ಬೆಂಗಳೂರು: ಕೋವಿಡ್-19 ಸೋಂಕು ನಿಯಂತ್ರಣ, ಮುನ್ನೆಚ್ಚರಿಕೆ ಹಾಗೂ ಚಿಕಿತ್ಸಾ ಸೌಲಭ್ಯಗಳನ್ನು ಕಲ್ಪಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ. ಜೊತೆಗೆ ಸಂಕಷ್ಟದಲ್ಲಿ ಸಿಲುಕಿರುವ ಬಡವರು ಹಾಗೂ ಕಾರ್ಮಿಕರಿಗೂ ನೆರವಿನ ಹಸ್ತ ಚಾಚಿದೆ. ಈ ಸಂದರ್ಭದಲ್ಲಿ ಹೆಚ್ಚಿನ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ದಾನಿಗಳು ಸಾಧ್ಯವಾದಷ್ಟು ಆನ್ಲೈನ್ ಮೂಲಕವೇ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದ್ದಾರೆ.
ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮಾನವೀಯ ನೆಲೆಯಲ್ಲಿ ಸರ್ಕಾರದ ವಿವಿಧ ನಿಗಮ/ಮಂಡಳಿಗಳು, ಉದ್ಯಮಿಗಳು, ಸಂಘ-ಸಂಸ್ಥೆಗಳು, ದಾನಿಗಳು ದೇಣಿಗೆಯನ್ನು ಚೆಕ್/ಡಿಡಿಗಳ ಮೂಲಕ ನೀಡಿ ಸರ್ಕಾರದೊಂದಿಗೆ ಕೈ ಜೋಡಿಸುತ್ತಿರುವುದಕ್ಕೆ ಮುಖ್ಯಮಂತ್ರಿಗಳು ಕೃತಜ್ಞತೆ ಸಲ್ಲಿಸಿದ್ದಾರೆ.
ಸಮುದಾಯದ ಆರೋಗ್ಯದ ಹಿತದೃಷ್ಟಿಯಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅತ್ಯವಶ್ಯಕವಾಗಿರುವುದರಿಂದ ದಾನಿಗಳು ಮುಖ್ಯಮಂತ್ರಿಯವರನ್ನು ಖುದ್ದಾಗಿ ಭೇಟಿ ಮಾಡಿ ದೇಣಿಗೆಯನ್ನು ನೀಡುವುದರ ಬದಲಾಗಿ ಈ ಕೆಳಕಂಡ ಮುಖ್ಯಮಂತ್ರಿಗಳ ಕೋವಿಡ್-19 ಪರಿಹಾರ ನಿಧಿ ಖಾತೆಗೆ ಆನ್ಲೈನ್ ಮುಖಾಂತರ ದೇಣಿಗೆಯನ್ನು ನೀಡುವಂತೆ ಮನವಿ ಮಾಡಿದ್ದಾರೆ.
- Account Name: Chief Minister Relief Fund Covid-19,
- Bank Name: State Bank of India (SBI)
- Branch: Vidhana Soudha, Bangalore
- Account No: 39234923151
- IFSC Code: SBIN0040277
- MICR No: 560002419
ಇದಲ್ಲದೆ cmrf.karnataka.gov.in ವೆಬ್ಸೈಟ್ನಲ್ಲಿ ಯುಪಿಐ ಆ್ಯಪ್ಗಳ ಮೂಲಕ ಪಾವತಿಸಲು ಸಹ ಅವಕಾಶವಿದೆ. ಆನ್ಲೈನ್ ಮೂಲಕ ದೇಣಿಗೆಯನ್ನು ಪಾವತಿಸಲು ಸಾಧ್ಯವಾಗದವರು ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಅಥವಾ ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿಯವರನ್ನು ಭೇಟಿ ಮಾಡಿ ದೇಣಿಗೆಯನ್ನು ನೀಡಬಹುದಾಗಿದೆ.
ಕೋವಿಡ್-19 ನಿಧಿಗೆ ಸೇವಾ ಮನೋಭಾವದಿಂದ ದೇಣಿಗೆ ನೀಡುವ ಪ್ರತಿಯೊಬ್ಬ ದಾನಿಯನ್ನು ಕೊರೊನಾ ವೈರಾಣುವಿನ ಹರಡುವಿಕೆಯು ನಿಯಂತ್ರಣಕ್ಕೆ ಬಂದ ನಂತರ ಸಂಪರ್ಕಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ.