ಬೆಂಗಳೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಿವಾಸದಲ್ಲಿ ನಡೆಯುತ್ತಿದ್ದ ಉಭಯ ಸದನಗಳ ಕಾಂಗ್ರೆಸ್ನ ಹಿರಿಯ ಸದಸ್ಯರ ಸಭೆ ಮುಕ್ತಾಯವಾಗಿದೆ. ತಡವಾಗಿ ಆಗಮಿಸುವುದಾಗಿ ತಿಳಿಸಿದ್ದ ಮಾಜಿ ಡಿಸಿಎಂ ಜಿ. ಪರಮೇಶ್ವರ್ ಕೊನೆಗೂ ಸಭೆಗೆ ಬರಲೇ ಇಲ್ಲ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಪರಿಷತ್ನ ಪ್ರತಿಪಕ್ಷದ ನಾಯಕ ಎಸ್.ಆರ್. ಪಾಟೀಲ್ ಸೇರಿದಂತೆ ಹಲವು ನಾಯಕರು ಪಾಲ್ಗೊಂಡಿದ್ದರು. ಸಭೆಯಲ್ಲಿ ನಾಳೆಯಿಂದ ಆರಂಭವಾಗುವ ವಿಧಾನಮಂಡಲ ಉಭಯ ಸದನಗಳ ಅಧಿವೇಶನದಲ್ಲಿ ಕಾಂಗ್ರೆಸ್ ಕೈಗೊಳ್ಳಬಹುದಾದ ನಿಲುವುಗಳ ಕುರಿತು ಚರ್ಚಿಸಲಾಯಿತು. ಆದರೆ ಈ ಮಹತ್ವದ ಸಭೆಯಿಂದ ದೂರ ಉಳಿಯುವ ಮೂಲಕ ಪರಮೇಶ್ವರ್ ಅವರು ಅಚ್ಚರಿ ಮೂಡಿಸಿದ್ದಾರೆ.
ಸಭೆಗೆ ತಡವಾಗಿ ಆಗಮಿಸುವುದಾಗಿ ಡಾ. ಜಿ. ಪರಮೇಶ್ವರ್ ಮಾತ್ರವಲ್ಲದೆ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ ಹಾಗೂ ಸತೀಶ್ ಜಾರಕಿಹೊಳಿ ಮುಂಚಿತವಾಗಿ ತಿಳಿಸಿದ್ದರು. ಆದರೆ ಸಭೆಗೆ ಈಶ್ವರ್ ಖಂಡ್ರೆ ಕೊಂಚ ತಡವಾಗಿ ಆಗಮಿಸಿದರು. ಪರಮೇಶ್ವರ ಹಾಗೂ ಸತೀಶ್ ಜಾರಕಿಹೊಳಿ ಕೊನೆಯವರೆಗೂ ಸಭೆಗೆ ಆಗಮಿಸಲಿಲ್ಲ. ಉದ್ದೇಶಪೂರ್ವಕವಾಗಿಯೇ ಪರಮೇಶ್ವರ್ ಸಭೆಗೆ ಆಗಮಿಸಿರಲಿಲ್ಲವೇ ಅಥವಾ ಬೇರೆ ಅನಿವಾರ್ಯ ಕಾರಣದಿಂದ ಬರಲಿಲ್ಲವೇ ಎಂಬ ಮಾಹಿತಿ ಇನ್ನೂ ಲಭ್ಯವಾಗಿಲ್ಲ.
ಓದಿ: ನಾಳೆಯಿಂದ ಅಧಿವೇಶನ: ಸಿದ್ದರಾಮಯ್ಯ ನಿವಾಸದಲ್ಲಿ ಉಭಯ ಸದನಗಳ ಕಾಂಗ್ರೆಸ್ ನಾಯಕರ ಸಭೆ
ರಾಜ್ಯದಲ್ಲಿ ಮೈತ್ರಿ ಸರ್ಕಾರ ಪತನವಾದ ನಂತರದ ದಿನಗಳಲ್ಲಿ ನಡೆದ ಹಲವು ಮಹತ್ವದ ಸಭೆಗಳಿಗೆ ಪರಮೇಶ್ವರ್ ಗೈರು ಹಾಜರಾಗುತ್ತಿದ್ದು, ಅದೇ ರೀತಿ ಇಂದೂ ಕೂಡ ಮರುಕಳಿಸಿದೆ. ಬಹುತೇಕ ಬೆಳಗಾವಿ ಭಾಗಕ್ಕೆ ಸೀಮಿತವಾಗಿರುವ ಸತೀಶ್ ಜಾರಕಿಹೊಳಿ ಬೆಂಗಳೂರು ಭಾಗದಲ್ಲಿ ನಡೆಯುವ ಸಭೆಗೆ ಆಗಮಿಸುತ್ತಿರುವುದು ತೀರಾ ವಿರಳ. ಆದರೆ ಬೆಂಗಳೂರಿನಲ್ಲಿಯೇ ಇದ್ದರೂ ಪರಮೇಶ್ವರ್ ಬಾರದಿರುವುದು ಅಚ್ಚರಿಗೆ ಕಾರಣವಾಗಿದೆ. ಇತ್ತೀಚೆಗೆ ಬೆಂಗಳೂರು ಹೊರವಲಯದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಮಹತ್ವದ ಸಭೆಯಲ್ಲಿ ಕೂಡ ಪರಮೇಶ್ವರ್ ಕೇವಲ ಕೊರಟಗೆರೆ ಕ್ಷೇತ್ರಕ್ಕೆ ಮಾತ್ರ ಸೀಮಿತರಾಗಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಇದಕ್ಕೆ ಅವರು ಬೇಸರ ಕೂಡ ವ್ಯಕ್ತಪಡಿಸಿದ್ದರು ಎಂಬ ಮಾಹಿತಿ ಇತ್ತು. ಆದರೆ ಇಂದು ಸಭೆಗೆ ಆಗಮಿಸದೆ ಅವರು ಇದಕ್ಕೆ ಪುಷ್ಠಿ ನೀಡುವ ಕಾರ್ಯ ಮಾಡಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.