ಬೆಂಗಳೂರು: ನಗರದ ಖಾಸಗಿ ಹೋಟೆಲ್ನಲ್ಲಿ ಸಿದ್ಧರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಿತು. ಈ ಸಭೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅನುಪಸ್ಥಿತಿಯಲ್ಲಿ ನಡೆದಿದೆ.
ವಿಧಾನಮಂಡಲದ ಉಭಯ ಸದನಗಳ ಬಜೆಟ್ ಅಧಿವೇಶನದಲ್ಲಿ ಯಾವ ರೀತಿ ಚರ್ಚೆಯಲ್ಲಿ ಭಾಗಿಯಾಗಬೇಕು. ಯಾವ ಸದಸ್ಯರು ಯಾವ ವಿಚಾರದ ಮೇಲೆ ಮಾತನಾಡಬೇಕು. ಯಾವ ವಿಚಾರಗಳನ್ನು ಮುಂದಿಟ್ಟು ಸರ್ಕಾರವನ್ನ ಮುಜುಗರಕ್ಕೆ ಒಳಪಡಿಸಬೇಕು. ಈಗಾಗಲೇ ವಿಧಾನಸಭೆ ಹಾಗೂ ಪರಿಷತ್ನಲ್ಲಿ ಬಜೆಟ್ ಮೇಲಿನ ಚರ್ಚೆ ಆರಂಭವಾಗಿದ್ದು, ಎಲ್ಲ ಸದಸ್ಯರು ಈಗಾಗಲೇ ಮಾತನಾಡಿದ್ದಾರೆ. ಮುಂದೆ ಮಾತನಾಡುವ ಸದಸ್ಯರುಗಳು ಯಾವ ಯಾವ ವಿಚಾರಗಳ ಮೇಲೆ ಮಾತನಾಡಬೇಕು. ಯಾವ ಅಂಶವನ್ನು ಅತ್ಯಂತ ಪ್ರಮುಖವಾಗಿ ಪರಿಗಣಿಸಬೇಕು ಎಂಬ ವಿಚಾರವಾಗಿ ಸಭೆಯಲ್ಲಿ ಚರ್ಚೆ ನಡೆದಿದೆ.
ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಹೊರಬೀಳಲಿದೆ. ಹೈಕಮಾಂಡ್ ಪಕ್ಷಕ್ಕೆ ನೀಡಿರುವ ನಿರ್ದೇಶನವನ್ನು ಆಧರಿಸಿ ಅದೇ ರೀತಿಯಲ್ಲಿಯೇ ಪ್ರತಿಕ್ರಿಯೆ ನೀಡಬೇಕು. ಯಾವುದೇ ಶಾಸಕರು ಮನಸೋಇಚ್ಚೆ ಮಾಧ್ಯಮಗಳ ಮುಂದೆ ತಮ್ಮ ಹೇಳಿಕೆಯನ್ನು ನೀಡಬಾರದು. ಪಕ್ಷಕ್ಕೆ ಮುಜುಗರ ಆಗುವ ರೀತಿಯಲ್ಲಿ ಹೇಳಿಕೆಯನ್ನಾಗಲಿ ನಡುವಳಿಕೆಯಲ್ಲಾಗಲಿ ತೋರಿಸಬಾರದು.
ಮುಂಬರುವ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆ ನಮಗೆ ರಾಜ್ಯದಲ್ಲಿ ಅತ್ಯಂತ ಪ್ರಮುಖವಾಗಿದ್ದು, ಪಂಚರಾಜ್ಯಗಳ ಚುನಾವಣೆ ಸಹ ನಮ್ಮ ಮೇಲೆ ಪ್ರಭಾವ ಬೀರಬಹುದು. ಆದರೆ ವೈಯಕ್ತಿಕವಾಗಿ ಪ್ರತಿಯೊಬ್ಬ ಶಾಸಕರು ಹಾಗೂ ಮಾಜಿ ಶಾಸಕರು ತಮ್ಮ ಕ್ಷೇತ್ರದಲ್ಲಿ ಹೆಚ್ಚಾಗಿ ಜನರ ಒಲವು ಗಳಿಸುವ ಪ್ರಯತ್ನವನ್ನು ಈಗಲೇ ಆರಂಭಿಸಬೇಕು ಎಂದು ಸಲಹೆ ನೀಡಲಾಗಿದೆ. ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಜೊತೆಗೆ ಕೇಂದ್ರದಲ್ಲಿಯೂ ಹೆಚ್ಚು ಸಂಸದರನ್ನು ಕಳುಹಿಸಿಕೊಡುವ ಕಾರ್ಯವನ್ನು ಮಾಡಬೇಕು ಎಂಬುದರ ಕುರಿತು ಗಂಭೀರ ಚರ್ಚೆ ನಡೆದಿದೆ.
ಇದನ್ನೂ ಓದಿ: 2021-22ರಲ್ಲಿ ಇಲಾಖಾವಾರು ಪ್ರಗತಿಗೆ ಅರ್ಧಚಂದ್ರ: ಇಲ್ಲಿದೆ ಸಂಪೂರ್ಣ ವಿವರ..
ಈಗಾಗಲೇ ಅಧಿವೇಶನದಲ್ಲಿ ಜನರಿಗೆ ಹತ್ತಿರವಾಗುವ ಹಲವು ವಿಚಾರಗಳ ಕುರಿತು ಕಾಂಗ್ರೆಸ್ ಗಮನಸೆಳೆದಿದೆ. ಈ ತಿಂಗಳ ಅಂತ್ಯದವರೆಗೂ ನಡೆಯುವ ಅಧಿವೇಶನದಲ್ಲಿ ಸಾಧ್ಯವಾದಷ್ಟು ಜನಸ್ನೇಹಿ ವಿಚಾರಗಳನ್ನು ಕೈಗೆತ್ತಿಕೊಳ್ಳಲು ಪ್ರಯತ್ನಿಸಿ ಹಾಗೂ ಪರಿಣಾಮಕಾರಿಯಾಗಿ ಚರ್ಚಿಸುವ ಮೂಲಕ ಜನರ ವಿಶ್ವಾಸ ಗಳಿಸುವ ಕಾರ್ಯ ಮಾಡಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸದಸ್ಯರಿಗೆ ಸಲಹೆ ನೀಡಿದರು.
ಶಾಸಕಾಂಗ ಸಭೆಯಲ್ಲಿ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗರೆಡ್ಡಿ, ಈಶ್ವರ್ ಖಂಡ್ರೆ, ಧ್ರುವನಾರಾಯಣ್, ಸಲೀಂ ಅಹಮದ್, ಮಾಜಿ ಸಚಿವರಾದ ಆರ್.ವಿ.ದೇಶಪಾಂಡೆ ಎಚ್.ಕೆ.ಪಾಟೀಲ್ ಹಾಗೂ ಯು.ಟಿ.ಖಾದರ್ ವೇದಿಕೆ ಮೇಲೆ ಉಪಸ್ಥಿತರಿದ್ದರು. ಪಕ್ಷದ ಎಲ್ಲಾ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.