ನಿರ್ವಹಣೆ ಸುಲಭ ಎಂದು ಅವರು ಅಭಿಪ್ರಾಯಪಟ್ಟರು. ನೈಸರ್ಗಿಕ ಅರೋಗ್ಯ ಕ್ರಮಗಳ ಕುರಿತು ತಿಳಿದುಕೊಂಡು ಅವುಗಳನ್ನು ಅನುಸರಿಸಿ ಹೊಸರೀತಿಯ ಅನುಭವ ಪಡೆಯಲಿಚ್ಛಿಸುವವರಿಗೆ ಈ ವಿಧಾನ ಸಾಕಷ್ಟು ಸಹಾಯಕಾರಿಯಾಗಿದೆ.