ಬೆಂಗಳೂರು: ಎಸ್ಐ ಮತ್ತು ಪೊಲೀಸ್ ಪೇದೆಗಳ ನೇಮಕಾತಿ ವಯೋಮಾನ ಸಡಿಲಿಕೆ ಮಾಡುವ ಭರವಸೆಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೀಡಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಹೇಳಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಸರ್ಕಾರ ಇನ್ನು ಕೆಲವೇ ದಿನಗಳಲ್ಲಿ 16 ಸಾವಿರ ಎಸ್ಐ ಮತ್ತು ಪೊಲೀಸ್ ಪೇದೆಗಳನ್ನು ನೇಮಕಾತಿ ಮಾಡಿಕೊಳ್ಳಲಿದೆ. ಈ ಸಂಬಂಧ ಬಿಜೆಪಿ ನಿಯೋಗ ಸಿಎಂ ಮತ್ತು ಗೃಹ ಸಚಿವರಿಗೆ ಭೇಟಿ ಮಾಡಿ ವಯೋಮಿತಿ ಸಡಿಲಿಕೆ ಮಾಡಲು ಮನವಿ ಸಲ್ಲಿಸಿದೆ. ಬೇರೆ ಬೇರೆ ರಾಜ್ಯಗಳಲ್ಲಿ ಪೊಲೀಸ್ ಇಲಾಖೆ ಸೇರ್ಪಡೆಗೆ ಬೇರೆ ಬೇರೆ ವಯೋಮಿತಿ ನಿಗದಿ ಇದೆ. ನಮ್ಮ ರಾಜ್ಯದಲ್ಲಿ ಸಾಮಾನ್ಯ ವರ್ಗಕ್ಕೆ 25, ಒಬಿಸಿ - 27, ಎಸ್ಸಿ ಎಸ್ಟಿ ವರ್ಗಕ್ಕೆ 27 ವಯೋಮಿತಿ ಇದೆ ಹೀಗಾಗಿ ವಯೋಮಿತಿ ಹೆಚ್ಚಳ ಮಾಡಲು ನಮ್ಮ ನಿಯೋಗ ಮನವಿ ಮಾಡಿಕೊಂಡಿದೆ. ಸಾಮಾನ್ಯ 28, ಒಬಿಸಿ ಮತ್ತು ಎಸ್ಸಿ ಎಸ್ಟಿ ವರ್ಗಗಳಿಗೆ 33 ವರ್ಷ ವಯೋಮಿತಿ ನಿಗದಿಗೆ ಮನವಿ ಮಾಡಿದ್ದು, ವಯೋಮಿತಿ ಹೆಚ್ಚಳಕ್ಕೆ ಸಿಎಂ ಭರವಸೆ ಕೊಟ್ಟಿದ್ದಾರೆ ಎಂದರು.
ಟಿಪ್ಪು ಜಯಂತಿ, ಪಠ್ಯ ಕುರಿತ ವಿವಾದ ಕುರಿತು ಪ್ರತಿಕ್ರಿಯಿಸಿದ ರವಿಕುಮಾರ್ ಅವರು, ಟಿಪ್ಪು ಓರ್ವ ಮತಾಂಧ, ಕ್ರೂರಿ, ಕೇರಳ, ಕೊಡಗು ಕಡೆಗಳಲ್ಲಿ ಟಿಪ್ಪು ಜಯಂತಿಗೆ ವಿರೋಧ ಇದೆ. ಆದರೂ ಕಾಂಗ್ರೆಸ್ ಟಿಪ್ಪು ಜಯಂತಿ ಆಚರಿಸಿಕೊಂಡು ಬಂದಿತ್ತು. ಆದರೆ ಈಗ ಬಿಜೆಪಿ ಸರ್ಕಾರ ಇದೆ. ಹಾಗಾಗಿ ಟಿಪ್ಪು ಜಯಂತಿ ರದ್ದಾಗಿದೆ. ಈ ಸಂಬಂಧ ಸಿಎಂ ಕೈಗೊಂಡಿರುವ ನಿರ್ಧಾರ ಸ್ವಾಗತಾರ್ಹ ಎಂದು ರವಿಕುಮಾರ್ ಹೇಳಿದರು.
ಸಿದ್ದುಗೆ ಸಾವರ್ಕರ್ ಪುಸ್ತಕ ರವಾನೆ: ಮಹಾತ್ಮ ಗಾಂಧಿ ಹತ್ಯೆಯಲ್ಲಿ ವೀರ ಸಾವರ್ಕರ್ ಕೈವಾಡವಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಈ ಹಿನ್ನೆಲೆ ಸಿದ್ದರಾಮಯ್ಯಗೆ ಸಾವರ್ಕರ್ ಕುರಿತ ಪುಸ್ತಕ ಕಳಿಸಿಕೊಡುತ್ತಿದ್ದೇನೆ ಎಂದು ಆತ್ಮಾಹುತಿ ಹೆಸರಿನ ಪುಸ್ತಕವನ್ನು ಮಾಧ್ಯಮಗಳ ಮುಂದೆ ಪ್ರದರ್ಶನ ಮಾಡಿದ ರವಿಕುಮಾರ್ ನಂತರ ಪೋಸ್ಟ್ ಮೂಲಕ ಸಿದ್ದರಾಮಯ್ಯಗೆ ಕಳುಹಿಸಿಕೊಟ್ಟರು.