ಬೆಂಗಳೂರು: ಅನಂತಕುಮಾರ್ ಅವರ ಜೀವನ ಹಾಗೂ ಸೇವಾಗುಣ ಎಲ್ಲರಿಗೂ ಪ್ರೇರಣೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅನಂತಕುಮಾರ್ ಅವರದು ಚೈತನ್ಯಶೀಲ, ಪ್ರೇರಣಾದಾಯಕ ವ್ಯಕ್ತಿತ್ವ. ಕಾಲೇಜು ದಿನಗಳಿಂದಲೂ ಸಂಘಟನಾ ಚತುರರಾಗಿ ವೈಚಾರಿಕ ಸ್ಪಷ್ಟತೆ ಹೊಂದಿದ್ದರು. ಕೇಂದ್ರ ಸರ್ಕಾರದ ದಿಟ್ಟ ನಿರ್ಧಾರಗಳಾದ ಸಂವಿಧಾನದ 370 ನೆ ವಿಧಿ ರದ್ದು, ಜಿಎಸ್ಟಿ ಮಸೂದೆ ಕರಡು ರಚಿಸುವುದರಲ್ಲಿ ದೊಡ್ಡ ಪಾತ್ರ ವಹಿಸಿದ್ದರು ಎಂದರು.
ಅದಮ್ಯ ಚೇತನ ಸೇವಾ ಸಂಸ್ಥೆ, ಮಧ್ಯಾಹ್ನದ ಊಟ ಹಾಗೂ ಶಾಲಾ ಮಕ್ಕಳಿಗೆ ಆಹಾರ ಸುರಕ್ಷತೆ ನೀಡುವ ಸಾರ್ಥಕ ಕಾರ್ಯ ಮಾಡುತ್ತಿದ್ದು, ರಾಜಸ್ತಾನ, ಕರ್ನಾಟಕ ಹಾಗೂ ಇತರ ರಾಜ್ಯಗಳಲ್ಲಿ ಸಂಸ್ಥೆ ಬೆಳೆದು ನಿಂತಿದೆ. ಇದೇ ವೇಳೆ, ‘ಲಕ್ಷಾಂತರ ಮಕ್ಕಳಿದ್ದಾರೆ ಅವರು ನನ್ನ ಮಕ್ಕಳು. ಅವರಿಗೆ ಆಹಾರವನ್ನು ಕೊಡುವುದು ನನ್ನ ಕೆಲಸ’ ಎಂಬ ಅನಂತಕುಮಾರ್ ಅವರ ನುಡಿಗಳನ್ನು ಸ್ಮರಿಸಿದರು. ಸಸ್ಯಾಗ್ರಹ ಕಾರ್ಯಕ್ರಮದಿಂದ ಬೆಂಗಳೂರು ನಗರದಲ್ಲಿ ಸಸಿಗಳನ್ನು ನೆಡುವ ಮುಖಾಂತರ ಒಂದು ಆಂದೋಲನ ರೂಪಿಸಿದರು ಎಂದರು.
ಸಾಧನಿಕಗೆ ಸಾವು ಅಂತ್ಯವಲ್ಲ:
ಸಾಧಕನಿಗೆ ಸಾವು ಅಂತ್ಯವಲ್ಲ. ಸಾವಿನ ನಂತರವೂ ಅವರು ಬದುಕುತ್ತಾರೆ. ಅನಂತಕುಮಾರ್ ಅವರ ಸೇವಾ ಜೀವನ, ಅವರ ಸೇವಾ ಗುಣ ಮತ್ತು ಅವರ ಸಂಬಂಧಗಳೆಲ್ಲವೂ ಸೇವೆಯಿಂದ ಕೂಡಿದೆ. ರಾಜಕಾರಣಿಗೆ ಕೇವಲ ರಾಜಕಾರಣ, ಸರ್ಕಾರದ ಕೆಲಸದ ಜೊತೆಗೆ ಜನಪರ ಕೆಲಸ ಮಾಡಿದರೆ ಅವರೆಂದೂ ನಿವೃತ್ತಿ ಆಗುವುದಿಲ್ಲ ಅಥವಾ ಬಳಲುವುದೂ ಇಲ್ಲ. ಆ ಕೆಲಸವನ್ನು ಅನಂತಕುಮಾರ್ ಮಾಡಿದ್ದಾರೆ.
ರಾಷ್ಟಮಟ್ಟದಲ್ಲಿ ವಾಜಪೇಯಿಯವರ ನೇತೃತ್ವದಲ್ಲಿ ಭೂಮಿಯಿಂದ ಆಕಾಶದವರೆಗೂ ಅವರ ಸೇವೆ ಇದೆ. ಬೇವುಲೇಪಿತ ಯೂರಿಯಾ, ಕಡಿಮೆ ಬೆಲೆಯಲ್ಲಿ ಗೊಬ್ಬರ, ಜನೌಷಧ ಕೇಂದ್ರ ಹೀಗೆ ಅನೇಕ ಕಾರ್ಯಕ್ರಮಗಳನ್ನು ದೇಶದ ಜನರಿಗೆ ನೀಡಿದ್ದಾರೆ.
ಸದಾಕಾಲ ಪ್ರರಣೆ ನೀಡುವ ಅನಂತಕುಮಾರ್ ಅವರು ಹಾಕಿಕೊಟ್ಟ ಸೇವಾ ಗುಣದ ಮಾರ್ಗದಲ್ಲಿ ನಡೆಯುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕು. ಜನಸೇವೆಯ ಹಾದಿಯಲ್ಲಿಯೇ ಶ್ರೀಮತಿ ತೇಜಸ್ವಿನಿ ಅನಂತಕುಮಾರ್ ಅವರು ನಡೆಯುತ್ತಿದ್ದಾರೆ. ಅದಮ್ಯ ಚೇತನ ಅನಂತಕುಮಾರ್ ಸೇವಾ ಪ್ರತಿಷ್ಠಾನದ ಸಮಾಜಮುಖಿ ಕಾರ್ಯಕ್ರಮಕ್ಕೆ ಸರ್ಕಾರದ ಬೆಂಬಲ ಸದಾ ಇರಲಿದೆ ಎಂದು ಸಿಎಂ ಹೇಳಿದರು.