ಬೆಂಗಳೂರು : ನಮ್ಮ ಸರ್ಕಾರ ಉತ್ತಮ ಆಡಳಿತದ ಮೂಲಕ ರಾಜ್ಯದಲ್ಲಿ ಪ್ರಗತಿ ಕಾಣುತ್ತಿದೆ. ಜನರ ವಿಶ್ವಾಸ ಸಂಪೂರ್ಣ ಸರ್ಕಾರ ಮತ್ತು ಬಿಜೆಪಿ ಪರವಾಗಿದೆ. 80 ಶೇಕಡಾಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಡಿಸಿಎಂ ಅಶ್ವತ್ಥ್ ನಾರಾಯಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಗ್ರಾಮ ಪಂಚಾಯತ್ ಚುನಾವಣೆ ಪಕ್ಷಾತೀತವಾಗಿ ಸ್ಪರ್ಧೆ ಮಾಡುವಂತಾಗಿದೆ. ಆದರೂ ಎಲ್ಲ ರಾಜಕೀಯ ಪಕ್ಷಗಳ ಸದಸ್ಯರು ಚುನಾವಣೆಯಲ್ಲಿ ಭಾಗವಹಿಸಲಿದ್ದಾರೆ. ಯಡಿಯೂರಪ್ಪ ನೇತೃತ್ವದಲ್ಲಿ ಉತ್ತಮ ಸುಧಾರಣೆ ಮತ್ತು ಆಡಳಿತದ ಮೂಲಕ ನಮ್ಮ ಸರ್ಕಾರ ಕಳೆದ 73 ವರ್ಷದಲ್ಲಿ ಕಾಣದ ಎಲ್ಲಾ ಸುಧಾರಣೆಗಳನ್ನು ತಂದಿದೆ. ಸಾಕಷ್ಟು ಸುಧಾರಣೆ ಕಾರ್ಯಕ್ರಮಗಳನ್ನ ತಂದಿದ್ದರಿಂದಾಗಿ ಪ್ರಗತಿ ಕಾಣುವಂತಾಗಿದೆ.
ಕೊರೊನಾ ನಿರ್ವಹಣೆ ಉತ್ತಮವಾಗಿ ಮಾಡಲಾಗಿದೆ. ಅತಿವೃಷ್ಟಿ-ಅನಾವೃಷ್ಟಿ ವೇಳೆ ಜನರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಲಾಗಿದೆ. ಸಂತ್ರಸ್ತರ ಬಳಿಗೆ ತೆರಳಿ ಅವರಿಗೆ ಸಾಂತ್ವನ ಹೇಳಿ ಅವರ ಕಷ್ಟಕ್ಕೆ ಸ್ಪಂದಿಸಲಾಗಿದೆ. ಎಲ್ಲ ರೀತಿಯ ಪರಿಹಾರವನ್ನು ಕೊಟ್ಟು ಅವರ ಜೀವನ ಸುಧಾರಣೆಗೆ ಎಲ್ಲಾ ಪ್ರಯತ್ನ ಮಾಡಲಾಗಿದೆ. ಹಾಗಾಗಿ ಜನರ ವಿಶ್ವಾಸ ಸಂಪೂರ್ಣ ನಮ್ಮ ಸರ್ಕಾರ ಮತ್ತು ಬಿಜೆಪಿ ಪರ ಇದೆ ಎಂದರು.
ಬಿಜೆಪಿ ಬೆಂಬಲಿತ ಅಭ್ಯರ್ಥಿಗಳೇ ಶೇ.80ರಷ್ಟು ಪಂಚಾಯತ್ಗಳಲ್ಲಿ ರಾಜ್ಯದ ಉದ್ದಗಲಕ್ಕೂ ಗೆಲ್ಲುವ ಸಾಧ್ಯತೆ ಇದೆ. ಖಂಡಿತ ಜಯ ನಮ್ಮದೇ ಆಗಲಿದೆ. ಗ್ರಾಮ ಸ್ವರಾಜ್ಯ ಸಮಾವೇಶಗಳನ್ನು ನಾವು ನಾಡಿನ ಉದ್ದಗಲಕ್ಕೆ ನಡೆಸುತ್ತಿದ್ದೇವೆ. ಆರು ತಂಡಗಳಾಗಿ ಎಲ್ಲಾ ಕಡೆ ಸಮಾವೇಶಗಳನ್ನು ಯಶಸ್ವಿಯಾಗಿ ಆಯೋಜಿಸುತ್ತಿದ್ದೇವೆ. ಬಿಜೆಪಿಯ ಕಮಲ ಎಲ್ಲ ಕಡೆ ಅರಳಲಿದೆ. ಪಕ್ಷಾತೀತವಾಗಿ ನಡೆಯುತ್ತಿರುವ ಚುನಾವಣೆಯಲ್ಲಿ ಹೆಚ್ಚಿನ ಪಂಚಾಯತ್ ಸದಸ್ಯರು ಬಿಜೆಪಿ ಸದಸ್ಯರೇ ಇರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಮನಗರ ಜಿಲ್ಲೆಯಲ್ಲಿ ನಮಗೆ ಹೆಚ್ಚಿನ ಸವಾಲಿದೆ. ಬಹಳ ಸದೃಢವಾಗಿ ಅಲ್ಲಿ ಜೆಡಿಎಸ್, ಕಾಂಗ್ರೆಸ್ ಬೀಡು ಬಿಟ್ಟಿದ್ದಾರೆ. ಆದರೂ ಅವರು ಅಭಿವೃದ್ಧಿ ಮಾಡಿಲ್ಲ. ಒಳ್ಳೆಯ ಕಾರ್ಯಕ್ರಮಗಳನ್ನು ಕೊಟ್ಟಿಲ್ಲ. ವ್ಯಕ್ತಿಗತವಾಗಿ ಸ್ವಜನ ಪಕ್ಷಪಾತ ಕುಟುಂಬ ರಾಜಕೀಯಕ್ಕೆ ಸೀಮಿತವಾಗಿದ್ದಾರೆ. ಜನ ವಿರೋಧಿಯಾಗಿ ಅವರು ಕೆಲಸ ಮಾಡಿದ್ದಾರೆ. ಹಾಗಾಗಿ ಜನ ಇವರನ್ನು ಒಪ್ಪುವುದಿಲ್ಲ. ಪ್ರಗತಿಪರವಾಗಿರುವ ಪಕ್ಷ ಮತ್ತು ಸುಧಾರಣೆ ಮತ್ತು ಬೆಳವಣಿಗೆ ಇರುವ ಬಿಜೆಪಿಯ ಕೈಹಿಡಿಯಲಿದ್ದಾರೆ ಎಂದರು.
ಚನ್ನಪಟ್ಟಣಕ್ಕೆ ನಾನೇ ಮುಖ್ಯಮಂತ್ರಿ ಎನ್ನುವ ಕುಮಾರಸ್ವಾಮಿ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಡಿಸಿಎಂ, ನಮ್ಮ ಕರ್ತವ್ಯ ನಾವು ಮಾಡುತ್ತೇವೆ. ಅವರ ಕರ್ತವ್ಯವನ್ನು ಅವರು ಮಾಡಲಿದ್ದಾರೆ. ಅವರು ಯಾವುದೋ ಭಾವನೆಯಲ್ಲಿ ಹೇಳಿರಬಹುದು. ಪರಿಪೂರ್ಣವಾಗಿ ಆ ಭಾಗವನ್ನು ಪ್ರತಿನಿಧಿಸುತ್ತೇವೆ.
ಸಂಪೂರ್ಣ ಜವಾಬ್ದಾರಿ ಹೊತ್ತಿರುತ್ತದೆ ಎಂದು ಹಾಗೆ ಹೇಳಿರಬೇಕು. ಆದರೆ, ಯಾವುದೇ ಕ್ಷೇತ್ರಕ್ಕೆ ಮುಖ್ಯಮಂತ್ರಿ ಸ್ಥಾನ ಇರುವುದಿಲ್ಲ. ಕ್ಷೇತ್ರಕ್ಕೆ ಮಂತ್ರಿಸ್ಥಾನ ಕೂಡ ಇರುವುದಿಲ್ಲ. ಕ್ಷೇತ್ರದ ಶಾಸಕರಾಗಿ ಅವರು ಕೆಲಸವನ್ನು ಮಾಡುತ್ತಿದ್ದಾರೆ. ಉತ್ಸಾಹದಲ್ಲಿ ಅವರು ಹೀಗೆ ಹೇಳಿಕೆ ಕೊಟ್ಟಿರಬಹುದು, ಅದಕ್ಕೆ ಹೆಚ್ಚೇನೂ ಹೇಳುವುದಿಲ್ಲ ಎಂದರು.