ಬೆಂಗಳೂರು: ಬೆಳ್ಳಂಬೆಳಗ್ಗೆ ಕಾರ್ಯಾಚರಣೆ ನಡೆಸಿರುವ ನಗರ ಪೊಲೀಸರು ಕೊಲೆ ಆರೋಪಿಯೊಬ್ಬನ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ.
ರವಿ ಅಲಿಯಾಸ್ ಕಮ್ರಾನ್ ರವಿ ಬಾಗಲೂರು ಬಂಧಿತ ಆರೋಪಿ. ಹಳೇ ದ್ವೇಷದ ಹಿನ್ನೆಲೆ ಮಾರ್ಚ್ 10ರಂದು ಮಿಟ್ಟಗಾನಹಳ್ಳಿ ಉಮಾಶಂಕರ್ ಅಲಿಯಾಸ್ ದೊಂಗ ಎಂಬಾತನನ್ನು ರವಿ ಹಾಗೂ ಆತನ ಸಹಚರರು ಸೇರಿ ಕೊಲೆ ಮಾಡಿ ಅಪಘಾತದ ಮಾದರಿಯಲ್ಲಿ ಬಿಂಬಿಸಲು ಯತ್ನಿಸಿದ್ದರು. ಆದರೆ ಹತ್ಯೆಯಾದ ಉಮಾಶಂಕರ್ ಪತ್ನಿ ಧನಲಕ್ಷ್ಮೀಯ ಹೇಳಿಕೆಯನ್ವಯ ಕೊಲೆ ಪ್ರಕರಣ ದಾಖಲಾಗಿತ್ತು. ಬಳಿಕ ಬಾಗಲೂರು ಠಾಣಾ ಇನ್ಸ್ಪೆಕ್ಟರ್ ಬಿ.ರಾಮಮೂರ್ತಿ ತಂಡ ಸ್ಥಳದ ಸಿಸಿಟಿವಿ ಪರಿಶೀಲಿಸಿದಾಗ ಆರೋಪಿಗಳ ಚಲನವಲನ ಸೆರೆಯಾಗಿತ್ತು. ಹೀಗಾಗಿ ಕೊಲೆ ಪ್ರಕರಣ ದಾಖಲಿಸಿಕೊಂಡ ಬಾಗಲೂರು ಠಾಣಾ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸಿತ್ತು.
ಇಂದು ಖಚಿತ ಮಾಹಿತಿ ಮೇರೆಗೆ ಆರೋಪಿಗಳಾದ ರವಿ ಹಾಗೂ ರಾಜೇಶನನ್ನ ಬಂಧಿಸಲು ಪೊಲೀಸರು ತೆರಳಿದ್ದರು. ಈ ವೇಳೆ ಪ್ರಮುಖ ಆರೋಪಿ ರವಿ ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾಗಿದ್ದಾನೆ. ಬಾಗಲೂರು ಠಾಣಾ ಇನ್ಸ್ಪೆಕ್ಟರ್ ಶರಣಾಗುವಂತೆ ಸೂಚಿಸಿದ್ದರೂ ಬಗ್ಗದ ಆರೋಪಿ, ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಲು ಮುಂದಾಗಿದ್ದಾನೆ. ತಕ್ಷಣ ಇನ್ಸ್ಪೆಕ್ಟರ್ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ, ಮತ್ತೊಂದು ಗುಂಡು ಕಾಲಿಗೆ ಹೊಡೆದು ಬಂಧಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಂಧಿತ ಆರೋಪಿ ಮೇಲೆ ವಿವಿಧ ಠಾಣೆಗಳಲ್ಲಿ ಕೊಲೆ, ಕೊಲೆ ಯತ್ನ, ಡಕಾಯಿತಿ ಪ್ರಕರಣ ದಾಖಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಗಿದ ನಂತರ ಪೊಲೀಸರು ವಿಚಾರಣೆ ಮುಂದುವರೆಸಲಿದ್ದಾರೆ.