ಬೆಂಗಳೂರು : ವಿಧಾನ ಪರಿಷತ್ ಕಲಾಪದಲ್ಲಿ 420 ಸಂಖ್ಯೆ ಸದ್ದು ಮಾಡಿತು. ಆಡಳಿತ ಪಕ್ಷವನ್ನು ಟೀಕಿಸಲು 420 ಪದ ಬಳಸಿಕೊಂಡ ಕಾಂಗ್ರೆಸ್ ವಿರುದ್ಧ ಬಿಜೆಪಿ ತಿರುಗಿಬಿದ್ದಿದ್ದು, ಆರೋಪ ಪ್ರತ್ಯಾರೋಪಗಳಿಗೆ ಕಲಾಪ ಸಾಕ್ಷಿಯಾಯಿತು.
ವಿಧಾನ ಪರಿಷತ್ನಲ್ಲಿ 2022-23 ನೇ ಸಾಲಿನ ಆಯವ್ಯಯ ಅಂದಾಜುಗಳ ಮೇಲಿನ ಸಾಮಾನ್ಯ ಚರ್ಚೆಯಲ್ಲಿ ಆರಂಭಿಕರಾಗಿ ಮಾತನಾಡಿದ ಪ್ರತಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್, ಬಿಜೆಪಿ ಸರ್ಕಾರದ ಬಜೆಟ್ನ್ನ ಟೀಕಿಸಿದರು. ಕಳೆದ ಬಾರಿ ಘೋಷಣೆ ಮಾಡಿದ್ದ ಯೋಜನೆಗಳಲ್ಲಿ ಯಾವ ಯಾವ ಯೋಜನೆಗಳನ್ನು ಕೈಬಿಡಲಾಗಿದೆ, ಬಜೆಟ್ ಸಾಧನೆ ಏನು ಎನ್ನುವ ಕುರಿತು ವಿಸ್ತೃತವಾಗಿ ವಿವರ ನೀಡಿದರು.
ಬಿಜೆಪಿ ಕಾಲೆಳೆದ ಹರಿಪ್ರಸಾದ್ : ಕಳೆದ ಬಜೆಟ್ನಲ್ಲಿ 430 ಯೋಜನೆಗಳ ಘೋಷಣೆ ಇದೆ, ಆದರೆ ಇದು 420 ಅಂತಾ ಇದ್ದಿದ್ದರೆ ಚೆನ್ನಾಗಿತ್ತು ಎಂದು ಬಿಜೆಪಿ ಕಾಲೆಳೆದ ಹರಿಪ್ರಸಾದ್, ಕಳೆದ ಬಜೆಟ್ನಲ್ಲಿ ಘೋಷಿಸಿದ್ದರಲ್ಲಿ 200 ಕ್ಕೂ ಹೆಚ್ಚಿನ ಯೋಜನೆಗಳು ಜಾರಿಯಾಗಿಲ್ಲ ಎಂದು ಆರೋಪಿಸಿದರು.
420 ಪದ ಬಳಕೆಗೆ ಬಿಜೆಪಿ ಸದಸ್ಯರಾದ ಎನ್.ರವಿಕುಮಾರ್ ಮತ್ತು ಪ್ರಾಣೇಶ್ ಆಕ್ಷೇಪ ವ್ಯಕ್ತಪಡಿಸಿದರು. ಈ ರೀತಿಯ ಪದಬಳಕೆ ಸರಿಯಲ್ಲ, ನಿಮ್ಮ ಬಗ್ಗೆ ಗೌರವವಿದೆ, ಈ ರೀತಿಯ ಹೇಳಿಕೆ ಸರಿಯಲ್ಲ ಎಂದರು. ಈ ವೇಳೆ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಗದ್ದಲದ ನಡುವೆ ಮಾತು ಮುಂದುವರೆಸಿದ ಹರಿಪ್ರಸಾದ್, ಬಿಜೆಪಿಯವರು ಸಭೆ ಮಾಡಿದ್ದಾರೆ, ಹರಿಪ್ರಸಾದ್ಗೆ ಮಾತನಾಡಲು ಬಿಡಬೇಡಿ ಎಂದು ನಿರ್ದೇಶಿಸಿ ಸದಸ್ಯರನ್ನು ಸದನಕ್ಕೆ ಕಳುಹಿಸಿದ್ದಾರೆ. ಹಾಗೇನಾದರೂ ನಿಮ್ಮ ಅಜೆಂಡಾ ಇದ್ದರೆ ಹೇಳಿ, ನಾನು ಒಂದು ಕೈ ನೋಡಿಕೊಳ್ಳುತ್ತೇನೆ ಎಂದು ಆಡಳಿತ ಪಕ್ಷದ ಸದಸ್ಯರ ವಾಗ್ದಾಳಿಗೆ ತಿರುಗೇಟು ನೀಡಿದರು.
ಮೋದಿ ವಿರುದ್ಧ ಹರಿಪ್ರಸಾದ್ ಪರೋಕ್ಷ ಟಾಂಗ್ : ನಾನು ಯಾವುದೇ ಚುನಾವಣೆಗೆ ನಿಂತು ಗೆಲ್ಲದೇ ನೇರವಾಗಿ ಮುಖ್ಯಮಂತ್ರಿ, ಪ್ರಧಾನ ಮಂತ್ರಿ ಆದವನಲ್ಲ. ನಾನು ಚುನಾವಣೆಗೆ ನಿಲ್ಲುತ್ತಿದ್ದೇನೆ, ಸೋಲುತ್ತಿದ್ದೇನೆ ಎಂದು ಸಿಎಂ ಆದ ನಂತರ ಶಾಸಕರಾಗಿ ಆಯ್ಕೆಯಾಗಿದ್ದ ಮತ್ತು ಸಂಸದನಾಗುವ ಮುನ್ನವೇ ಪ್ರಧಾನಿ ಅಭ್ಯರ್ಥಿ ಆಗಿ ಘೋಷಿಸಲ್ಪಟ್ಟಿದ್ದ ಮೋದಿ ಅವರನ್ನು ಹೆಸರೇಳದೆ ಉದಾಹರಿಸಿ ಟೀಕಿಸಿದರು. ನಿಮ್ಮ ರೀತಿ ಜಾತಿ ಹಣ ಇರಿಸಿಕೊಂಡು ಚುನಾವಣೆ ಮಾಡಿಲ್ಲ, ಕ್ರಿಮಿನಲ್ ನಾನಲ್ಲ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.
ಇದು ಡಬಲ್ ಇಂಜಿನ್ ಸರ್ಕಾರ ಎಂದು ಹೇಳಿಕೊಳ್ಳುತ್ತಿದೆ. ಈ ಇಂಜಿನ್ಗೆ ಡೀಸೆಲ್, ಪೆಟ್ರೋಲ್, ವಿದ್ಯುತ್ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಇಂಜಿನ್ ಮಾತ್ರ ಇದೆ ಎಂದು ರಾಜ್ಯ ಹಾಗು ಕೇಂದ್ರ ಸರ್ಕಾರದ ಧೋರಣೆ ಬಗ್ಗೆ ಹರಿಪ್ರಸಾದ್ ವ್ಯಂಗ್ಯವಾಡಿದರು.
ಸದನದಲ್ಲಿ ಕನ್ನಡ, ಇಂಗ್ಲಿಷ್, ಹಿಂದಿಯಲ್ಲಿ ಮಾತನಾಡಬಹುದು : ಕೈಬಿಟ್ಟ ಯೋಜನೆಗಳ ಹೆಸರನ್ನು ಇಂಗ್ಲಿಷ್ ನಲ್ಲಿ ಹೇಳುತ್ತಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸದಸ್ಯ ಪ್ರಾಣೇಶ್, ಕನ್ನಡದಲ್ಲಿ ಹೇಳಿದರೆ ನಾವು ಅರ್ಥ ಮಾಡಿಕೊಳ್ಳಬಹುದು, ನಮಗೆ ಇಂಗ್ಲಿಷ್ ಅರ್ಥ ಆಗಲ್ಲ ಎಂದರು. ಇದಕ್ಕೆ ಟಾಂಗ್ ನೀಡಿದ ಹರಿಪ್ರಸಾದ್, ಸದನದಲ್ಲಿ ಕನ್ನಡ, ಇಂಗ್ಲಿಷ್, ಹಿಂದಿಯಲ್ಲಿ ಮಾತನಾಡಬಹುದಾಗಿದೆ. ನನಗೆ ಬೇಕಾದ ಭಾಷೆಯಲ್ಲಿ ಮಾತನಾಡುತ್ತೇನೆ, ಸದ್ಯ ಸಂಸ್ಕೃತದಲ್ಲಿ ಮಾತನಾಡಿ ಎಂದಿಲ್ಲವಲ್ಲ ಎಂದರು.
ತಕ್ಷಣವೇ ಎಚ್ಚೆತ್ತ ಸಭಾಪತಿ ಬಸವರಾಜ ಹೊರಟ್ಟಿ ಸದನದಲ್ಲಿ ಹಿಂದಿ ಅಭಿಯಾನದಂತಹ ಸನ್ನಿವೇಶ ಎದುರಾದರೆ ಕಷ್ಟ ಎಂದು ಹಿಂದಿಗೆ ಅವಕಾಶವಿಲ್ಲ. ಬರೀ ಕನ್ನಡ ಮತ್ತು ಇಂಗ್ಲಿಷ್ನಲ್ಲಿ ಮಾತ್ರ ಮಾತನಾಡಬೇಕು ಎಂದು ಸೂಚಿಸಿ ಯಾವ ಭಾಷೆಯಲ್ಲಿ ಮಾತನಾಡಬೇಕು ಎನ್ನುವ ಚರ್ಚೆಗೆ ತೆರೆ ಎಳೆದರು.
ನೀವು ಹೇಳಿದಂತೆ ಕೇಳಲು ನಾನು ಬಂದಿಲ್ಲ : ಈ ವೇಳೆ ಬಿಜೆಪಿ ಸದಸ್ಯ ಎನ್ ರವಿಕುಮಾರ್, ಬರೀ ಕೈಬಿಟ್ಟ ಯೋಜನೆಗಳ ಬಗ್ಗೆ ಮಾತ್ರ ಯಾಕೆ ಮಾತನಾಡುತ್ತಿದ್ದೀರಿ, ಹೊಸದಾಗಿ ಸೇರಿಸಿದ್ದನ್ನೂ ಹೇಳಿ ಎಂದರು. ರವಿಕುಮಾರ್ ಹೇಳಿಕೆಗೆ ಕಿಡಿಕಾರಿದ ಹರಿಪ್ರಸಾದ್, ನಾನೇನು ಹೊಗಳುಭಟ್ಟನಾ? ನಾನು ಹೊಗಳಲು ಬಂದಿಲ್ಲ, ಕೈಬಿಟ್ಟಿರುವುದನ್ನು ಹೇಳುತ್ತಿದ್ದೇನೆ, ನೀವು ಹೇಳಿದಂತೆ ಕೇಳಲು ಬಂದಿಲ್ಲ ಎಂದು ಟಾಂಗ್ ನೀಡಿದರು.
ಎಪಿಜೆ ಅಬ್ದುಲ್ ಕಲಾಂ ಬಿಜೆಪಿಗೆ ತಿಳಿ ಹೇಳಿದ್ದರು : ಬಿಜೆಪಿಯವರೇ ಆಯ್ಕೆ ಮಾಡಿದ್ದ ಅಂದಿನ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಒಸ್ಮಾನಿಯಾ ವಿವಿಯಲ್ಲಿ ಭಾಷಣ ಮಾಡುವಾಗ ವಿರೋಧ ಪಕ್ಷದಲ್ಲಿದ್ದೀವಿ ಎಂದು ಆಡಳಿತ ಪಕ್ಷವನ್ನು ಟೀಕಿಸುವುದಲ್ಲ. ನಮ್ಮ ದೇಶ ಅಕ್ಕಿ, ಗೋಧಿ ಉತ್ಪಾದನೆಯಲ್ಲಿ 2 ನೇ ಸ್ಥಾನ, ಹಾಲು ಉತ್ಪಾದನೆಯಲ್ಲಿ ಮೊದಲ ಸ್ಥಾನ, ಹಣ್ಣು, ತರಕಾರಿ ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಬಾಹ್ಯಾಕಾಶ ವಿಜ್ಞಾನದಲ್ಲಿ ಮೂರನೇ ಸ್ಥಾನ, ಅಣು ತಂತ್ರಜ್ಞಾನದಲ್ಲಿ 5 ನೇ ಸ್ಥಾನದಲ್ಲಿದೆ. ಇದಕ್ಕೆಲ್ಲಾ 62 ವರ್ಷ ಆಡಳಿತ ನಡೆಸಿದ ಸರ್ಕಾರ ಕಾರಣವಲ್ಲವೇ ಎಂದು ಬಿಜೆಪಿಗೆ ತಿಳಿಹೇಳಿದ್ದರು ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.