ಬೆಂಗಳೂರು: 2018ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆ ನಂತರ ವಿವಿಧ ಕಾರಣಗಳಿಂದಾಗಿ ನಾಲ್ಕು ಬಾರಿ ರಾಜ್ಯದಲ್ಲಿ ಉಪ ಚುನಾವಣೆ ನಡೆದಿದ್ದು ಇದೀಗ ಐದನೇ ಬಾರಿ ಉಪ ಚುನಾವಣೆಗೆ ಸಿದ್ದತೆ ನಡೆದಿದೆ. ಈವರೆಗೆ ಒಟ್ಟು 21 ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದಿದ್ದು, ಅದರಲ್ಲಿ ರಾಜಕೀಯ ಪಕ್ಷಗಳು ಕಳೆದುಕೊಂಡ ಸ್ಥಾನ, ಗಳಿಸಿಕೊಂಡ ಸ್ಥಾನದ ಕುರಿತು ಸಮಗ್ರ ವರದಿ ಇಲ್ಲಿದೆ.
2018ರಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾದ ನಂತರ ಎರಡು ಉಪ ಚುನಾವಣೆ ಮತ್ತು ಬಿಜೆಪಿ ಸರ್ಕಾರ ರಚನೆಯಾದ ನಂತರ ಎರಡು ಉಪ ಚುನಾವಣೆಗಳು ನಡೆದಿವೆ. ಮೈತ್ರಿಕೂಟವಿದ್ದಾಗ ಮೇಲುಗೈ ಸಾಧಿಸಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್, ಮೈತ್ರಿ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ರಚನೆಯಾದ ನಂತರ ತೀವ್ರ ಹಿನ್ನಡೆ ಅನುಭವಿಸಿವೆ ಇದರ ಅಂಕಿ ಅಂಶ ಇಲ್ಲಿದೆ.
ಪ್ರಸಕ್ತ ವಿಧಾನಸಭೆಯ ಅವಧಿಯಲ್ಲಿ ಒಟ್ಟು ಈವರೆಗೆ 21 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದಿದ್ದು ಅದರಲ್ಲಿ ಬಿಜೆಪಿ 15 ಸ್ಥಾನ, ಕಾಂಗ್ರೆಸ್ 4 ಸ್ಥಾನ, ಜೆಡಿಎಸ್ 1 ಸ್ಥಾನ ಮತ್ತು ಪಕ್ಷೇತರ ಅಭ್ಯರ್ಥಿ 1 ಸ್ಥಾನದಲ್ಲಿ ಗೆಲುವು ಸಾಧಿಸಿವೆ. ಆದರೆ, ಕಾಂಗ್ರೆಸ್ 12 ಮತ್ತು ಜೆಡಿಎಸ್ 4 ಸ್ಥಾನಗಳನ್ನು ಕಳೆದುಕೊಂಡಿದೆ. ಆದರೆ, ಬಿಜೆಪಿ ಯಾವುದೇ ಸ್ಥಾನ ಕಳೆದುಕೊಳ್ಳದೇ ಹೆಚ್ಚುವರಿಯಾಗಿ 15 ಸ್ಥಾನಗಳನ್ನು ತನ್ನ ಖಾತೆಗೆ ಸೇರ್ಪಡೆ ಮಾಡಿಕೊಂಡಿದೆ.
2018ರಲ್ಲಿ ನಡೆದ ಉಪ ಚುನಾವಣೆ:
2018ರ ಸಾರ್ವತ್ರಿಕ ಚುನಾವಣೆಯಲ್ಲಿ ರಾಮನಗರ ಹಾಗೂ ಚನ್ನಪಟ್ಟಣದ ಎರಡೂ ಕ್ಷೇತ್ರದಲ್ಲಿ ಸ್ಪರ್ಧಿಸಿ ಎರಡೂ ಕಡೆ ಗೆದ್ದಿದ್ದ ಜೆಡಿಎಸ್ ನಾಯಕ ಹೆಚ್.ಡಿ ಕುಮಾರಸ್ವಾಮಿ ರಾಮನಗರ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದರು. ಜಮಖಂಡಿ ಕಾಂಗ್ರೆಸ್ ಶಾಸಕ ಸಿದ್ದು ನ್ಯಾಮಗೌಡ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಇದರಿಂದಾಗಿ 2018ರ ನವೆಂಬರ್ನಲ್ಲಿ ನಡೆದ ರಾಮನಗರ ಉಪ ಚುನಾವಣೆಯಲ್ಲಿ ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ ಗೆಲುವು ಸಾಧಿಸಿದ್ದು, ಜೆಡಿಎಸ್ ತನ್ನ ಸ್ಥಾನ ಉಳಿಸಿಕೊಳ್ಳುವಲ್ಲಿ ಸಫಲವಾಗಿದೆ. ಅದೇ ರೀತಿ ಕಾಂಗ್ರೆಸ್ನ ಆನಂದ ನ್ಯಾಮಗೌಡ ಗೆದ್ದಿದ್ದು ಕಾಂಗ್ರೆಸ್ ಕೂಡ ತನ್ನ ಸ್ಥಾನ ಉಳಿಸಿಕೊಳ್ಳುವಲ್ಲಿ ಸಫಲವಾಯಿತು.
ಗೆದ್ದ ಅಭ್ಯರ್ಥಿ:
ರಾಮನಗರ - ಅನಿತಾ ಕುಮಾರಸ್ವಾಮಿ (ಜೆಡಿಎಸ್)
ಜಮಖಂಡಿ - ಆನಂದ ನ್ಯಾಮಗೌಡ (ಕಾಂಗ್ರೆಸ್)
2019ರ ಮೇ ತಿಂಗಳಲ್ಲಿ ಉಪ ಚುನಾವಣೆ:
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಉಮೇಶ್ ಜಾಧವ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರಿಂದ ತೆರವಾದ ಚಿಂಚೋಳಿ ವಿಧಾನಸಭಾ ಕ್ಷೇತ್ರ ಮತ್ತು ಕಾಂಗ್ರೆಸ್ ಶಾಸಕ ಸಿ.ಎಸ್. ಶಿವಳ್ಳಿ ನಿಧನದಿಂದ ತೆರವಾದ ಕುಂದಗೋಳ ವಿಧಾನಸಭಾ ಕ್ಷೇತ್ರಕ್ಕೆ 2019ರ ಮೇ ತಿಂಗಳಿನಲ್ಲಿ ಉಪ ಚುನಾವಣೆ ನಡೆಯಿತು. ಉಮೇಶ್ ಜಾಧವ್ ಪುತ್ರ ಡಾ.ಅವಿನಾಶ್ ಜಾಧವ್ ಬಿಜೆಪಿಯಿಂದ ಕಣಕ್ಕಿಳಿದು ಗೆದ್ದು ಬಿಜೆಪಿಗೆ ಹೆಚ್ಚುವರಿ ಸ್ಥಾನ ಸಿಗುವಂತೆ ಮಾಡಿದರೆ, ಮೈತ್ರಿ ಸರ್ಕಾರದ ಒಮ್ಮತದ ಅಭ್ಯರ್ಥಿ ಕಾಂಗ್ರೆಸ್ನ ಕುಸುಮಾ ಶಿವಳ್ಳಿ ಗೆದ್ದು ಕಾಂಗ್ರೆಸ್ ಎರಡು ಸ್ಥಾನದಲ್ಲಿ ಒಂದನ್ನು ಉಳಿಸಿಕೊಂಡಿತು.
ಗೆದ್ದ ಅಭ್ಯರ್ಥಿಗಳ ವಿವರ:
ಚಿಂಚೋಳಿ - ಡಾ.ಅವಿನಾಶ್ ಜಾಧವ್ (ಬಿಜೆಪಿ)
ಕುಂದಗೋಳ - ಕುಸುಮಾ ಶಿವಳ್ಳಿ (ಕಾಂಗ್ರೆಸ್)
2019ರ ನವೆಂಬರ್ನಲ್ಲಿ ಉಪ ಚುನಾವಣೆ:
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅನರ್ಹತೆ ಶಿಕ್ಷೆಗೆ ಗುರಿಯಾಗಿದ್ದ 17 ಜನರಲ್ಲಿ ರೋಷನ್ ಬೇಗ್ ಹೊರತುಪಡಿಸಿ 16 ಜನ ಬಿಜೆಪಿ ಸೇರಿದ್ದರು. ತೆರವಾದ 17 ಸ್ಥಾನಗಳಲ್ಲಿ ಚುನಾವಣಾ ತಕರಾರು ಇದ್ದ ಕಾರಣ ರಾಜರಾಜೇಶ್ವರಿ ನಗರ ಕ್ಷೇತ್ರ ಮತ್ತು ಮಸ್ಕಿ ಕ್ಷೇತ್ರಗಳನ್ನು ಹೊರತುಪಡಿಸಿ 15 ಕ್ಷೇತ್ರಗಳಿಗೆ 2019ರ ಡಿಸೆಂಬರ್ನಲ್ಲಿ ಉಪ ಚುನಾವಣೆ ನಡೆದಿದೆ. ಅದರಲ್ಲಿ 12 ಸ್ಥಾನ ಬಿಜೆಪಿ ಗೆದ್ದಿದ್ದು, 2 ಸ್ಥಾನ ಕಾಂಗ್ರೆಸ್ ಹಾಗೂ ಒಂದು ಸ್ಥಾನ ಪಕ್ಷೇತರರ ಪಾಲಾಗಿತ್ತು.
ಗೆದ್ದ ಅಭ್ಯರ್ಥಿಗಳ ವಿವರ:
ಬಿಜೆಪಿ ಗೆದ್ದ ಕ್ಷೇತ್ರ:
ಅಥಣಿ - ಮಹೇಶ್ ಕುಮಟಳ್ಳಿ
ಕಾಗವಾಡ - ಶ್ರೀಮಂತ ಪಾಟೀಲ್
ಗೋಕಾಕ್ - ರಮೇಶ್ ಜಾರಕಿಹೊಳಿ
ಯಲ್ಲಾಪುರ - ಶಿವರಾಮ್ ಹೆಬ್ಬಾರ್
ಹಿರೆಕೇರೂರು - ಬಿ.ಸಿ ಪಾಟೀಲ್
ರಾಣೆಬೆನ್ನೂರು - ಅರುಣ್ ಕುಮಾರ್
ವಿಜಯನಗರ - ಆನಂದ ಸಿಂಗ್
ಚಿಕ್ಕಬಳ್ಳಾಪುರ - ಡಾ.ಕೆ. ಸುಧಾಕರ್
ಕೆ.ಆರ್.ಪುರಂ - ಬೈರತಿ ಬಸವರಾಜ
ಯಶವಂತಪುರ - ಎಸ್.ಟಿ ಸೋಮಶೇಖರ್
ಮಹಾಲಕ್ಷ್ಮಿ ಲೇಔಟ್ - ಕೆ.ಗೋಪಾಲಯ್ಯ
ಕೆ.ಆರ್.ಪೇಟೆ - ನಾರಾಯಣಗೌಡ
ಕಾಂಗ್ರೆಸ್ ಗೆದ್ದ ಕ್ಷೇತ್ರ:
ಶಿವಾಜಿನಗರ - ರಿಜ್ವಾನ್ ಅರ್ಷದ್
ಹುಣಸೂರು - ಹೆಚ್.ಪಿ. ಮಂಜುನಾಥ್
ಪಕ್ಷೇತರ ಗೆಲುವು:
ಹೊಸಕೋಟೆ - ಶರತ್ ಬಚ್ಚೇಗೌಡ
2020ರ ನವೆಂಬರ್ನಲ್ಲಿ ಉಪ ಚುನಾವಣೆ:
ಚುನಾವಣಾ ತಕರಾರು ಕಾರಣದಿಂದ ತಡೆ ಹಿಡಿಯಲಾಗಿದ್ದ ರಾಜರಾಜೇಶ್ವರಿನಗರ ಮತ್ತು ಜೆಡಿಎಸ್ನ ಸತ್ಯನಾರಾಯಣ ನಿಧನದಿಂದ ತೆರವಾದ ಶಿರಾ ಕ್ಷೇತ್ರಕ್ಕೆ 2020ರ ನವೆಂಬರ್ನಲ್ಲಿ ಉಪ ಚುನಾವಣೆ ನಡೆದಿದ್ದು ಎರಡೂ ಸ್ಥಾನ ಬಿಜೆಪಿ ಅಭ್ಯರ್ಥಿಗಳ ಪಾಲಾಗಿದೆ.
ಗೆದ್ದ ಅಭ್ಯರ್ಥಿಗಳ ವಿವರ:
ರಾಜರಾಜೇಶ್ವರಿನಗರ - ಮುನಿರತ್ನ (ಬಿಜೆಪಿ)
ಶಿರಾ - ರಾಜೇಶ್ ಗೌಡ (ಬಿಜೆಪಿ)
2018ರ ಚುನಾವಣೆಯಲ್ಲಿ 104 ಸ್ಥಾನ ಪಡೆದಿದ್ದ ಬಿಜೆಪಿ ಉಪ ಚುನಾವಣೆಗಳಲ್ಲಿ ಗೆಲ್ಲುವ ಮೂಲಕ ತನ್ನ ಸ್ಥಾನವನ್ನು 119ಕ್ಕೆ ಹೆಚ್ಚಿಸಿಕೊಂಡಿದೆ. ಪ್ರತಿಪಕ್ಷ ಕಾಂಗ್ರೆಸ್ 79 ಸ್ಥಾನದಿಂದ 67ಕ್ಕೆ ಕುಸಿದಿದೆ. ಜೆಡಿಎಸ್ 38 ಸ್ಥಾನದಿಂದ 33ಕ್ಕೆ ಕುಸಿದಿದ್ದು, ಮೂರು ಸ್ಥಾನಗಳು ಖಾಲಿ ಉಳಿದಿವೆ.
ಸದ್ಯ ಮೂರು ಕ್ಷೇತ್ರಗಳಲ್ಲಿ ಮಸ್ಕಿ ಮತ್ತು ಬಸವಕಲ್ಯಾಣ ಕ್ಷೇತ್ರಕ್ಕೆ ಏಪ್ರಿಲ್ 17ರಂದು ಚುನಾವಣೆ ನಡೆಯುತ್ತಿದ್ದು, ಸಿಂದಗಿ ಕ್ಷೇತ್ರದ ಉಪ ಚುನಾವಣೆ ಬಾಕಿ ಇದೆ.
ಇದನ್ನೂ ಓದಿ: ನಮ್ಮ ನೌಕರರನ್ನು ವಜಾ ಮಾಡೋದಿದ್ದರೆ ಮಾಡಲಿ, ಅದನ್ನೂ ನೋಡಿಕೊಳ್ಳುತ್ತೇವೆ: ಕೋಡಿಹಳ್ಳಿ ಚಂದ್ರಶೇಖರ್