ಬೆಂಗಳೂರು : ರಾಜ್ಯದಲ್ಲಿ ಪಾರದರ್ಶಕ ಟೆಂಡರ್ ನಡೆಸುವ ಕಾರಣಕ್ಕಾಗಿ ಇ-ಟೆಂಡರ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿತ್ತು. ಆದರೆ ಇ- ಟೆಂಡರ್ ಪೋರ್ಟಲ್ಗೆ ಕನ್ನ ಹಾಕಿರುವ ನೆಪ ಒಡ್ಡಿ ಇ-ಆಡಳಿತ ಇಲಾಖೆಯೇ ಭರ್ಜರಿ ವ್ಯಾಪಾರಕ್ಕೆ ನಿಂತಿದೆ ಎಂದು ಜೆಡಿಎಸ್ನ ರಾಷ್ಟ್ರೀಯ ವಕ್ತಾರ ರಮೇಶ್ ಬಾಬು ಟೀಕಿಸಿದ್ದಾರೆ.
ಸರ್ಕಾರಿ ಇಲಾಖೆಯಲ್ಲಿ ಟೆಂಡರ್ ವ್ಯವಸ್ಥೆಯಲ್ಲಿ ಪ್ರಭಾವ, ಭ್ರಷ್ಟಾಚಾರ, ಬಲ ಪ್ರಯೋಗ, ಅಧಿಕಾರ ದುರುಪಯೋಗ, ನಿಧಾನಗತಿ, ಅಕ್ರಮ ದಂಧೆ ನಿಲ್ಲಿಸುವ ಮೂಲ ಉದ್ದೇಶ ಹೊಂದಲಾಗಿತ್ತು. ಆದರೆ ಇ-ಆಡಳಿತ ಇಲಾಖೆಯೇ ಈ ಪೋರ್ಟಲ್ಗೆ ಕನ್ನ ಹಾಕಿದೆ. ಇದು ಈ ರಾಜ್ಯದ ದುರಂತ ಮತ್ತು ಇ-ಆಡಳಿತಕ್ಕೆ ಕಪ್ಪು ಚುಕ್ಕೆ ಎಂದು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಒಂದು ತಿಂಗಳಲ್ಲಿ ಪೋರ್ಟಲ್ಗೆ ಕನ್ನ ಹಾಕಿರುವ ಸುದ್ದಿ ಹರಡಲಾಯಿತು. ಇದು ನಿಜವಾಗಿದ್ದರೆ ತನಿಖೆ ಮಾಡಿ ಆರೋಪಿಗಳನ್ನು ಪತ್ತೆ ಹಚ್ಚಲು ಏನು ತೊಂದರೆ ಇತ್ತು. ಕನ್ನ ಹಾಕಿದ್ದರೆ ಯಾರು ಮತ್ತು ಏಕೆ ಎಂದು ಸರ್ಕಾರ ಸಾರ್ವಜನಿಕವಾಗಿ ಉತ್ತರಿಸಬೇಕಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಇಲಾಖೆಯ ಸಿಬ್ಬಂದಿ ಪೋರ್ಟಲ್ಗೆ ಕನ್ನ ಹಾಕಿರುವ ನಾಟಕದಲ್ಲಿ ಮತ್ತು ಮೋಸದಲ್ಲಿ ಶಾಮಿಲಾಗಿದ್ದಾರೆ. ಇ-ಟೆಂಡರ್ನಲ್ಲಿ ಖದೀಮರಿಗೆ ಅನುಕೂಲ ಮಾಡಲು ಮತ್ತು ಇ ಟೆಂಡರ್ ಹಣವನ್ನು ಬಿಡ್ ದಾರರಿಗೆ ವಾಪಸ್ ನೀಡಲು ದಂಧೆ ಪ್ರಾರಂಭಿಸಿದ್ದಾರೆ. ಸರ್ಕಾರ ಎಲ್ಲ ಅವ್ಯವಹಾರ ತನಿಖೆಗೆ ಆದೇಶ ನೀಡಿದರೆ ಸತ್ಯ ಆಚೆಗೆ ಬರಲಿದೆ. ಜನಸಾಮಾನ್ಯರು ಇ- ಪೋರ್ಟಲ್ ಖನ್ನ ಆರೋಪದಲ್ಲಿ ರಾಜ್ಯ ಸರ್ಕಾರದ ತಟಸ್ಥ ನೀತಿಯನ್ನು ಅನುಮಾನದಿಂದ ನೋಡುತ್ತಿದ್ದಾರೆ. ರಾಜ್ಯದ ಇ-ಆಡಳಿತದಲ್ಲಿ ಮೊದಲ ಬಾರಿಗೆ ಟೆಂಡರ್ ಪೋರ್ಟಲ್ ಕನ್ನ ಆರೋಪ ಕೇಳಿಬಂದಿದೆ. ಸರ್ಕಾರ ಇದುವರೆಗೆ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಯಾವ ಅಧಿಕಾರಿಯ ಮೇಲೂ ಕ್ರಮ ತೆಗೆದುಕೊಂಡಿಲ್ಲ. ಇದು ಬಹಳಷ್ಟು ಅನುಮಾನಗಳಿಗೆ ಅವಕಾಶ ನೀಡಿದೆ ಎಂದು ದೂರಿದ್ದಾರೆ.
ಪೋರ್ಟಲ್ಗೆ ಕನ್ನ ಹಾಕಿದ್ದರೆ ಈಗಲೂ ಇ-ಟೆಂಡರ್ ಮಾಡಲು ಹೇಗೆ ಸಾಧ್ಯ. ತಮಗೆ ಬೇಕಾದ ಇ- ಟೆಂಡರ್ ಈಗಲೂ ನಡೆಯುತ್ತಿದೆ. ಕಮೀಷನ್ ನೀಡಿದವರಿಗೆ ಇಎಂಡಿ ಹಣ ವಾಪಸ್ ನೀಡಲಾಗುತ್ತಿದೆ. ಇದರಿಂದ ಕೆಲವು ಇಲಾಖಾ ಅಧಿಕಾರಿಗಳು ಭಾಗಿಯಾಗಿರುವುದು ಕಂಡುಬರುತ್ತಿದೆ. ಈ ಕೂಡಲೇ ಕ್ರಮ ಕೈಗೊಳ್ಳಬೇಕು ಮತ್ತು ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತಿನಲ್ಲಿ ಇಟ್ಟು ತನಿಖೆಗೆ ಆದೇಶ ನೀಡಬೇಕು ಎಂದು ಮುಖ್ಯಮಂತ್ರಿ ಅವರನ್ನು ಒತ್ತಾಯಿಸಿದ್ದಾರೆ.
ಇ-ಟೆಂಡರ್ ನಲ್ಲಿ ಇ ಎಂ ಡಿ ಪಾವತಿ ಮಾಡಿ ಒಂದು ತಿಂಗಳಾದರೂ ವಾಪಸ್ ನೀಡದ ಗುತ್ತಿಗೆದಾರರಿಗೆ ಮಾಸಿಕ ಶೇ. 2 ರ ಬಡ್ಡಿಯನ್ನು ನೀಡಿ ವಾಪಸ್ ಮಾಡಬೇಕು. ಈ ನಷ್ಟವನ್ನು ಸಂಬಂಧಪಟ್ಟ ಇಲಾಖಾ ನೌಕರರಿಂದ ವಸೂಲಿ ಮಾಡಲು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.