ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ಎಲ್ಲ ಪ್ರಾಧಿಕಾರಗಳು ಮತ್ತು ಅಕಾಡೆಮಿಗಳ ಬಲವರ್ಧನೆಗೆ ಅಗತ್ಯವಾದ ಎಲ್ಲಾ ಕ್ರಮ ಕೈಗೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಇಲಾಖೆ ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಗೆ ಬರುವ ಎಲ್ಲ ಪ್ರಾಧಿಕಾರಗಳು ಮತ್ತು ಅಕಾಡೆಮಿಗಳ ಅಧ್ಯಕ್ಷರು ಹಾಗೂ ರಂಗಾಯಣ ನಿರ್ದೇಶಕರುಗಳೊಂದಿಗೆ ವಿಕಾಸಸೌಧದಲ್ಲಿ ಇಂದು ಸಂಜೆ ಸಭೆ ನಡೆಸಿ ಮಾತನಾಡಿದ ಅವರು, ಹೊಸ ದೃಷ್ಟಿಕೋನದಿಂದ ಕಾರ್ಯಕ್ರಮ ರೂಪಿಸಿ ಜಾರಿಗೆ ತರುವ ಮೂಲಕ ಸಂಸ್ಕೃತಿ ಕಟ್ಟುವ ಕೆಲಸಕ್ಕೆ ತೊಡಗಲು ಬೇಕಾದ ಎಲ್ಲಾ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಪ್ರಾಧಿಕಾರ, ಅಕಾಡೆಮಿ ಮತ್ತು ರಂಗಾಯಣಗಳ ಹಾಗೂ ಸಂಸ್ಕೃತಿ ಇಲಾಖೆಯ ಮಧ್ಯೆ ಸುಗಮ ಸಮನ್ವಯ ಕಾರ್ಯ ನಿರ್ವಹಣೆಗಾಗಿ ರಾಜ್ಯದ ನಾಲ್ಕು ಉಪವಿಭಾಗಗಳಲ್ಲಿ ನಾಲ್ಕು ಜಂಟಿ ನಿರ್ದೇಶಕರ ನೇಮಕ ಮಾಡಲಾಗುವುದು. ಇದರಿಂದ ಅಧಿಕಾರ ವಿಕೇಂದ್ರೀಕರಣವಾಗಿ ಆಡಳಿತ ಸುಧಾರಣೆ ಆಗುತ್ತದೆ. ಈ ಕುರಿತು ಆದೇಶ ಹೊರಡಿಸಲು ಈಗಾಗಲೇ ನಿರ್ದೇಶನ ನೀಡಿದ್ದೇನೆ ಎಂದು ಹೇಳಿದರು.
ಸ್ವಾತಂತ್ರ್ಯ ಅಮೃತ ಮಹೋತ್ಸವದ ಆಚರಣೆಗಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಜೊತೆಗೂಡಿ ದೊಡ್ಡಮಟ್ಟದಲ್ಲಿ ಕಾರ್ಯಕ್ರಮ ರೂಪಿಸಿ ಅದನ್ನೊಂದು ಅಭಿಯಾನ ಮಾಡುವ ಚಿಂತನೆ ನಡೆದಿದೆ. ಅದಕ್ಕೆಪೂರಕ ವಾಗುವಂತೆ ಎಲ್ಲ ಅಕಾಡೆಮಿ ಮತ್ತು ಪ್ರಾಧಿಕಾರಗಳು ಕಾರ್ಯಕ್ರಮ ರೂಪಿಸಬೇಕು. ಮುಂದಿನ ನೂರು ದಿನಗಳಿಗೆ ಕಾರ್ಯಯೋಜನೆ ರೂಪಿಸಲು ಅವರು ಅಧಿಕಾರಿಗಳಿಗೆ ಸೂಚಿಸಿದರು.