ಬೆಂಗಳೂರು: ನಮ್ಮ ಜೊತೆ ಬಂದಿರೋರಿಗೆ ಕೊಟ್ಟಿರುವ ಮಾತು ಉಳಿಸಿಕೊಳ್ಳುತ್ತೇವೆ. ನೂರಕ್ಕೆ ನೂರರಷ್ಟು ಸಂಪುಟ ವಿಸ್ತರಣೆ ಆಗುತ್ತದೆ. ಮಾಧ್ಯಮಗಳಲ್ಲಿ ಬರ್ತಿರೋದು ಎಲ್ಲವೂ ಊಹಾಪೋಹಗಳು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಡಾಲರ್ಸ್ ಕಾಲೋನಿ ನಿವಾಸದಲ್ಲಿ ಮಾತನಾಡಿದ ಅವರು, ಇವತ್ತು ಅಮಿತ್ ಶಾ ಟೈಂ ಕೊಟ್ಟಿದ್ದರು. ಆದರೆ ದೇವದುರ್ಗದಲ್ಲಿ ಹಾಲುಮತದ ಕಾರ್ಯಕ್ರಮ ಮುಖ್ಯವಾಗಿತ್ತು. ಹಾಗಾಗಿ ನಾಳೆ ದೆಹಲಿಗೆ ಹೋಗೋದಕ್ಕೆ ಪ್ರಯತ್ನ ನಡೆಸುತ್ತೇನೆ. ನಾಳೆ ಅಮಿತ್ ಶಾ ಸಿಕ್ಕರೆ ಎಲ್ಲಾ ಕಾರ್ಯಕ್ರಮಗಳನ್ನ ರದ್ದು ಮಾಡಿ ಹೋಗುತ್ತೇನೆ. ಒಂದು ವೇಳೆ ಅದು ಆಗಲಿಲ್ಲ ಅಂದರೆ ಜನವರಿ 17-18ರಂದು ಇಲ್ಲಿಗೇ ಬರ್ತಾರೆ. ಆಗ ಅಮಿತ್ ಶಾ ಜೊತೆ ಚರ್ಚೆ ಮಾಡಿ ಸಂಪುಟ ವಿಸ್ತರಣೆ ಮಾಡೇ ಮಾಡುತ್ತೇನೆ ಎಂದರು.
ದಾವೋಸ್ಗೆ ಹೋಗಬೇಕು ಅಂತಾ ಒತ್ತಾಯಗಳಿವೆ, ಹಾಗಾಗಿ ಹೋಗುತ್ತೇನೆ. ದಾವೋಸ್ಗೆ ಹೋಗೋದಕ್ಕೂ ಸಂಪುಟ ವಿಸ್ತರಣೆಗೂ ಸಂಬಂಧ ಇಲ್ಲ. ಈ ತಿಂಗಳಲ್ಲೇ ಸಂಪುಟ ವಿಸ್ತರಣೆ ಆಗಲಿದೆ. ಶಾಸಕರು ಆತಂಕ ಪಡಬೇಕಿಲ್ಲ ಎಂದು ಸ್ಪಷ್ಟಪಡಿಸಿದರು.