ಬೆಂಗಳೂರು: ನಗರದಲ್ಲಿ ಕೊರೊನಾ ಪ್ರಕರಣ ಹೆಚ್ಚಾಗಿರುವ ಹಿನ್ನೆಲೆ ಕಣ್ಗಾವಲು ಮತ್ತು ಸಾರ್ವಜನಿಕ ಆರೋಗ್ಯ ಪ್ರಯತ್ನಗಳನ್ನು ಹೆಚ್ಚಿಸಲು ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಆದೇಶ ಹೊರಡಿಸಿದ್ದಾರೆ.
ಅನ್ಲಾಕ್ -1 ಅವಧಿಯಲ್ಲಿ ಆರ್ಥಿಕ ಚಟುವಟಿಕೆ ಪುನರಾರಂಭಿಸಿರುವುದರಿಂದ ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಹಾಗೂ ಅಂತರ್ ರಾಜ್ಯ ವ್ಯಕ್ತಿಗಳ ಚಲನವಲನ ಹೆಚ್ಚುತ್ತಿರುವುದರಿಂದ ಕೋವಿಡ್-19 ಸಾಂಕ್ರಾಮಿಕ ರೋಗ ಹರಡುವಿಕೆ ನಿಯಂತ್ರಿಸುವ ಉದ್ದೇಶಕ್ಕಾಗಿ ಕಣ್ಗಾವಲು ಮತ್ತು ಸಾರ್ವಜನಿಕ ಆರೋಗ್ಯ ಪ್ರಯತ್ನಗಳು ಹೆಚ್ಚಿಗೆ ಮಾಡಬೇಕಾಗಿರುವುದು ಅನಿವಾರ್ಯವಾಗಿದೆ. ಈ ಹಿನ್ನೆಲೆ ಕೆಲ ನಿರ್ದೇಶನಗಳನ್ನು ಹೊರಡಿಸಲಾಗಿದೆ.
![CS order to increase surveillance](https://etvbharatimages.akamaized.net/etvbharat/prod-images/kn-bng-02-blrcorona-csorder-script-7201951_15062020165904_1506f_1592220544_1109.jpg)
ಒಂದೇ ಕಾರ್ಯಪಡೆ ರಚನೆ:
ಬಿಬಿಎಂಪಿಯ ಎಲ್ಲಾ ವಾರ್ಡ್ಗಳು ಮತ್ತು ಬೆಂಗಳೂರು (ನಗರ) ಮತ್ತು ಬೆಂಗಳೂರು (ಗ್ರಾಮೀಣ) ಜಿಲ್ಲೆಗಳ ಎಲ್ಲಾ ತಾಲೂಕುಗಳನ್ನು ಒಳಗೊಂಡ ಬೆಂಗಳೂರು ನಗರ ವಿಸ್ತೃತ ಪ್ರದೇಶದಲ್ಲಿ ಕೋವಿಡ್-19 ಸಾಂಕ್ರಾಮಿಕ ಹರಡುವಿಕೆ ನಿಯಂತ್ರಿಸುವ ಉದ್ದೇಶಕ್ಕೆ ಒಂದೇ ಕಾರ್ಯಪಡೆ ರಚಿಸಲು ಆದೇಶಿಸಲಾಗಿದೆ. ಬಿಬಿಎಂಪಿ ಆಯುಕ್ತರು ಈ ಕಾರ್ಯಪಡೆಯ ಮುಖ್ಯಸ್ಥರಾಗಿರುತ್ತಾರೆ.
ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮೀಣ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಜಿಲ್ಲಾ ಆರೋಗ್ಯ ಅಧಿಕಾರಿಗಳು ಮತ್ತು ಅವರ ಅಧೀನದಲ್ಲಿರುವ ಎಲ್ಲಾ ಸಿಬ್ಬಂದಿ ಕೋವಿಡ್-19 ಸಾಂಕ್ರಾಮಿಕ ಹರಡುವಿಕೆ ನಿಯಂತ್ರಿಸಲು ಹಾಗೂ ತಾಯಿ ಹಾಗೂ ಮಕ್ಕಳ ಆರೋಗ್ಯ (ಎಂಸಿಎಚ್) ಕಾರ್ಯಕ್ರಮದ ಅನುಷ್ಠಾನಕ್ಕೆ ಬಿಬಿಎಂಪಿ ಆಯುಕ್ತರ ಮಾರ್ಗದರ್ಶನದಂತೆ ಕಾರ್ಯನಿರ್ವಹಿಸುವಂತೆ ಆದೇಶಿಸಲಾಗಿದೆ.
ಕಾರ್ಯ ತಂಡಗಳ ರಚನೆ:
ಸಾಂಕ್ರಾಮಿಕ ರೋಗ ಹರಡುವಿಕೆ ನಿಯಂತ್ರಣ ಮತ್ತು ಎಂಸಿಹೆಚ್ ಕಾರ್ಯಕ್ರಮದ ಹೆಚ್ಚಿನ ಆದ್ಯತೆಯ ಕಾರ್ಯಗಳಿಗಾಗಿ 17 ಕಾರ್ಯತಂಡಗಳನ್ನು ರಚಿಸಲಾಗಿದೆ.
ಇಡೀ ಬೆಂಗಳೂರು ವಿಸ್ತೃತ ಪ್ರದೇಶದಲ್ಲಿ ನಿಯೋಜಿಸಲಾದ ಕಾರ್ಯಗಳ ಸಮಗ್ರ ಪರಿಣಾಮಕಾರಿ ಮತ್ತು ಸಮಯೋಚಿತ ಅನುಷ್ಠಾನಕ್ಕೆ ಈ ಕಾರ್ಯ ತಂಡಗಳು ಜವಾಬ್ದಾರವಾಗಿರುತ್ತವೆ.
ಬಿಬಿಎಂಪಿ ಆಯುಕ್ತರ ಜವಾಬ್ದಾರಿ ಏನು?:
ಕಾರ್ಯಪಡೆಯ ಮುಖ್ಯಸ್ಥರಾದ ಬಿಬಿಎಂಪಿ ಆಯುಕ್ತರು ಪ್ರತಿ ಕಾರ್ಯ ತಂಡದ ಕಾರ್ಯವನ್ನು ವಾರಕೊಮ್ಮೆ ಪರಿಶೀಲಿಸಬೇಕು. ತಂಡವಾರು ಅಗತ್ಯವಾದ ಬೆಂಬಲವನ್ನು ಒದಗಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಬೇಕು ಮತ್ತು ಸಂಬಂಧಿತ ತಂಡವು ಅದರ ನಿಯೋಜಿತ ಕಾರ್ಯ ಅನುಷ್ಠಾನವನ್ನು ಸುಧಾರಿಸಲು ಮಾರ್ಗದರ್ಶನ ನೀಡುವುದು, ಬಳಿಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಕಾರ್ಯಕಾರಿ ಸಮಿತಿಗೆ ವಾರಕೊಮ್ಮ ವರದಿ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.