ಬೆಂಗಳೂರು : ರ್ಯಾಪಿಡೋ ಟ್ಯಾಕ್ಸಿ ಕಚೇರಿಯ ಬಳಿ ದಾಂಧಲೆ ನಡೆಸಿದ ಆರೋಪದಡಿ ಬೆಂಗಳೂರು ಸಾರಥಿ ಸೇನೆ ಸಂಘಟನೆಯ ಸದಸ್ಯರ ವಿರುದ್ಧ ಪ್ರಕರಣ ದಾಖಲಾಗಿದೆ. ಜುಲೈ 18ರಂದು ಮಧ್ಯಾಹ್ನ ಎಚ್ಎಸ್ಆರ್ ಲೇಔಟ್ ನಲ್ಲಿರುವ ರ್ಯಾಪಿಡೋ ಕಚೇರಿಯ ಬಳಿ ಬಂದು ಗಲಾಟೆ ಮಾಡಿ 1.40 ಲಕ್ಷ ಮೌಲ್ಯದ ಪರಿಕರಣಗಳನ್ನ ಕದ್ದೊಯ್ದಿದ್ದಾರೆ ಎಂದು ರ್ಯಾಪಿಡೋ ಟ್ಯಾಕ್ಸಿ ಕಚೇರಿ ಆರೋಪಿಸಿ ದೂರು ನೀಡಿದೆ. ಈ ಹಿನ್ನೆಲೆ ಸಾರಥಿ ಸೇನೆ ಸಂಘಟನೆಯ ಸದಸ್ಯರ ವಿರುದ್ಧ ದೂರು ದಾಖಲಾಗಿದೆ.
ನಡೆದಿದ್ದೇನು..?: ಜುಲೈ 18ರಂದು ಮದ್ಯಾಹ್ನ ರ್ಯಾಪಿಡೋ ಕಂಪನಿಯಿಂದ ಅದರ ಚಾಲಕರಿಗೆ ರೈನ್ ಕರ್ಟನ್ಸ್ ವಿತರಣೆ ಹಾಗೂ ಆಟೋಗಳಿಗೆ ಸೀಟ್ ಬೆಲ್ಟ್, ಚಾರ್ಜಿಂಗ್ ಪಾಯಿಂಟ್ ಅಳವಡಿಸುವ ಕೆಲಸ ನಡೆಯುತ್ತಿತ್ತು.ಈ ವೇಳೆ ಸ್ಥಳಕ್ಕೆ ಬಂದ ಸಾರಥಿ ಸೇನೆ ಹೆಸರಿನ ಸಂಘಟನೆಯ ಸದಸ್ಯರು, ಸಾಮಾಜಿಕ ಜಾಲತಾಣಗಳಲ್ಲಿ ಲೈವ್ ವಿಡಿಯೋ ಚಿತ್ರೀಕರಿಸುತ್ತಾ ಗಲಾಟೆ ಆರಂಭಿಸಿದ್ದರು ಎನ್ನಲಾಗಿದೆ.
ಬೆದರಿಕೆ, ಕಳ್ಳತನ ಆರೋಪ: ರ್ಯಾಪಿಡೋದ ಕಾರ್ಯವನ್ನ ವಿರೋಧಿಸುತ್ತಾ ಅದರ ಸಿಬ್ಬಂದಿ, ಚಾಲಕರುಗಳನ್ನ ಬೆದರಿಸಿದ್ದಾರೆ. ಅಲ್ಲದೇ ರ್ಯಾಪಿಡೋ ಸಿಬ್ಬಂದಿಯ ಸುಪರ್ದಿಯಲ್ಲಿದ್ದ ರೈನ್ ಕರ್ಟನ್ಸ್, ಸೀಟ್ ಬೆಲ್ಟ್ಸ್, ಚಾರ್ಜಿಂಗ್ ಪಾಯಿಂಟ್ಸ್ ಸೇರಿದಂತೆ 1.40 ಲಕ್ಷ ಮೌಲ್ಯದ ಪರಿಕರಣಗಳನ್ನ ಸಾರಥಿ ಸೇನೆ ಕಾರ್ಯಕರ್ತರು ಕದ್ದೊಯ್ದಿರುವುದಾಗಿ ದೂರಲಾಗಿದೆ. ಸದ್ಯ ರೆಡ್ಡಿ ಪ್ರಸಾದ್ ಎಂಬುವರು ನೀಡಿರುವ ದೂರಿನನ್ವಯ ಸಾರಥಿ ಸೇನೆ ಸಂಘಟನೆಯ ಸದಸ್ಯರ ವಿರುದ್ಧ ಎಚ್ಎಸ್ಆರ್ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಧ್ಯಮ ಪ್ರಕಟಣೆ: "ತನ್ನ ಗ್ರಾಹಕರು ಹಾಗೂ ಚಾಲಕರ ಸುರಕ್ಷತೆಯ ದೃಷ್ಟಿಯಿಂದ ರ್ಯಾಪಿಡೋ ಹೊಸ ಹೊಸ ಕ್ರಮಗಳನ್ನ ಅಳವಡಿಸಿಕೊಳ್ಳುತ್ತಿದೆ. ನಗರದಲ್ಲಿ ಬೈಕ್ ಟ್ಯಾಕ್ಸಿ ಸೇವೆ ಮತ್ತು ಅದರ ಜನಪ್ರಿಯತೆಯನ್ನ ಸಹಿಸದೇ ಆಟೋ ಚಾಲಕರ ಸಂಘಟನೆಗಳು ಆರಂಭದಿಂದಲೂ ವಿರೋಧಿಸುತ್ತಿವೆ. ಸಾರ್ವಜನಿಕರಿಗೆ ಅನುಕೂಲಕರ ಮತ್ತು ಕೈಗೆಟುಕುವ ಸೇವೆಗಳನ್ನು ಒದಗಿಸುವ ಪರ್ಯಾಯ ಸಾರಿಗೆ ವಿಧಾನಗಳನ್ನು ಒಪ್ಪದೇ ಆಟೋ ಚಾಲಕರ ಒಕ್ಕೂಟಗಳ ಈ ರೀತಿಯ ದಿಟ್ಟತನ ತೋರಿರುವುದು ಕಾನೂನು ಮತ್ತು ಸುವ್ಯವಸ್ಥೆಯ ಸಂಪೂರ್ಣ ನಿರ್ಲಕ್ಷ್ಯವನ್ನು ಪ್ರದರ್ಶಿಸುತ್ತದೆ ಎಂದು ರ್ಯಾಪಿಡೋ ಕಂಪನಿ ಮಾಧ್ಯಮ ಪ್ರಕಟಣೆ ಹೊರಡಿಸುವ ಮೂಲಕ ಮಾಹಿತಿ ಹಂಚಿಕೊಂಡಿದೆ.
ಓದಿ: ಯುವತಿ ಜೊತೆ ಚಾಲಕ ಅನುಚಿತ ವರ್ತನೆ: ಚಲಿಸುತ್ತಿದ್ದ ರ್ಯಾಪಿಡೊ ಬೈಕ್ನಿಂದ ಜಿಗಿದ ಯುವತಿ
ರ್ಯಾಪಿಡೋ ಕ್ಯಾಪ್ಟನ್ ಮೇಲೆ ಆಟೋ ಚಾಲಕನ ದರ್ಪ: ಮಾರ್ಚ್ನಲ್ಲಿ ರ್ಯಾಪಿಡೋ ಕ್ಯಾಪ್ಟನ್ ತಡೆದ ಆಟೋ ಚಾಲಕನೊಬ್ಬ ಆತನ ಕೈಯಲ್ಲಿದ್ದ ಹೆಲ್ಮೆಟ್ ಒಡೆದು ಹಾಕಿ ಸಾರ್ವಜನಿಕವಾಗಿ ಅವಾಚ್ಯ ಶಬ್ಧಗಳಿಂದ ನಿಂದಿಸುವ ಜೊತೆಗೆ ಅನುಚಿತವಾಗಿ ವರ್ತಿಸಿರುವ ಘಟನೆ ಇಂದಿರಾನಗರ ಮೆಟ್ರೋ ನಿಲ್ದಾಣದ ಬಳಿ ನಡೆದಿತ್ತು. ನಿಲ್ದಾಣದ ಬಳಿ ಗ್ರಾಹಕರನ್ನು ತನ್ನ ಸ್ಕೂಟರ್ಗೆ ಹತ್ತಿಸಿಕೊಂಡ ಎಂಬ ಕಾರಣಕ್ಕೆ ರೊಚ್ಚಿಗೆದ್ದ ಆಟೋ ಚಾಲಕ, ಪುಡಿ ರೌಡಿಯಂತೆ ಪುಂಡಾಟಿಕೆ ಮೆರೆದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ದೇಶದ ವಿವಿಧ ಮಹಾನಗರಗಳಲ್ಲಿ ರ್ಯಾಪಿಡೋ ಸೇರಿದಂತೆ ಹಲವು ಆ್ಯಪ್ ಆಧಾರಿತ ದ್ವಿಚಕ್ರ ವಾಹನ ಟ್ಯಾಕ್ಸಿ ಸೇವೆಗಳು ಈಗಾಗಲೇ ಚಾಲ್ತಿಯಲ್ಲಿವೆ. ಆಟೋ, ಟ್ಯಾಕ್ಸಿಗಿಂತಲೂ ಕಡಿಮೆ ದರದಲ್ಲಿ ಸೇವೆ ನೀಡುತ್ತಿರುವುದರಿಂದ ಜನರು ಹೆಚ್ಚೆಚ್ಚು ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆಗಳತ್ತ ಮುಖ ಮಾಡುತ್ತಿದ್ದಾರೆ. ಇದರಿಂದಾಗಿ ದಿನದ ದುಡಿಮೆ ನಂಬಿಕೊಂಡು ಬದುಕುವ ಆಟೋ ಚಾಲಕರಿಗೆ ಗ್ರಾಹಕರ ಸಂಖ್ಯೆ ಕಡಿಮೆಯಾಗುತ್ತಿದೆ. ಅಲ್ಲದೆ, ರ್ಯಾಪಿಡೋದಂತಹ ಸಂಸ್ಥೆಗಳು ಯಾವುದೇ ದಾಖಲೆಗಳನ್ನ ಪಡೆಯದೇ ಅನ್ಯ ರಾಜ್ಯ, ದೇಶದವರನ್ನು ಬೇಕಾದರೂ ಕೆಲಸಕ್ಕೆ ನೇಮಿಸಿಕೊಳ್ಳುತ್ತಿವೆ. ಸರ್ಕಾರ ಇದಕ್ಕೆ ಕಡಿವಾಣ ಹಾಕಬೇಕು ಎನ್ನುವುದು ಆಟೋ ಚಾಲಕರ ವಾದವಾಗಿದೆ. ಇದೇ ನಿಟ್ಟಿನಲ್ಲಿ ಆಗಾಗ್ಗೆ ಈ ರೀತಿ ಬೈಕ್, ಟ್ಯಾಕ್ಸಿ ಚಾಲಕರನ್ನ ತಡೆದು ನಿಂದಿಸುವುದು, ಧಮ್ಕಿ ಹಾಕುವಂತಹ ಘಟನೆಗಳು ನಡೆಯುತ್ತಲೇ ಇವೆ.