ಬೆಂಗಳೂರು: ಕೋವಿಡ್- 19 ನಂತರ, ಟೋಕಿಯೋದಿಂದ ಮತ್ತಷ್ಟು ಹೂಡಿಕೆಯನ್ನು ಆಕರ್ಷಿಸುವ ನಿಟ್ಟಿನಲ್ಲಿ ಉಪ ಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಅವರು ದೆಹಲಿಯ ಜಪಾನ್ ರಾಯಭಾರಿ ಕಚೇರಿಯ ಹಿರಿಯ ಅಧಿಕಾರಿಗಳ ಜತೆ ಮಹತ್ವದ ಮಾತುಕತೆ ನಡೆಸಿದರು.
ಬೆಂಗಳೂರಿನಲ್ಲಿ ಸೋಮವಾರ ಐಟಿ- ಬಿಟಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಮಣ ರೆಡ್ಡಿ, ಕೈಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ ಗುಪ್ತ, ಐಟಿ ನಿರ್ದೇಶಕಿ ಮೀನಾ ನಾಗರಾಜ ಅವರೊಂದಿಗೆ ದೆಹಲಿಯಲ್ಲಿನ ಜಪಾನ್ ರಾಯಭಾರಿ ಕಚೇರಿಯ ಮುಖ್ಯಸ್ಥ ಶಿಂಗೋ ಮಿಮಯಾಮಟೋ ಮತ್ತಿತರ ಹಿರಿಯ ಅಧಿಕಾರಿಗಳ ಜತೆ ವಿಡಿಯೋ ಮೂಲಕ ಮಾತುಕತೆ ನಡೆಸಿದರು. ವಾಣಿಜ್ಯ, ಕೈಗಾರಿಕೆ ಕ್ಷೇತ್ರಗಳಲ್ಲಿ ಕರ್ನಾಟಕ-ಜಪಾನ್ ನಡುವೆ ಅತ್ಯಂತ ವಿಶ್ವಾಸಪೂರ್ಣ, ಗಾಢ ಬಾಂಧವ್ಯವಿದ್ದು ಅದನ್ನು ಮುಂದುವರೆಸಿಕೊಂಡು ಹೋಗುವುದು ಸರ್ಕಾರದ ಇಚ್ಚೆಯಾಗಿದೆ ಎಂದು ಡಿಸಿಎಂ, ಜಪಾನ್ ಪ್ರತಿನಿಧಿಗಳ ಗಮನಕ್ಕೆ ತಂದರು.
ರಾಜ್ಯದಲ್ಲಿ ಕೋವಿಡ್ ಪೂರ್ಣವಾಗಿ ಹತೋಟಿಯಲ್ಲಿದ್ದು, ಆರೋಗ್ಯ ಮತ್ತು ಚಿಕಿತ್ಸೆಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳು ಇಲ್ಲ. ಎಲ್ಲವನ್ನು ಅತ್ಯಂತ ಪರಿಣಾಮಕಾರಿಯಾಗಿ ಸರ್ಕಾರ ನಿರ್ವಹಿಸುತ್ತಿದ್ದು, ಜಪಾನ್ ಉದ್ಯೋಗಿಗಳು ಧೈರ್ಯವಾಗಿ ರಾಜ್ಯದಲ್ಲಿ ತಮ್ಮ ಚಟುವಟಿಕೆಯಲ್ಲಿ ತೊಡಗಬಹುದು ಎಂದು ಉಪ ಮುಖ್ಯಮಂತ್ರಿ ಅಭಯ ನೀಡಿದರು.
ಕೋವಿಡ್ ಬಂದ ನಂತರವಂತೂ ನಮ್ಮ ರಾಜ್ಯದ ಆರೋಗ್ಯ ಕ್ಷೇತ್ರದಲ್ಲಿ ಗುರುತರವಾದ ಸುಧಾರಣೆಗಳನ್ನು ತರಲಾಗಿದೆ. ಎಲ್ಲೆಡೆ ಚಿಕಿತ್ಸೆ ಸಿಗುವಂತೆ ಮಾಡಲಾಗಿದ್ದು, ಆಸ್ಪತ್ರೆಗಳ ವ್ಯವಸ್ಥೆಯನ್ನು ಜಾಗತಿಕ ಗುಣಮಟ್ಟದಲ್ಲಿ ಮೇಲ್ದರ್ಜೇಗೇರಿಸಲಾಗಿದೆ. ಇಡೀ ಭಾರತದಲ್ಲಿಯೇ ಬೆಂಗಳೂರು ಈ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ನಗರ, ದೇಶದ ಆರೋಗ್ಯ ರಾಜಧಾನಿ ಎಂಬುದನ್ನು ತಮ್ಮ ಗಮನಕ್ಕೆ ತರಬಯಸುತ್ತೇನೆ ಎಂದು ಅವರು ತಿಳಿಸಿದರು.
ಈಗಾಗಲೇ ಜಪಾನಿನ ಹೆಸರಾಂತ ಆರೋಗ್ಯ ಸಂಸ್ಥೆ ‘ಸಕ್ರಿಯೋ’ ಬೆಂಗಳೂರಿನಲ್ಲಿ ‘ಸಕ್ರಿ’ ಎಂಬ ಹೆಸರನಲ್ಲಿ ಅತ್ಯಾಧುನಿಕ ಆಸ್ಪತ್ರೆಯನ್ನು ಸ್ಥಾಪನೆ ಮಾಡಿದೆ. ಅನಾರೋಗ್ಯಕ್ಕೆ ತುತ್ತಾಗುವ ಜಪಾನಿ ಪ್ರಜೆಗಳಿಗೆ ಇಲ್ಲಿ ಅತ್ಯುತ್ತಮ ಚಿಕಿತ್ಸೆ ಸಿಗುತ್ತಿದೆ ಎಂದು ಡಿಸಿಎಂ ಮಾಹಿತಿ ನೀಡಿದರು.
ಹೆಲ್ಪ್ ಡೆಸ್ಕ್:
ರಾಜ್ಯದಲ್ಲಿ ಉತ್ತಮ ಆರೋಗ್ಯ ಸೌಲಭ್ಯಗಳ ಜತೆಗೆ ವಾಣಿಜ್ಯ ಹಾಗೂ ಕೈಗಾರಿಕೆಗೆ ಬೇಕಾದ ಅತ್ಯುತ್ತಮ ಪೂರಕ ವಾತಾವರಣವಿದೆ. ಇದರ ಜತೆಯಲ್ಲಿಯೇ ಕೂಡಲೇ ವಿಶೇಷವಾಗಿ ಜಪಾನ್ ‘ಹೆಲ್ಪ್ ಡೆಸ್ಕ್’ ಅನ್ನು ತೆರೆಯಲಾಗುತ್ತಿದೆ. ಕೈಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರೇ ಇದರ ನೇತೃತ್ವ ವಹಿಸುವರು. ಇದರ ಮುಖೇನ ಯಾವುದೇ ಸಮಸ್ಯೆ ಇದ್ದರೂ ಅತ್ಯಂತ ತ್ವರಿತವಾಗಿ ಬಗೆಹರಿಯಲಿದೆ ಎಂದು ಜಪಾನ್ ಸಚಿವರಿಗೆ ಡಿಸಿಎಂ ಭರವಸೆ ನೀಡಿದರು.
ಹೊಸದಾಗಿ ವಿದೇಶಿ ಬಂಡವಾಳ ಹೂಡಿಕೆ ಹಾಗೂ ಕೈಗಾರಿಕೆ ಸ್ಥಾಪಿಸಲು ಸರ್ಕಾರ ನಿಯಮಗಳನ್ನು ಸರಳಗೊಳಿಸಿದೆ. ಮುಖ್ಯ ಅಡ್ಡಿಯಾಗಿದ್ದ ಭೂಸ್ವಾಧೀನಕ್ಕೆ ಈಗ ಯಾವ ಸಮಸ್ಯೆಯೂ ಇಲ್ಲ. ಉದ್ದಿಮೆದಾರರು ನೇರವಾಗಿ ರೈತರಿಂದ ಭೂಮಿಯನ್ನು ಖರೀದಿ ಮಾಡಬಹುದು. ಇಲ್ಲಿ ಯಾವುದೇ ರೆಡ್ ಟೇಪಿಸಂ, ಮಧ್ಯಸ್ಥಿಕೆ ಇರುವುದಿಲ್ಲ ಎಂದು ಅವರು ತಿಳಿಸಿದರು.
ಆರೋಗ್ಯ ಕ್ಷೇತ್ರದಲ್ಲಿ ಹೂಡಿಕೆ ಮಾಡಿ:
ನಮ್ಮ ದೇಶದಲ್ಲಿ ಆರೋಗ್ಯ ಕ್ಷೇತ್ರ ವೇಗವಾಗಿ ಬೆಳೆಯುತ್ತಿದೆ. ಕಳೆದ ಸಾಲಿನಲ್ಲಿ ಶೇ 35ರಿಂದ 45 ಅಭಿವೃದ್ಧಿಯನ್ನು ಇದು ದಾಖಲಿಸಿದೆ. ಅದೇ ರೀತಿ ಕರ್ನಾಟಕದಲ್ಲೂ ಈ ಕ್ಷೇತ್ರ ನಾಗಾಲೋಟದಲ್ಲಿ ಮುನ್ನಡೆಯುತ್ತಿದೆ. ನುರಿತ ವೃದ್ಯರ ಜತೆಗೆ, ಅದಕ್ಕೆ ಪೂರಕವಾದ ಅತ್ಯುತ್ತಮ, ಕೌಶಲ್ಯಭರಿತ ಮಾನವ ಸಂಪನ್ಮೂಲ ಕರ್ನಾಟಕದಲ್ಲಿ ಲಭ್ಯವಿರುವುದು ಹೆಚ್ಚು ಸಹಕಾರಿ. ಹೀಗಾಗಿ ಜಪಾನಿನ ಆರೋಗ್ಯ ಕಂಪನಿಗಳು ಹೆಚ್ಚು ಹೆಚ್ಚಾಗಿ ರಾಜ್ಯದಲ್ಲಿ ಹೂಡಿಕೆ ಮಾಡಬೇಕು ಎಂಬುದು ನಮ್ಮ ಆಶಯವಾಗಿದೆ. ಇದರ ಜತೆಗೆ ಸೆಮಿಕಂಡಕ್ಟರ್, ಎಪಿಎಂ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿದರೆ ಅಗತ್ಯ ರಿಯಾಯಿತಿ, ಹೆಚ್ಚುವರಿ ಸೌಲಭ್ಯಗಳನ್ನು ನೀಡಲಾಗುವುದು ಎಂದು ಡಿಸಿಎಂ ಉದ್ದಿಮೆದಾರರಿಗೆ ಮುಕ್ತ ಭರವಸೆ ನೀಡಿದರು.
ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಜಪಾನ್ ಪ್ರಜೆಗಳಿಗೆ ಎರಡೂ ವ್ಯವಸ್ಥೆಗಳ ಮೇಲೆ ಹೆಚ್ಚು ನಂಬಿಕೆ, ವಿಶ್ವಾಸ ಮೂಡಿ ಕರ್ನಾಟಕ ಮತ್ತು ಜಪಾನ್ ನಡುವೆ ವಾಣಿಜ್ಯ ಮತ್ತು ಕೈಗಾರಿಕೋದ್ಯಮದಲ್ಲಿ ನವ ಮನ್ವಂತರ ಅತ್ಯಆರಂಭವಾಗಲಿದೆ ಎಂಬ ನಂಬಿಕೆ ತಮಗಿದೆ ಎಂದು ಡಿಸಿಎಂ ನುಡಿದರು.