ಬೆಂಗಳೂರು: ಕಾಂಗ್ರೆಸ್ ಟ್ರಬಲ್ ಶೂಟರ್ ಎಂದೇ ಕರೆಸಿಕೊಳ್ಳುವ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರನ್ನ ದುರ್ಬಲಗೊಳಿಸುವ ಯತ್ನ ಕಾಂಗ್ರೆಸ್ ಪಕ್ಷದ ಒಳಗೆ ನಡೆದಿದೆಯಾ ಎನ್ನುವ ಅನುಮಾನ ಕಾಡುತ್ತಿದೆ.
ಮುಂದಿನ ವಿಧಾನಸಭೆ ಚುನಾವಣೆ ಹೊತ್ತಿಗೆ ರಾಜ್ಯ ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸಿಕೊಳ್ಳುವ ವಿಚಾರದಲ್ಲಿ ಶತಪ್ರಯತ್ನ ನಡೆಸಿರುವ ಡಿಕೆಶಿಗೆ ಸಮಕಾಲಿನ ಕೆಲ ಕೈ ನಾಯಕರು ಅಡ್ಡಗಾಲು ಹಾಕುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ವಿರುದ್ಧ ಕಾಂಗ್ರೆಸ್ನಲ್ಲೇ ಅಸಮಾಧಾನ ಭುಗಿಲೇಳುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ತಮಗೆ ಎದುರಾಗುವ ಎಲ್ಲಾ ಆತಂಕ, ಸಮಸ್ಯೆಯನ್ನ 2023ರ ಒಳಗೆ ನಿವಾರಿಸಿಕೊಂಡು ತಾವು ಸಿಎಂ ಅಭ್ಯರ್ಥಿ ಎಂದು ಬಿಂಬಿಸಿಕೊಳ್ಳುವ ಯತ್ನದಲ್ಲಿ ಡಿಕೆಶಿ ಇದ್ದಾರೆ ಎನ್ನಲಾಗುತ್ತಿದೆ.
ಅಲ್ಲದೇ ಸದ್ಯದ ಮೈತ್ರಿ ಸರ್ಕಾರದಲ್ಲಿ ಕೂಡ ಕಾಂಗ್ರೆಸ್ ಕಡೆಯಿಂದ ಸಿಗುವ ಎಲ್ಲಾ ಅವಕಾಶಗಳನ್ನು ಬಾಚಿಕೊಳ್ಳುತ್ತಿದ್ದಾರೆ ಎಂಬ ಮಾತಿದೆ. ಆದರೆ ಟ್ರಬಲ್ ಶೂಟರ್ ವಿರುದ್ಧ ಕಾಂಗ್ರೆಸ್ ನಲ್ಲಿ ಕೆಲವು ಮುಖಂಡರೇ ಅಸಮಾಧಾನ ಗೊಂಡಿದ್ದಾರೆ. ಅದರಲ್ಲಿಯೂ ಪ್ರಮುಖವಾಗಿ ಜಾರಕಿಹೊಳಿ ಬ್ರದರ್ಸ್ ಹಾಗೂ ಎಂ.ಬಿ ಪಾಟೀಲ್ ಬಹಿರಂಗವಾಗಿಯೇ ಮಾತನಾಡುತ್ತಿದ್ದಾರೆ. ತನ್ನ ತಾನು ಮುಖಂಡ ಎಂದು ಬಿಂಬಿಸಿಕೊಳ್ತಾರೆ ಎಂದು ಗುಡುಗಿದ್ದ ರಮೇಶ್ ಒಂದು ಕಡೆಯಾದರೆ, ಲಿಂಗಾಯತ ಪ್ರತ್ಯೇಕ ಧರ್ಮದ ಕುರಿತಾಗಿ ಕ್ಷಮೆಯಾಚನೆಗೆ ಗರಂ ಆಗಿದ್ದ ಎಂ.ಬಿ ಪಾಟೀಲ್ ಇನ್ನೊಂದು ಕಡೆ.
ಡಿಕೆಶಿ ವಿರುದ್ಧ ಉತ್ತರ ಕರ್ನಾಟಕ ಭಾಗದ ಕೈ ಮುಖಂಡರಿಗೇಕೆ ಅಸಮಾಧಾನ ಎಂಬ ಜಿಜ್ಞಾಸೆ ಕಾಡುತ್ತಿದೆ. ಹಿಂದೆ ಬಳ್ಳಾರಿ ಉಪಚುನಾವಣೆ ವೇಳೆ ಉಸ್ತುವಾರಿ ವಹಿಸಿಕೊಂಡು ಯಶಸ್ಸು ಕಂಡಿದ್ದ ಡಿಕೆಶಿ ಅಂದು ವಿ.ಎಸ್.ಉಗ್ರಪ್ಪ ಗೆಲುವಿಗೆ ಕಾರಣರಾದ ಕೈ ನಾಯಕರ ಬೇಡಿಕೆ ಈಡೇರಿಸುವ ವಿಚಾರದಲ್ಲಿ ಹಿಂದೇಟು ಹಾಕಿ, ಬೇಸರಕ್ಕೆ ಗುರಿಯಾಗಿದ್ದಾರೆ. ಮಂಡ್ಯದ ಕಾಂಗ್ರೆಸ್ ನಾಯಕರ ಮನವೊಲಿಸಲು ವಿಫಲರಾಗಿದ್ದಾರೆ. ಡಿಕೆಶಿ ವೇಗಕ್ಕೆ ಕಡಿವಾಣ ಹಾಕುಲು ಹಲವರು ಯತ್ನಿಸುತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ಕುಂದಗೋಳ ಉಪ ಚುನಾವಣಾ ಉಸ್ತುವಾರಿಯನ್ನು ಡಿಕೆಶಿಗೆ ವಹಿಸಿದ್ದಕ್ಕೂ ವಿರೋಧ ವ್ಯಕ್ತವಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಡಿಕೆಶಿ ಎಂಟ್ರಿಯಾಗಿದ್ದು, ಆ ಭಾಗದ ಕೈ ನಾಯಕರ ನಿದ್ದೆಗೆಡಿಸಿದ್ಯಾ ಎಂಬ ಪ್ರಶ್ನೆ ಕಾಡುತ್ತಿದೆ. ಈ ಎಲ್ಲಾ ವಿಚಾರವನ್ನ ಗಮನಿಸಿದಾಗ ಡಿಕೆಶಿ ರಾಜಕೀಯ ಬೆಳವಣಿಗೆ ವಿರುದ್ಧ ಕಾಂಗ್ರೆಸ್ನಲ್ಲೇ ವಿರೋಧಿ ಗುಂಪು ಸೃಷ್ಟಿಯಾಗಿದ್ಯಾ ಎಂಬ ಅನುಮಾನ ಹಲವರಲ್ಲಿ ಮೂಡಿದೆ.