ಬೆಂಗಳೂರು: ಮೊಘಲರ ಕಾಲದ ಚಿತ್ರಿಕೆ ಇರುವ ಪುರಾತನ ಕಾಲದ, ಆನೆದಂತದಿಂದ ಮಾಡಿರುವ ವಿವಿಧ ಶೈಲಿಯ ಬೆಲೆಬಾಳುವ ವಸ್ತುಗಳ ಮಾರಾಟಕ್ಕೆ ಯತ್ನಿಸುವಾಗ ಅನ್ಯ ರಾಜ್ಯದ ಇಬ್ಬರು ಸೇರಿ ಒಟ್ಟು ಆರು ಮಂದಿ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಹರಿಯಾಣ ಹಾಗೂ ಪಂಜಾಬ್ ಮೂಲದ ಹಿಮ್ಮತ್ ಸಿಂಗ್, ಪ್ರವೀಣ್ ಸಾಂಬಿಯಾಲ್, ಸ್ಥಳೀಯ ಆರೋಪಿಗಳಾದ ಅಬ್ದುಲ್ ಕಯೂಮ್, ಮೊಹಮ್ಮದ್ ರಫೀಕ್, ಮೊಹಮ್ಮದ್ ಇಸ್ರಾರ್ ಹಾಗೂ ಆಮ್ಜದ್ ಪಾಷಾ ಬಂಧಿತರು.
ಆನೆದಂತದಿಂದ ಮಾಡಿರುವ ಚೌಕಾಕಾರದ ಬಾಕ್ಸ್ 533 ಗ್ರಾಂ, ಹಿಡಿಕೆಯಿರುವ ಚಾಕು, ಬಾಗಿಲ ಹಿಡಿಕೆ, ಆನೆಯ ಮೂರ್ತಿಯ ವಾಕಿಂಗ್ ಸ್ಟಿಕ್, ಮೊಟ್ಟೆ ಆಕಾರದ 20 ಏರಾಟಿಕ್ ವರ್ಕ್ಸ್ (ಕಾಮಸೂತ್ರ ವಾತ್ಸಾಯನ) ಸೇರಿದಂತೆ ಒಟ್ಟು ಏಳೂವರೆ ಕೆ.ಜಿ. ತೂಕದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ವನ್ಯಜೀವಿ ಅಪರಾಧ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಆರೋಪಿಗಳು ಪತ್ತೆ ಹೇಗೆ?: ಹವಾಲಾ ದಂಧೆ ನಡೆಯುವ ಬಗ್ಗೆ ಮಾಹಿತಿ ಮೇರೆಗೆ ಎಚ್ಚೆತ್ತ ಎಸಿಪಿ ರೀನಾ ಸುವರ್ಣ ನೇತೃತ್ವದ ಸಿಸಿಬಿ ಅಧಿಕಾರಿಗಳ ತಂಡ ಹಲಸೂರು ಗೇಟ್ ಬಳಿಯ ಬನ್ನಪ್ಪ ಪಾರ್ಕ್ನಲ್ಲಿ ಕಾರ್ಯಾಚರಣೆ ಮಾಡಿದ್ದಾರೆ.
ಸುದ್ದಿಗೋಷ್ಠಿ ನಡೆಸಿದ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ, ಬೆಲೆಬಾಳುವ ವಸ್ತುಗಳನ್ನು ಎಲ್ಲಿಂದ ತಂದು ಯಾರಿಗೆ ಮಾರಾಟ ಮಾಡಲು ಮುಂದಾಗಿದ್ದರು ಎಂಬುದರ ಬಗ್ಗೆ ಇನ್ನಷ್ಟೇ ಗೊತ್ತಾಗಬೇಕಿದೆ. ಆರೋಪಿಗಳ ವಿರುದ್ಧ ಈ ಹಿಂದೆ ಕ್ರಿಮಿನಲ್ ಕೇಸ್ ದಾಖಲಾಗಿದೆಯೇ ಎಂಬುದರ ಬಗ್ಗೆಯೂ ಪತ್ತೆ ಹಚ್ಚಲಾಗುತ್ತಿದೆ. ವಶಪಡಿಸಿಕೊಂಡಿರುವ ವಸ್ತುಗಳು ಮೇಲ್ನೊಟಕ್ಕೆ ಮೊಘಲರ ಕಾಲದ ವಸ್ತುಗಳು ಎಂದು ಅಂದಾಜಿಸಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಮಂಗಳೂರು ಪೊಲೀಸರ ಬೃಹತ್ ಕಾರ್ಯಾಚರಣೆ:132 ಕೆಜಿ ಗಾಂಜಾ ವಶ, ಇಬ್ಬರ ಬಂಧನ