ಬೆಂಗಳೂರು: ನೊಂದಿರುವ ಯುವಕ-ಯುವತಿಯರ ಬಗ್ಗೆ ಯೋಚಿಸಿ ನಿರ್ಧಾರ ಕೈಗೊಳ್ಳುವ ಸಂದರ್ಭ ರಾಜ್ಯದಲ್ಲಿ ಹತ್ತಿರವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನ ನಾಗರಬಾವಿಯಲ್ಲಿ ಹಮ್ಮಿಕೊಂಡಿದ್ದ ಉಪ ಚುನಾವಣೆ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ರಾಜ್ಯದಲ್ಲಿ ಅಭಿವೃದ್ಧಿಯಾಗಬೇಕು, ಒಳ್ಳೆಯದಾಗಬೇಕು, ಇಲ್ಲೊಂದು ಬದಲಾವಣೆ ತರಬೇಕು. ಎಷ್ಟೊಂದು ವಿದ್ಯಾವಂತರು,ಬುದ್ಧಿವಂತರು ಇರುವಂತಹ ಈ ಮಹಾನಗರವನ್ನು ಎಳಸು ಸಂಸದ ತೇಜಸ್ವಿ ಸೂರ್ಯ ಉಗ್ರರ ಸಿಟಿ ಎಂದು ಹೇಳಿಬಿಟ್ಟ. ಎಷ್ಟೊಂದು ವಿದ್ಯಾವಂತರು ಭವಿಷ್ಯ ಅರಸಿ ಬಂದಿರುವ ನಗರ ಎಲ್ಲಿಂದ ಉಗ್ರಗಾಮಿಗಳ ನಗರವಾಯಿತು? ಈ ಬಗ್ಗೆ ನಾನು ಹೆಚ್ಚು ಚರ್ಚೆಗೆ ಹೋಗುವುದಿಲ್ಲ. ನಮ್ಮ ಮೇಲೆ ನಂಬಿಕೆ ಇಟ್ಟು, ಹಲವು ಯುವಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗಿದ್ದೀರಿ.ಇಂದು ಗಿರೀಶ್ ನೇತೃತ್ವದಲ್ಲಿ ನೀವೆಲ್ಲ ಪಕ್ಷ ಸೇರ್ಪಡೆ ಆಗಿದ್ದೀರಿ. ನಿಮ್ಮಿಂದ ನೂರಾರು ಯುವ ನಾಯಕರು ನಿರ್ಮಾಣವಾಗಬೇಕು. ಬಡವರು ಅಥವಾ ಗಾರ್ಮೆಂಟ್ಸ್ಗಳಲ್ಲಿ ಕೆಲಸ ಮಾಡುತ್ತೇವೆ ಅನ್ನುವ ಕಾರಣಕ್ಕೆ ನಿಮ್ಮಲ್ಲಿ ಸಾಮರ್ಥ್ಯವಿಲ್ಲ ಎಂದುಕೊಳ್ಳಬೇಡಿ. ನಾಯಕತ್ವ, ಸಂಘಟನೆ ಯಾರಪ್ಪನ ಮನೆ ಆಸ್ತಿಯಲ್ಲ. ಪಂಚಾಯಿತಿಯಿಂದ ಪಾರ್ಲಿಮೆಂಟ್ ಬರಬೇಕು ಮೀಸಲಾತಿಯನ್ನು ತಪ್ಪಿಸಲು ಸಾಧ್ಯವಿದೆಯೇ? ಚುನಾವಣೆ ತಪ್ಪಿಸಲು ಆಗುತ್ತದೆಯೇ? ನೀವೆಲ್ಲ ಒಳ್ಳೆಯ ನಾಯಕರಾಗಿ ಬೆಳೆಯಬೇಕು ಎಂದು ಆಶಿಸಿದರು.
ಹೆಣ್ಣು ಮಕ್ಕಳ ಪ್ರತಿನಿಧಿಯಾಗಿ ಕುಸುಮಾ ಅವರಿಗೆ ಸ್ಪರ್ಧಿಸುವ ಅವಕಾಶವನ್ನು ಕಾಂಗ್ರೆಸ್ ಮಾಡಿಕೊಟ್ಟಿದೆ. ದುರ್ಗೆಯ ಪ್ರತಿರೂಪವಾದ ಹೆಣ್ಣು ಮಕ್ಕಳಿಗೆ ಗೌರವ ಸಲ್ಲಿಸುವ ಕಾರ್ಯವನ್ನು ಕಾಂಗ್ರೆಸ್ ಮಾಡಿದೆ. ನೀವೆಲ್ಲ ಸೇರಿ ನೊಂದು-ಬೆಂದ ಹೆಣ್ಣು ಮಗಳಿಗೆ ಒಂದು ಅವಕಾಶವನ್ನು ಕೊಟ್ಟು ಈ ಕ್ಷೇತ್ರಕ್ಕೆ ಒಂದು ದೊಡ್ಡ ಬದಲಾವಣೆ ತರಬೇಕು ಎಂದರು.