ಬೆಂಗಳೂರು: ವಲಯವಾರು ಅಂತಾರಾಷ್ಟ್ರೀಯ ಗುಣಮಟ್ಟದ ಕ್ರೀಡಾ ತರಬೇತಿ ಕೇಂದ್ರ ಸ್ಥಾಪನೆ, ಕ್ರೀಡಾ ಸೆಸ್ ಜಾರಿ ಸೇರಿದಂತೆ ಕ್ರೀಡಾ ಇಲಾಖೆಗೆ ಕಾಯಕಲ್ಪ ನೀಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರಿಷತ್ ಸದಸ್ಯರ ಸಭೆ ಕರೆದು ಚರ್ಚಿಸಬೇಕು. ಕ್ರೀಡಾ ಇಲಾಖೆಗೆ ಸಾವಿರ ಕೋಟಿ ಅನುದಾನ ಕೊಡಬೇಕು ಎಂದು ಕಾಂಗ್ರೆಸ್ ಸದಸ್ಯ ಗೋವಿಂದರಾಜು ಸರ್ಕಾರವನ್ನು ಒತ್ತಾಯಿಸಿದ್ದು, ಇದಕ್ಕೆ ಪಕ್ಷಾತೀತವಾಗಿ ಎಲ್ಲ ಸದಸ್ಯರು ಸಹಮತ ವ್ಯಕ್ತಪಡಿಸಿದರು.
ವಿಧಾನ ಪರಿಷತ್ನಲ್ಲಿ ಬಜೆಟ್ ಮೇಲಿನ ಕಲಾಪದಲ್ಲಿ ಭಾಗವಹಿಸಿ ಮಾತನಾಡಿದ ಒಲಂಪಿಕ್ ಅಸೋಸಿಯೇಶನ್ ಅಧ್ಯಕ್ಷರು ಆದ ಪರಿಷತ್ ಸದಸ್ಯ ಗೋವಿಂದರಾಜು, ಕ್ರೀಡಾ ಇಲಾಖೆಯ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದರು. ಕ್ರೀಡಾ ಕ್ಷೇತ್ರದ ಅಭಿವೃದ್ಧಿಗೆ ಆಗಬೇಕಿರುವ ಕೆಲಸ ಕಾರ್ಯಗಳ ಕುರಿತು ಸರ್ಕಾರದ ಗಮನ ಸೆಳೆದರು.
ನಮ್ಮ ರಾಜ್ಯದಲ್ಲಿ ಒಳಾಂಗಣ ತಾಪಮಾನ ನಿಯಂತ್ರಿತ ಈಜುಕೊಳ ಇಲ್ಲ. ಒಳಾಂಗಣ ಫುಟ್ಬಾಲ್ ಕ್ರೀಡಾಂಗಣ ಇಲ್ಲ ಎನ್ನುವುದನ್ನು ನೋಡಿದರೆ ನನಗೆ ನಾಚಿಕೆಯಾಗುತ್ತಿದೆ. ನಮ್ಮಲ್ಲಿ ಕ್ರೀಡೆ ಬೆಳೆಯಬೇಕಾದರೆ ಜಿಲ್ಲಾವಾರು ಒಂದು, ಎರಡು ಕೋಟಿ ಕೊಡಬೇಡಿ. ವಲಯವಾರು 100-200 ಕೋಟಿ ಕೊಡಬೇಕು. ಉತ್ತರ ಕರ್ನಾಟಕ ಭಾಗಕ್ಕೆ 300 ಕೋಟಿ ಕೊಟ್ಟು ಎಲ್ಲಾ ವ್ಯವಸ್ಥೆ ಕಲ್ಪಿಸಿದರೆ ಅಂತಾರಾಷ್ಟ್ರೀಯ ಮಟ್ಟದ ಸವಲತ್ತು ಕಲ್ಪಿಸಿದರೆ ಆಗ ನಾವು ಒಲಂಪಿಕ್ಸ್ ಗೆ ಕ್ರೀಡಾಪಟುಗಳನ್ನು ಸಿದ್ದಗೊಳಿಸಬಹುದು.
ಒಮ್ಮೆ ಸೌಕರ್ಯ ಕಲ್ಪಿಸಿದರೆ ಅವೆಲ್ಲಾ ಶಾಶ್ವತವಾಗಿ ಉಳಿದುಕೊಳ್ಳಲಿದೆ. ಒಮ್ಮೆ ಹುಬ್ಬಳ್ಳಿ, ಮುಂದಿನ ವರ್ಷ ಗುಲ್ಬರ್ಗಾ, ಮೈಸೂರು, ಮಂಗಳೂರು ಭಾಗಕ್ಕೆ ಈ ರೀತಿ ಅನುದಾನ ಕೊಡಿ. ಆಗ ಅಲ್ಲೆಲ್ಲಾ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರೀಡಾಪಟುಗಳನ್ನಾಗಿ ನಮ್ಮ ಆಟಗಾರರನ್ನು ತರಬೇತುಗೊಳಿಸಬಹುದು ಎಂದರು.
ರಾಷ್ಟ್ರಮಟ್ಟದ ಕ್ರೀಡಾ ದಸರಾ: ನಮ್ಮಲ್ಲಿ ಏನೇನಕ್ಕೋ ಸೆಸ್ ಹಾಕುತ್ತಾರೆ. ಕ್ರೀಡಾ ಸೆಸ್ ಯಾಕೆ ಹಾಕಲ್ಲ. ಶೇ. 1 ರಷ್ಟು ಸೆಸ್ ಹಾಕಿ ಇದರಿಂದ 400-500 ಕೋಟಿ ಬರಲಿದೆ. ಕ್ರೀಡಾ ಇಲಾಖೆಗೆ ಅದು ಸಾಕಾಗಲಿದೆ. ದಸರಾ ಕ್ರೀಡಾಕೂಡ ಮಾಡುತ್ತಾರೆ. ಅಲ್ಲಿಗೆ ಬರೀ ಶಾಲಾ ಮಕ್ಕಳನ್ನು ಕರೆತರುತ್ತಾರೆ. ವಿಶ್ವವಿಖ್ಯಾತ ದಸರಾ ಮಾಡಿ ಜಿಲ್ಲಾ ಮಟ್ಟದ ದಸರಾ ಕ್ರೀಡೆ ಮಾಡುತ್ತೀರಿ. ಇದರ ಬದಲು ರಾಷ್ಟ್ರಮಟ್ಟದ ಕ್ರೀಡಾ ದಸರಾ ಮಾಡಬೇಕು. ಮಹಾರಾಜರ ಕಾಲದಲ್ಲಿ ನಡೆಯುತ್ತಿದ್ದ ಕುಸ್ತಿ ಗುಣಮಟ್ಟ ಈಗ ಹೋಗಿದೆ. ಇದನ್ನು ಕಾಟಾಚಾರಕ್ಕೆ ಮಾಡುತ್ತಿದ್ದಾರೆ.
ಇದು ಬದಲಾಗಬೇಕು. ಮೊದಲಿನ ರೀತಿ ವಿಶ್ವವಿಖ್ಯಾತ ದಸರಾ ಕ್ರೀಡಾಕೂಟ ನಡೆಯಬೇಕು. ಕುಸ್ತಿ ಪೈಲ್ವಾನರಿಗೆ ಸರ್ಕಾರ ಒಂದು ಸಾವಿರ ಮಾಸಾಶನ ಕೊಡುತ್ತಿದೆ. ಅದು ಸಾಲುವುದಿಲ್ಲ. ಅದನ್ನು ಅವರು 5 ಸಾವಿರಕ್ಕೆ ಹೆಚ್ಚಿಸಬೇಕು ಎಂದರು. ಈ ವೇಳೆ ಮಧ್ಯಪ್ರವೇಶ ಮಾಡಿದ ಬಿಜೆಪಿ ಸದಸ್ಯೆ ಭಾರತಿಶೆಟ್ಟಿ, ರಸ್ತೆ, ಚರಂಡಿ ಇಲ್ಲದೆ ಇದ್ದಲ್ಲಿ ತೊಂದರೆ ಇಲ್ಲ, ಕ್ರೀಡೆಗೆ ಒತ್ತು ಕೊಡಿ. ಕ್ರೀಡೆಗೆ 500 ಕೋಟಿ ಆಗಲ್ಲ 1000 ಕೋಟಿ ಕೊಡಿ, ನಮ್ಮ ಮಕ್ಕಳೇ ಇಂದು ಆಟವಾಡಲ್ಲ. ಬರೀ ಮೊಬೈಲ್ ಗೇಮ್ ಎನ್ನುತ್ತಿದ್ದಾರೆ. ಇದು ಆತಂಕಕಾರಿ ಎಂದರು.
500 ಕೋಟಿ ಕೊಟ್ಟರೆ ಉದ್ಧಾರ ಆಗಲ್ಲ: ನಂತರ ಮಾತು ಮುಂದುವರೆಸಿದ ಗೋವಿಂದರಾಜು, ದೈಹಿಕ ಶಿಕ್ಷಕರ ನೇಮಿಸಿ ಎಂದರೆ ಸಿಎಂ ನಿರಾಕರಿಸಿದರು. ಇದನ್ನು ಖಂಡಿಸುತ್ತೇನೆ. ದೈಹಿಕ ಶಿಕ್ಷಕರೇ ಇಲ್ಲ ಎಂದರೆ ಎಲ್ಲಿಂದ ಕ್ರೀಡಾಪಟುಗಳು ಬರುತ್ತಾರೆ. ಕೋಚ್ಗಳೇ ಇಲ್ಲ. ಪ್ರತಿ ಕ್ರೀಡೆಗೆ 5 ಕೋಚ್ ನೇಮಿಸಬೇಕು. ಈಜುಕೊಳ ಇದ್ದಲ್ಲಿ ವಾಲಿಬಾಲ್ ಕೋಚ್ ಹಾಕುತ್ತಾರೆ. ಇಂತಹ ವ್ಯವಸ್ಥೆ ಇದೆ. ಇರುವ ಕ್ರೀಡೆ ಒಂದಾದ್ರೆ ಕೋಚ್ ಮತ್ತೊಂದು ಕ್ರೀಡೆಯದ್ದಾಗಿರುತ್ತಾರೆ. ಇದನ್ನ ಬದಲಿಸಬೇಕು. ಕ್ರೀಡಾ ಇಲಾಖೆಗೆ ಬಜೆಟ್ ನಲ್ಲಿ 500 ಕೋಟಿ ಅನುದಾನ ಕೊಟ್ಟರೆ ಇಲಾಖೆ ಉದ್ಧಾರ ಆಗಲ್ಲ. ಕನಿಷ್ಠ 1000 ಕೋಟಿಯಾದರೂ ಕೊಟ್ಟರೆ ಏನಾದರೂ ಉಪಯೋಗ ಆಗಲಿದೆ ಎಂದರು.
ಯಾರೇ ಮುಖ್ಯಮಂತ್ರಿ ಇರಲಿ, ಒಲಂಪಿಕ್ ಬಂದಾಗ ಎಲ್ಲರೂ ಸಹಾಯ ಮಾಡಿದ್ದಾರೆ. ಆದರೆ, ಕ್ರೀಡೆಯಲ್ಲಿ ಭಾಗವಹಿಸಲು ತೆರಳುವಾಗ ಹಣ ಕೊಟ್ಟು, ಮೆಡಲ್ ಬಂದಾಗ ಆರ್ಥಿಕ ನೆರವು ಘೋಷಣೆ ಮಾಡುವುದರಿಂದ ಉಪಯೋಗ ಇಲ್ಲ. ಅದರ ಬದಲು ಕ್ರೀಡಾಪಟುಗಳ ಜೊತೆ ಚರ್ಚಿಸಿ ಏನೇನು ವ್ಯವಸ್ಥೆ ಅಗತ್ಯ ಎಂದು ತಿಳಿದುಕೊಂಡು ವ್ಯವಸ್ಥೆ ಕಲ್ಪಿಸಬೇಕು ಎಂದರು.
ಇಂದು ಕ್ರೀಡಾ ಇಲಾಖೆಯಲ್ಲಿ ಸಾಕಷ್ಟು ಅಕ್ರಮ ನಡೆಯುತ್ತಿದೆ. 25 ಮೀಟರ್ ಈಜುಕೊಳ ಮಾಡಿ 50 ಮೀಟರ್ ಬಿಲ್ ತೆಗೆದುಕೊಳ್ಳುತ್ತಾರೆ. ಹೀಗಾದರೆ, ಗುಣಮಟ್ಟ ಹೇಗೆ ಬರಲಿದೆ. ಟ್ರ್ಯಾಕ್ಗಳ ನಿರ್ಮಾಣದಲ್ಲಿಯೂ ಇದೇ ಸ್ಥಿತಿ ಇದೆ ಎಂದು ಆರೋಪಿಸಿದರು.
ಅನುದಾನ ಪರಿಷ್ಕರಿಸಲು ಮನವಿ: ಇದಕ್ಕೆ ಪ್ರತಿಕ್ರಿಯೆ ನೀಡಿದ ಯುವಜನ ಸೇವೆ ಮತ್ತು ಕ್ರೀಡಾ ಸಚಿವ ನಾರಾಯಣಗೌಡ, ಅಕ್ರಮ ಬಿಲ್ ಆರೋಪದ ಬಗ್ಗೆ ತನಿಖೆ ಮಾಡಿಸುತ್ತಿದ್ದೇನೆ. ಕ್ರೀಡಾ ಇಲಾಖೆಗೆ 1 ಸಾವಿರ ಕೋಟಿ ಕೊಡಬೇಕು. ಈಗ ಕೊಟ್ಟಿರುವ ಅನುದಾನ ಪರಿಷ್ಕರಿಸಿ ಎಂದು ಸಿಎಂಗೆ ಮನವಿ ಕೊಟ್ಟಿದ್ದೇನೆ. ಈ ಖಾತೆಯನ್ನ ಹಠ ಮಾಡಿ ಇರಿಸಿಕೊಂಡಿದ್ದೇನೆ. ಕ್ರೀಡಾ ಇಲಾಖೆಯನ್ನು ಒಳ್ಳೆಯ ಸ್ಥಿತಿಗೆ ಕೊಂಡೊಯ್ಯಬೇಕು ಎಂದಿದ್ದೇನೆ ಎಂದರು.
ನಂತರ ಮಾತು ಮುಂದುವರೆಸಿದ ಗೋವಿಂದರಾಜು, ಐಟಿ ಕಂಪನಿಗೆ ಎಲ್ಲಾ ಅನುಕೂಲ ಮಾಡಿಕೊಡುತ್ತೀರಿ. ಅವರು ಅಲ್ಪ ಅಲ್ಪ ದೇಣಿಗೆ, ನೆರೆ, ಬರ, ವಿಪತ್ತಿನ ವೇಳೆ ಅಲ್ಪ ಪರಿಹಾರ ಕೊಡುತ್ತಾರೆ. ಅದೇ ರೀತಿ ಕ್ರೀಡೆಗೂ ಹಣ ಕೊಡಿ ಎಂದು ಕಂಪನಿಗಳಿಗೆ ಸೂಚಿಸಬೇಕು ಎಂದು ಹೇಳಿದರು.
ಸಿಎಂ ನಮ್ಮನ್ನೆಲ್ಲ ಕರೆದು ಸಭೆ ನಡೆಸಿದರೆ ನಾವೆಲ್ಲಾ ಅಗತ್ಯ ಸಲಹೆ ನೀಡಲಿದ್ದೇವೆ. ಅಗತ್ಯತೆ, ಅನಿವಾರ್ಯತೆ ಮನವರಿಕೆ ಮಾಡಿಕೊಡಲಿದ್ದೇವೆ.ಇದರಿಂದ ಕ್ರೀಡಾ ಇಲಾಖೆಗೆ ಕಾಯಕಲ್ಪ ಮಾಡಬಹುದು. ಆರ್ಮಿ ಕ್ಯಾಂಟೀನ್ ರೀತಿ ಪೊಲೀಸ್ ಕ್ಯಾಂಟೀನ್, ಆರ್ಮಿ ಆಸ್ಪತ್ರೆ ರೀತಿ ಪೊಲೀಸ್ ಆಸ್ಪತ್ರೆ ಮಾಡಬೇಕು. ಇದಕ್ಕೆಲ್ಲಾ ಸರ್ಕಾರ ಹಣ ಕೊಡಬೇಕಿಲ್ಲ. ದೊಡ್ಡ ದೊಡ್ಡ ಕಂಪನಿಗಳಿಗೆ ಹೇಳಿದರೆ ಅವರೇ ಕಟ್ಟಿಕೊಡಲಿದ್ದಾರೆ. ಪೊಲೀಸ್ ಇಲಾಖೆ ನೇಮಕಾತಿಯಲ್ಲಿ ಶೇ.2 ಕ್ರೀಡಾ ಕೋಟಾ ಕೊಟ್ಟಿದ್ದಾರೆ. ಅದಕ್ಕಾಗಿ ಸಿಎಂಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಭಿಕ್ಷುಕರ ಮಾಫಿಯಾ: ಸಿಗ್ನಲ್ಗಳಲ್ಲಿ ಭಿಕ್ಷುಕರ ಹಾವಳಿ ಇದೆ. ಇದರಲ್ಲಿ ದೊಡ್ಡ ಮಾಫಿಯಾ ಇದೆ. ಭಿಕ್ಷುಕರಿಗೆ ಬೆಳಗ್ಗೆ ತಿಂಡಿ ಕೊಡುತ್ತಾರೆ. ಸಂಜೆ ಬಂದು ಭಿಕ್ಷುಕರು ಸಂಗ್ರಹಿಸಿದ ಹಣ ಪಡೆದುಕೊಂಡು ಹೋಗುತ್ತಾರೆ. ಹೆಬ್ಬಾಳ ಮೇಲ್ಸೇತುವೆ ಬಳಿ ಕತ್ತಲಲ್ಲಿ ಭಿಕ್ಷುಕರಿಂದ ನಡೆಯಬಾರದ್ದು ನಡೆಯುತ್ತೆ. ಅದರ ಬಗ್ಗೆ ಮಾಹಿತಿ ನೀಡಿದರೂ ಕ್ರಮ ಆಗಿಲ್ಲ. ಪೊಲೀಸರಿಗೆ ಎಲ್ಲಾ ಗೊತ್ತಿದ್ದೂ ಮೌನವಾಗಿದ್ದಾರೆ. ಸ್ಮಾರ್ಟ್ ಸಿಟಿ ಕೂಡ ದೊಡ್ಡ ಮಾಫಿಯಾ ಆಗಿದೆ. ಎಲ್ಲ ನಿವೃತ್ತ ಅಧಿಕಾರಿಗಳೇ ಯೋಜನೆ ನೋಡಿಕೊಳ್ಳುವವರಾಗಿದ್ದಾರೆ. ಅವರಿಂದ ಅಕೌಂಟೆಬಿಲಿಟಿ ಇಲ್ಲ. ಒಟ್ಟಾರೆಯಾಗಿ ಇದು ಚುನಾವಣೆ ದೃಷ್ಟಿಯಿಂದ ಮಂಡಿಸಿರುವ ಬಜೆಟ್ ಆಗಿದೆ ಎಂದರು.
ಶಾಸಕರ ದಿನಾಚರಣೆ ಮರು ಜಾರಿ ಮಾಡಿ: ಶಾಸಕರ ದಿನಾಚರಣೆ ಆಚರಿಸುವುದನ್ನು ಜಾರಿಗೆ ತರಬೇಕು. ಈ ಹಿಂದೆ ಮಾಡುತ್ತಿದ್ದರು. ಈಗ ನಿಂತಿದೆ. ಶಾಸಕರ ಕಲೆ ಪ್ರದರ್ಶನಕ್ಕೆ ಇದೊಂದು ವೇದಿಕೆಯಾಗಿತ್ತು. ಈಗ ಮತ್ತೆ ಸರ್ಕಾರ ಶಾಸಕರ ದಿನಾಚರಣೆ ಮರು ಆರಂಭಿಸಬೇಕು. ಏಪ್ರಿಲ್, ಮೇ ನಲ್ಲಿ ಖೇಲೋ ಇಂಡಿಯಾ ಇದೆ. ಅದರ ನಂತರ ಒಲಂಪಿಕ್ ಅಸೋಸಿಯೇಶನ್ನಿಂದ ನಾವೇ ಆಯೋಜನೆ ಮಾಡಲು ಸಿದ್ದವಿದ್ದೇವೆ ಎಂದರು.
ಇದಕ್ಕೆ ಸಹಮತ ವ್ಯಕ್ತಪಡಿಸಿದ ಸಭಾ ನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕರಲ್ಲಿನ ಕಲೆ ಗುರುತಿಸಲು ಶಾಸಕರ ದಿನ ಮಾಡಲು ಗೋವಿಂದರಾಜು ಅವರಿಂದ ಮನವಿ ಬಂದಿದೆ. ಸಭಾಪತಿ, ಸ್ಪೀಕರ್ ಒಪ್ಪಿದರೆ ಮಾಡೋಣ ಎಂದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಭಾಪತಿ ಹೊರಟ್ಟಿ, ನಾವು ಒಪ್ಪುತ್ತೇವೆ. ಹಣಕಾಸು ಕೊಡುವುದು ಸರ್ಕಾರ ಮೊದಲು ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಒಪ್ಪಿಸಿ ಎಂದರು. ಈ ವೇಳೆ ಬಿಜೆಪಿ ಸದಸ್ಯ ಆಯನೂರು ಮಂಜುನಾಥ್, ಶಾಸಕರ ಕಲೆ, ಕ್ರೀಡೆಗೆ ಅವಕಾಶ ಎಂದಿರಿ. ಯಾವ ಕ್ರೀಡೆ ಎಂದು ಮೊದಲೇ ಹೇಳಿದರೆ ಉತ್ತಮ ಎಂದು ಹಾಸ್ಯ ಚಟಾಕಿ ಹಾರಿಸಿದರು.
ವಿಧಾನಸೌಧದ ಕಸ ನೋಡಿ ಅಸಹ್ಯವಾಗುತ್ತಿದೆ: ಕಸದ ಸಮಸ್ಯೆಗೆ ಫ್ರಾನ್ಸ್, ಜರ್ಮನ್ ಕಂಪನಿಗಳು ಬಂದು ಡೆಮೊ ಕೊಟ್ಟಿದ್ದಾರೆ. ಆದರೆ, ಅವರಿಗೆ ಸಹಕಾರವೇ ಸಿಕ್ಕಿಲ್ಲ. ನಮ್ಮವರು ಇಲ್ಲಿ ಬೋಗಸ್ ಬಿಲ್ ಮಾಡುತ್ತಿದ್ದಾರೆ. ಗಾರ್ಬೇಜ್ ಸಮಸ್ಯೆ ಹೆಚ್ಚಿದೆ. ಗಂಭೀರ ವಿಷಯ ಇದು.
ಮೊನ್ನೆ ಸದನದಲ್ಲಿ ಅಹೋರಾತ್ರಿ ಧರಣಿ ಮಾಡುತ್ತಿದ್ದಾಗ ಬೆಳಗಿನ ಜಾವ ವಿಧಾನಸೌಧದ ಆವರಣದಲ್ಲೇ ವಾಕಿಂಗ್ ಮಾಡಿದೆವು. ಆಗ ವಿಧಾನಸೌಧ ನೋಡಿ ಅಸಹ್ಯ ಅಂತಾ ಅನ್ನಿಸಿಬಿಟ್ಟಿತು. ಅಷ್ಟೊಂದು ಕಸ ಬಿದ್ದಿತ್ತು. ಶಕ್ತಿಸೌಧವೇ ಹೀಗಾ ಅಂತಾ ಅನ್ನಿಸಿಬಿಟ್ಟಿತು. ವಿಧಾನಸೌಧದ ಆವರಣದ ರಸ್ತೆಗಳಲ್ಲೇ ಪಾಟ್ ಹೋಲ್ ಇದೆ. ವಿಧಾನಸೌಧದ ಸ್ಥಿತಿಯೇ ಹೀಗಾದರೆ ಇನ್ನು ನಗರದ ಕಥೆ ಏನು? ಎಂದು ಪ್ರಶ್ನಿಸಿದರು.
ಸರ್ಕಾರಿ ಕಾಮಗಾರಿಗಳನ್ನು ಕೆಆರ್ಡಿಎಲ್ ಮತ್ತು ನಿರ್ಮಿತಿ ಕೇಂದ್ರಕ್ಕೆ ಗುತ್ತಿಗೆ ಕೊಡುತ್ತಾರೆ. ಅವರಿಗೆ ಶೇ.30 ಪರ್ಸೆಂಟ್ ಕೊಡಬೇಕು. ಇದೊಂದು ದೊಡ್ಡ ಮಾಫಿಯಾ ಆಗಿದೆ. ನಿರ್ಮಿತ ಕೇಂದ್ರದ ನಿವೃತ್ತ ಅಧಿಕಾರಿದ್ದೇ 800 ಅಪಾರ್ಟ್ಮೆಂಟ್ ಇದೆ. ಅಷ್ಟೊಂದು ಭ್ರಷ್ಟಾಚಾರ ನಡೆಸಲಾಗುತ್ತಿದೆ. ಹಾಗಾಗಿ, ನಿರ್ಮಿತಿ ಕೇಂದ್ರವನ್ನೇ ಮುಚ್ಚಿಬಿಡಿ ಎಂದರು.
ಸಚಿವರ ಗೈರಿಗೆ ಸಭಾಪತಿ ಬೇಸರ: ಬಜೆಟ್ ಮೇಲಿನ ಚರ್ಚೆ ವೇಳೆ ಸಭಾ ನಾಯಕರೂ ಸೇರಿದಂತೆ ಕಡ್ಡಾಯವಾಗಿ ಹಾಜರಿರಬೇಕಿದ್ದ ಎಲ್ಲ ಸಚಿವರೂ ಗೈರಾಗಿದ್ದಕ್ಕೆ ಸಭಾಪತಿ ಬಸವರಾಜ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದರು. ಸದನದಲ್ಲಿ ಯಾವ ಮಂತ್ರಿಯೂ ಇಲ್ಲ. ಹೇಳಿ ಹೇಳಿ ಸಾಕಾಗಿದೆ. ಕಡ್ಡಾಯವಾಗಿ ಇರಬೇಕಾದವರೂ ಇಲ್ಲ. ಸೋಮಣ್ಣ, ಅಂಗಾರ, ಚೌಹಾಣ್, ಸಿ.ಸಿ.ಪಾಟೀಲ್ ಇರಬೇಕು. ಆದರೆ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ: ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಪ್ರಶ್ನೆಯೇ ಇಲ್ಲ: ಯಡಿಯೂರಪ್ಪ ಅಚಲ