ಬೆಂಗಳೂರು: ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದರೂ ಬಿ.ಎಸ್.ಯಡಿಯೂರಪ್ಪ ಅವರಿಗೆ ಪ್ರತಿಪಕ್ಷ ನಾಯಕರ ವಾಹನವೇ ಬೇಕಂತೆ. ಮುಖ್ಯಮಂತ್ರಿ ಸ್ಥಾನದ ಜೊತೆಯಲ್ಲಿಯೇ ಬಂದ ಹೊಸ ಕಾರಿನಲ್ಲಿ ಸಂಚರಿಸಲು ನಿರಾಕರಿಸಿರುವ ಬಿ.ಎಸ್.ವೈ ಪ್ರತಿಪಕ್ಷ ನಾಯಕರಾಗಿದ್ದಾಗ ಬಳಸುತ್ತಿದ್ದ ಸರ್ಕಾರಿ ಕಾರನ್ನೇ ಇದೀಗ ಮುಖ್ಯಮಂತ್ರಿ ಆದ ಮೇಲೂ ಬಳಸುತ್ತಿದ್ದಾರೆ.
ಪ್ರತಿಪಕ್ಷ ನಾಯಕರಾಗಿದ್ದ ವೇಳೆ ಬಿ.ಎಸ್. ಯಡಿಯೂರಪ್ಪ ಅವರಿಗೆ ಕೆಎ-01 ಜಿ 6309 ಸಂಖ್ಯೆಯ ಬಿಳಿಬಣ್ಣ ಟೊಯೋಟಾ ಫಾರ್ಚುನರ್ ಕಾರನ್ನು ಸರ್ಕಾರ ನೀಡಿತ್ತು. ಸರ್ಕಾರಿ ಕಾರ್ಯ ನಿಮಿತ್ತ ಸಂಚರಿಸುವ ವೇಳೆ ಈ ಕಾರನ್ನು ಬಳಕೆ ಮಾಡುತ್ತಿದ್ದರು. ಕಳೆದ 8 ತಿಂಗಳಿನಿಂದ ಬಿಎಸ್ವೈಗೆ ಈ ಕಾರು ಬಹಳ ಅಚ್ಚು ಮೆಚ್ಚಾಗಿದೆ. ಒಂದು ರೀತಿಯಲ್ಲಿ ಬಿಳಿಬಣ್ಣ ಟೊಯೋಟಾ ಫಾರ್ಚುನರ್ ಕಾರು ಲಕ್ಕಿ ಕಾರು ಎನ್ನುವ ಸೆಂಟಿಮೆಂಟ್ ಬಿಎಸ್ವೈ ಅವರಿಗಿದೆಯಂತೆ.
ಈ ಕಾರಿನ ಮೇಲೆ ಯಡಿಯೂರಪ್ಪ ಅವರಿಗೆ ಎಷ್ಟು ಮೋಹವಿದೆ ಎಂದರೆ ಸ್ವತಃ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದರೂ ಕಾರು ಬದಲಾಯಿಸಲು ನಿರಾಕರಿಸಿದ್ದಾರೆ. ಮುಖ್ಯಮಂತ್ರಿಯಾಗಿ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದಂತೆ ಕೆಎ-59 ಜಿ-9000 ಸಂಖ್ಯೆಯ ಬಿಳಿ ಬಣ್ಣದ ಟೊಯೋಟಾ ಫಾರ್ಚುನರ್ ಕಾರನ್ನು ನೀಡಲಾಗಿದೆ. ಆದರೂ ರಾಜಭವನದಲ್ಲಿ ಯಡಿಯೂರಪ್ಪ ಹುಡುಕಿದ್ದು ತಮ್ಮ ಹಳೆಯ ಕಾರನ್ನೇ.
ಮುಖ್ಯಮಂತ್ರಿಗಳಿಗೆ ನೀಡಿರುವ ವಾಹನವನ್ನು ಸ್ವೀಕರಿಸಿದರೂ ಅದನ್ನು ಬಳಸದ ಬಿಎಸ್ವೈ ಪ್ರತಿಪಕ್ಷ ನಾಯಕರಾಗಿ ಕಳೆದ 8 ತಿಂಗಳಿನಿಂದ ಬಳಕೆ ಮಾಡುತ್ತಿರುವ ಟೊಯೋಟಾ ಫಾರ್ಚುನರ್ ಕಾರನ್ನೇ ಈಗಲೂ ಬಳಸುತ್ತಿದ್ದಾರೆ. ಎಲ್ಲ ಅಧಿಕೃತ ಸರ್ಕಾರಿ ಕಾರ್ಯಕ್ರಮಗಳಿಗೆ ತೆರಳಲು ಬಿಎಸ್ವೈ ತಮ್ಮ ಹಳೆಯ ಕಾರನ್ನೇ ಬಳಕೆ ಮಾಡುತ್ತಿದ್ದಾರೆ.
ಯಡಿಯೂರಪ್ಪ ಅವರಿಗೆ ಕಾರಿನ ಮೇಲಿನ ವ್ಯಾಮೋಹ ಹಾಗೂ ಸೆಂಟಿಮೆಂಟ್ ಹೊಸತೇನೂ ಅಲ್ಲ, ತಮ್ಮ ಮೊದಲ ಕಾರು ಬಿಳಿ ಬಣ್ಣದ ಅಂಬಾಸಿಡರ್ ಇನ್ನೂ ಶಿಕಾರಿಪುರದ ನಿವಾಸದಲ್ಲಿ ಇದೆ. ಅದನ್ನು ಈಗ ಯಡಿಯೂರಪ್ಪ ಬಳಕೆ ಮಾಡಿದೇ ಇದ್ದರೂ ಕಾರನ್ನು ಮಾರಾಟ ಮಾಡುವ ಗೋಜಿಗೆ ಹೋಗದೇ ನೆನಪಿಗಾಗಿ ಉಳಿಸಿಕೊಂಡಿದ್ದಾರೆ.
ಇನ್ನು ಧರಂ ಸಿಂಗ್ ಸರ್ಕಾರದ ವೇಳೆ ಪ್ರತಿಪಕ್ಷ ನಾಯಕರಾಗಿದ್ದ ಬಿಎಸ್ವೈಗೆ ರೇಸ್ ಕೋರ್ಸ್ ರಸ್ತೆಯ ಸರ್ಕಾರಿ ಬಂಗಲೆ ಹಂಚಿಕೆ ಮಾಡಲಾಗಿತ್ತು. ನಂತರ ಉಪ ಮುಖ್ಯಮಂತ್ರಿ ಆದ ಬಿಎಸ್ವೈ ಇದು ಅದೃಷ್ಟದ ನಿವಾಸ ಎಂದು ಅದೇ ನಿವಾಸದಲ್ಲಿ ವಾಸ್ತವ್ಯ ಮುಂದುವರೆಸಿದರು. ನಂತರ ಮುಖ್ಯಮಂತ್ರಿ ಆದ ಬಳಿಕವೂ ಅದೇ ಮನೆಯಲ್ಲಿ ಇದ್ದರು, ಸಿಎಂ ಸ್ಥಾನದಿಂದ ಕೆಳಗಿಳದ ನಂತರವೂ ಸಾಕಷ್ಟು ದಿನ ಅದೇ ನಿವಾಸದಲ್ಲಿ ವಾಸ್ತವ್ಯ ಹೂಡಿದ್ದರು. ಕುಮಾರಸ್ವಾಮಿ ಸರ್ಕಾರದ ವೇಳೆಯಲ್ಲಿಯೇ ರೇಸ್ ಕೋರ್ಸ್ ರಸ್ತೆಯ ನಿವಾಸಕ್ಕೆ ಬೇಡಿಕೆ ಇಟ್ಟಿದ್ದರು. ಬೇರೆ ನಿವಾಸ ಹಂಚಿಕೆ ಮಾಡಿದ್ದಕ್ಕೆ ಬೇಸರಗೊಂಡು ಸರ್ಕಾರಿ ಬಂಗಲೆಯನ್ನೇ ತಿರಸ್ಕರಿಸಿ ಸ್ವಂತ ನಿವಾಸದಲ್ಲೇ ಇದ್ದರು.
ಇದೀಗ ಈ ಸಾಲಿಗೆ ಫಾರ್ಚುನರ್ ಕಾರು ಸೇರ್ಪಡೆಯಾಗಿದೆ. ಹಾಗಾಗಿ ಪ್ರತಿಪಕ್ಷ ನಾಯಕರಾಗಿದ್ದಾಗ ಬಳಸುತ್ತಿದ್ದ ಸರ್ಕಾರಿ ಕಾರನ್ನೇ ಮುಖ್ಯಮಂತ್ರಿ ಆದ ಬಳಿಕವೂ ಬಳಕೆ ಮಾಡುತ್ತಿದ್ದಾರೆ.
ಹಳೇ ಚಾಲಕನೇ ಬೇಕು: ಸರ್ಕಾರಿ ಕಾರು ಹಾಗೂ ಚಾಲಕನ ಸೌಲಭ್ಯ ಕಲ್ಪಿಸಿದರೂ ಅದನ್ನು ಒಪ್ಪದ ಸಿಎಂ ತಮ್ಮ ಹಳೇಯ ಕಾರು ಮತ್ತು ಹಿಂದಿನ ಚಾಲಕನೇ ಬೇಕು ಎಂದು ಹಳೇಯ ಕಾರಿನ ಜೊತೆ ಆ ಕಾರಿನ ಚಾಲಕ ಶಿವು ಅವರನ್ನೇ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.