ಬೆಂಗಳೂರು : ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾಸಕ ಬಿ.ನಾಗೇಂದ್ರ ಭೇಟಿ ಮಾಡಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಕುಮಾರಕೃಪಾ ಅತಿಥಿ ಗೃಹಕ್ಕೆ ಆಗಮಿಸಿದ್ದು, ನಾಯಕರ ಜೊತೆ ಮಹತ್ವದ ಸಭೆ ನಡೆಸುತ್ತಿದ್ದಾರೆ.
ಶಾಸಕರು ರಾಜೀನಾಮೆ ನೀಡುತ್ತಿರುವ ಬೆನ್ನಲ್ಲೇ ಬಿಜೆಪಿ ನಿರಂತರವಾಗಿ ಬಿ.ನಾಗೇಂದ್ರ ಜತೆಗೆ ಸಂಪರ್ಕದಲ್ಲಿದ್ದಾರೆ. ಇವರನ್ನೂ ಕಳೆದುಕೊಳ್ಳಬಾರದೆಂಬ ಉದ್ದೇಶದಿಂದ ಸಿಎಂ ಇಂದು ಶಾಸಕ ಬಿ.ನಾಗೇಂದ್ರ ಭೇಟಿ ಮಾಡಿದ್ದಾರೆಂಬ ಮಾಹಿತಿ ಇದೆ. ಈಗಾಗಲೇ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ ಸಿ ವೇಣುಗೋಪಾಲ್ ಬೆಂಗಳೂರಿಗೆ ಮರಳಿದ್ದು, ಕೆಲವೇ ಸಮಯಗಳಲ್ಲಿ ಕುಮಾರಕೃಪ ಅತಿಥಿಗೃಹಕ್ಕೆ ಆಗಮಿಸಲಿದ್ದಾರೆ.
ಸಿಎಂ ಆಗಮನಕ್ಕೂ ಮುನ್ನ ಕುಮಾರಕೃಪ ಅತಿಥಿಗೃಹದಲ್ಲಿ ಸಚಿವ ಡಿಕೆಶಿ ಮಾತನಾಡಿ, ಎಂಟಿಬಿ ನಾಗರಾಜ್ ನಿನ್ನೆ ತಮ್ಮ ನೋವು, ಕಷ್ಟವನ್ನು ಹೇಳಿಕೊಂಡಿದ್ದಾರೆ. ಯಾರು ಯಾರು ಒತ್ತಡ ಹಾಕಿದ್ದಾರೆ ಎಂಬುದರ ಬಗ್ಗೆ ಹೇಳಿಕೊಂಡಿದ್ದಾರೆ. ನಾಳೆ ವಿಶ್ವಾಸಮತ ಹಾಕಲು ಬರುತ್ತಾರಾ ಎಂಬುದಕ್ಕೆ ಬರುತ್ತಾರೀ, ಯಾರಾದರೂ ಮೆಂಬರ್ಶಿಪ್ ಕಳೆದುಕೊಳ್ಳಲು ಬಯಸುತ್ತಾರಾ.. ಖಂಡಿತಾ ನಮಗೆ ವಿಶ್ವಾಸ ಇದೆ. ಯಾರು ಯಾರು ಒತ್ತಡ ಹಾಕಿದ್ದಾರೆ. ಯಾವೆಲ್ಲ ಸಮಸ್ಯೆಗಳಿವೆ, ಯಾವ ಇಲಾಖೆಯಿಂದ ಒತ್ತಡ ಬಂದಿದೆ ಎಂಬುದರ ಕುರಿತು ಹೇಳಿಕೊಂಡಿದ್ದಾರೆ. ಯಾವ ಒತ್ತಡ ಎನ್ನುವುದನ್ನೂ ಈಗ ಹೇಳೋದು ಬೇಡ ಎಂದರು.
ಸೋಮವಾರವೇ ವಿಶ್ವಾಸಮತ ಸಾಬೀತುಪಡಿಸಲಿ. ಬುಧವಾರದವರೆಗೆ ಯಾಕೆ ಕಾಯಬೇಕು ಎಂಬ ಬಿಎಸ್ವೈ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರು ಮೊದಲು ಬಿಸ್ನೆಸ್ ಅಡ್ವೈಸರಿ ಕಮಿಟಿ ಮೀಟಿಂಗ್ಗೆ ಬರಲಿ. ಮೀಟಿಂಗ್ಗೆ ಬಂದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರೂಲ್ಬುಕ್ನ ನೋಡಲಿ. ಹಿಂದೆ ಮೀಟಿಂಗ್ನ ಅವರು ಬಹಿಷ್ಕರಿಸಿದ್ದರು. ರೂಲ್ ಪುಸ್ತಕದ ಬಗ್ಗೆ ಅವರಿಗೆ ಗೌರವವಿಲ್ಲ. ಮೊದಲು ಅವರು ಕಾನೂನಿಗೆ ಗೌರವ ಕೊಡುವ ಕೆಲಸವನ್ನ ಬಿಜೆಪಿಯವರು ಮಾಡಲಿ ಎಂದರು.
ನಾಯಕರ ಸಭೆ :
ಸದ್ಯ ಕುಮಾರಕೃಪ ಅತಿಥಿಗೃಹದಲ್ಲಿ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್, ಗೃಹ ಸಚಿವ ಎಂ ಬಿ ಪಾಟೀಲ್, ಕೇಂದ್ರದ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ, ಸಚಿವ ಪ್ರಿಯಾಂಕ್ ಖರ್ಗೆ, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆಗಮಿಸಿದ್ದಾರೆ. ವೇಣುಗೋಪಾಲ್ ಕೂಡ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಸಿಎಂ ಆಗಮನ:
ಸಿಎಂ ಹೆಚ್ .ಡಿ .ಕುಮಾರಸ್ವಾಮಿ ಸಹ ಕುಮಾರಕೃಪಾದಲ್ಲಿ ನಡೆಯಲಿರುವ ಸಭೆಗೆ ಆಗಮಿಸಿದ್ದು, ಎಂಟಿಬಿ ನಾಗರಾಜ್ ವಾಪಸ್ ತೆರಳಿದ ನಂತರವೂ ಸರ್ಕಾರವನ್ನು ಉಳಿಸಿಕೊಳ್ಳುವ ಹಾಗೂ ವಿಶ್ವಾಸ ಮತ ಗಳಿಸುವ ವಿಚಾರದಲ್ಲಿ ಈಗಲೂ ಕಾಂಗ್ರೆಸ್, ಜೆಡಿಎಸ್ ನಾಯಕರು ವಿಶ್ವಾಸವನ್ನು ಹೊಂದಿರುವುದು ಅಚ್ಚರಿ ಮೂಡಿಸುತ್ತಿದೆ.