ಬೆಂಗಳೂರು: ವಿಧಾನಸಭಾ ಉಪ ಚುನಾವಣಾ ಕಣದ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹಾಗೆಯೇ ಸಿಲಿಕಾನ್ ಸಿಟಿಯಲ್ಲಿ ಮಹಾಲಕ್ಷ್ಮಿ ಲೇಔಟ್, ಯಶವಂತಪುರ, ಶಿವಾಜಿನಗರ ಹಾಗೂ ಕೆ.ಆರ್.ಪುರಂ ಕ್ಷೇತ್ರದಲ್ಲಿ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪ್ರಮುಖ ರೌಡಿಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರಾಜಕಾರಣದಲ್ಲಿ ಇತ್ತೀಚೆಗೆ ಆದ ಎಲ್ಲಾ ಬೆಳವಣಿಗೆಗಳನ್ನ ಗಮನಿಸಿದ ಪೊಲೀಸ್ ಇಲಾಖೆ, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ, ಗುಪ್ತಚರ ಇಲಾಖೆಯಿಂದ ಮಾಹಿತಿ ಪಡೆದು ಎಲ್ಲೆಡೆ ಖಾಕಿ ಕಣ್ಗಾವಲು ಇಟ್ಟಿದೆ. ಮಫ್ತಿಯಲ್ಲಿ ತಿರುಗಿ ಅನುಮಾನಾಸ್ಪದ ವ್ಯಕ್ತಿಗಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಿದ್ದಾರೆ ಎನ್ನುವ ಮಾಹಿತಿ ದೊರೆತಿದೆ.
ಸಿಲಿಕಾನ್ ಸಿಟಿಯಲ್ಲಿ ಸುಮಾರು 8 ಸಾವಿರ ಕುಖ್ಯಾತ ಹಾಗೂ ಪುಡಿ ರೌಡಿಗಳಿದ್ದು, ಇವರ ಮೇಲೆ ಸ್ಥಳೀಯ ಪೊಲೀಸರು ಹಾಗೂ ಸಿಸಿಬಿ ಕಣ್ಣಿಟ್ಟು ಅವರ ಚಲನವಲನಗಳನ್ನ ಗಮನಿಸುತ್ತಿದ್ದಾರೆ.
ನಗರದ ಪ್ರಮುಖ ರೌಡಿಗಳಾದ ಸ್ಟೇಷನ್ ಶೇಖರ, ಕೊರಂಗೂ ಕೃಷ್ಣ, ಮುಲಾಮಾ, ಸರಾಯಿ, ಮೊಟ್ಟೆ ಸೀನಾ ಹೀಗೆ ಹಲವಾರು ರೌಡಿಗಳನ್ನ ಸಿಸಿಬಿ ಡಿಸಿಪಿ ರವಿ ಅವರು ಕರೆದು ಪ್ರತಿ ರೌಡಿಗಳಿಗೆ ವಾರ್ನ್ ಮಾಡಿ ಅವರಿಂದ ಮುಚ್ಚಳಿಕೆ ಪತ್ರ ಬರೆಸಿಕೊಂಡು ಎಚ್ಚರಿಕೆ ನೀಡಿದ್ದಾರೆ.