ಬೆಂಗಳೂರು: ಯೋಜನಾ ಬದ್ಧವಲ್ಲದೆ ನಿರ್ಮಾಣಗೊಂಡಿರುವ ಬೆಂಗಳೂರಿನ ರಸ್ತೆಗಳ ನಿರ್ವಹಣೆಗೆ ವಿಶೇಷ ತಾಂತ್ರಿಕತೆ ಅಗತ್ಯವಿದ್ದು, ಈ ಕುರಿತು ತಾಂತ್ರಿಕತೆ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ರಸ್ತೆಗುಂಡಿ ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ವಿಧಾನಪರಿಷತ್ನ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಪಿ.ಆರ್. ರಮೇಶ್ ಪ್ರಶ್ನೆಗೆ ಉತ್ತರಿಸಿದ ಸಿಎಂ, ಬೆಂಗಳೂರು ನಗರ ಅತಿ ವೇಗದಲ್ಲಿ ಬೆಳೆಯುತ್ತಿರುವ ನಗರವಾಗಿದೆ. ಮೂಲ ರಸ್ತೆ ಅಳತೆ, ವಿನ್ಯಾಸ, ಆಳ ಬೇರೆ ಬೇರೆ ಇದೆ. ರಸ್ತೆಗಳ ಮೇಲೆ ಯಾವ ರೀತಿ ಒತ್ತಡ ಆಗುತ್ತಿದೆಯೋ ಆ ರೀತಿ ವಿನ್ಯಾಸ ಆಗಬೇಕಿದೆ. ಇಂದು ಮಲ್ಟಿ ಆಕ್ಸಲ್ ವಾಹನ ಸಂಚಾರ ಮಾಡುತ್ತಿವೆ. ಆದರೆ ನಮ್ಮ ರಸ್ತೆ ವಿನ್ಯಾಸ ಸಿಂಗಲ್ ಆಕ್ಸಲ್ ಸಾಮರ್ಥ್ಯದ್ದಾಗಿದೆ. ಬೆಂಗಳೂರಿಗೆ ಹಳ್ಳಿಗಳ ಸೇರ್ಪಡೆಯಾಗಿದೆ. ಆ ರಸ್ತೆ ಹಳೆ ವಿನ್ಯಾಸದಲ್ಲಿರುವುದು ಸಮಸ್ಯೆಯಾಗಿದೆ. ಯಾವುದೇ ಯೋಜನೆ ಇಲ್ಲದೆ ರಸ್ತೆ ನಿರ್ಮಾಣವಾಗಿದೆ. ರಸ್ತೆ ಆಗುತ್ತಿದ್ದಂತೆ ಇನ್ನೊಂದು ಇಲಾಖೆ ಬಂದು ಅಗಿಯುತ್ತದೆ. ಇಲ್ಲಿ ಸಮನ್ವಯತೆ ಸಮಸ್ಯೆಯಿದೆ. ಇದನ್ನು ಸರಿಪಡಿಸಲಾಗುತ್ತದೆ ಎಂದರು.
ಆರ್ಟೀರಿಯಲ್ ಮತ್ತು ಸಬ್ ಆರ್ಟೀರಿಯಲ್ ರಸ್ತೆಗಳು ಇಡೀ ನಗರವನ್ನು ಸಂಪರ್ಕಿಸುವ ರಸ್ತೆಗಳಾಗಿವೆ. ಹಾಗಾಗಿ ಇವು ಬಹಳ ಪ್ರಮುಖ ರಸ್ತೆಗಳಾಗಿವೆ. ಸದ್ಯ ಟೆಂಡರ್ ಶ್ಯೂರ್, ವೈಟ್ ಟ್ಯಾಪಿಂಗ್ ಕಡೆ ತೊಂದರೆ ಆಗಿಲ್ಲ. ಬೇರೆ ಕಡೆ ಸಮಸ್ಯೆ ಆಗಿದೆ. ಅದನ್ನು ಸರಿಪಡಿಸಲಿದ್ದೇವೆ. ನಗರ ಪ್ರದೇಶ ರಸ್ತೆಗಳ ನಿರ್ವಹಣೆಗೆ ವಿಶೇಷ ಇಂಜಿನಿಯರಿಂಗ್ ಅಗತ್ಯವಿದೆ. ಅದಕ್ಕೆ ತಕ್ಕ ತಾಂತ್ರಿಕತೆ ಸಿದ್ಧಪಡಿಸುವಂತೆ ನಮ್ಮ ಇಂಜಿನಿಯರ್ಗಳಿಗೆ ಸೂಚನೆ ನೀಡಿದ್ದೇನೆ. ಆದಷ್ಟು ಬೇಗ ಸಮಸ್ಯೆ ಸರಿಪಡಿಸುವ ಕೆಲಸ ಮಾಡಲಾಗುತ್ತದೆ ಎಂದು ಸಿಎಂ ಬೊಮ್ಮಾಯಿ ಭರವಸೆ ನೀಡಿದರು.
ಬೆಂಗಳೂರು ಖಾತೆ ವಹಿಸಿಕೊಂಡ ನಂತರ 8-10 ಸಭೆ ನಡೆಸಿ ಪರಿಶೀಲನೆ ನಡೆಸಿದ್ದೇನೆ. ಸದಸ್ಯರ ಸಲಹೆ ಪರಿಗಣಿಸಿ ರಸ್ತೆಗುಂಡಿ ಸಮಸ್ಯೆ, ಸಂಚಾರ ದಟ್ಟಣೆ ನಿಯಂತ್ರಣ ಕುರಿತು ಏನೆಲ್ಲಾ ಕ್ರಮ ಕೈಗೊಳ್ಳಬೇಕೋ ಅದನ್ನೆಲ್ಲ ಅಳವಡಿಸಿಕೊಳ್ಳಲಾಗುತ್ತದೆ ಎಂದರು.