ಬೆಂಗಳೂರು: ಆರ್ಥಿಕ ಸಂಕಷ್ಟದ ಮಧ್ಯೆ ಬಜೆಟ್ ಮಂಡನೆ ಮಾಡಿರುವ ಯಡಿಯೂರಪ್ಪ, ಯಾವುದೇ ಜನಪ್ರಿಯ ಯೋಜನೆಗಳಿಗೆ ಕೈ ಹಾಕುವ ಗೋಜಿಗೆ ಹೋಗದೆ ಅಳೆದು ತೂಗಿ ಇಲಾಖೆಗಳಿಗೆ ಅನುದಾನ ಹಂಚಿಕೆ ಮಾಡಿದ್ದಾರೆ.
ಹೀಗಾಗಿ ಕೆಲ ಇಲಾಖೆಗಳಿಗೆ ನಿರೀಕ್ಷಿತ ಅನುದಾನ ಬಂದಿಲ್ಲ. ಆರ್ಥಿಕ ಸಂಕಷ್ಟದ ಮಧ್ಯೆ ಬಜೆಟ್ ಮಂಡಿಸಿರುವ ಸಿಎಂಗೆ ಎಲ್ಲಾ ಇಲಾಖೆಗಳಿಗೆ ಅನುದಾನ ಹೊಂದಾಣಿಕೆ ಮಾಡುವುದೇ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಹಲವು ಇಲಾಖೆಗಳು ಹೆಚ್ಚಿನ ಅನುದಾನದ ಬೇಡಿಕೆ ಇಟ್ಟಿದ್ದವು. ಆದರೆ ಇಲಾಖಾವಾರು ಹೆಚ್ಚಿನ ಅನುದಾನ ನೀಡಿಲ್ಲ.
ಸಮಾಜ ಕಲ್ಯಾಣ ಇಲಾಖೆ:
ಎಸ್ಸಿಪಿಟಿಎಸ್ಪಿ ಯೋಜನೆಗೆ ಒಟ್ಟು ಬಜೆಟ್ ಅನುದಾನದ 24.1%ರಷ್ಟು ಇಡುವುದು ಕಡ್ಡಾಯವಾಗಿದೆ. ಅದರಂತೆ 2020-21ಸಾಲಿನಲ್ಲಿ 26,131 ಕೋಟಿ ರೂ. ಮೀಸಲಿಡಬೇಕು. ಅದರೆ ಈ ಬಾರಿ ಸಮಾಜ ಕಲ್ಯಾಣ ಇಲಾಖೆಯ ವಿವಿಧ ಯೋಜನೆಗಳಿಗೆ 9,444 ಕೋಟಿ ರೂ. ಅನುದಾನ ನೀಡಲಾಗಿದೆ. ಅದೇ 2019-20ನೇ ಸಾಲಿನಲ್ಲಿ ಸಮಾಜ ಕಲ್ಯಾಣ ಇಲಾಖೆಗೆ 11,331 ಕೋಟಿ ರೂ. ಅನುದಾನ ನೀಡಲಾಗಿತ್ತು. ಆ ಮೂಲಕ ಅನುದಾನ ಹಂಚಿಕೆಯಲ್ಲಿ ಈ ಬಾರಿ ಸುಮಾರು 1887 ಕೋಟಿ ರೂ. ಕಡಿತಗೊಳಿಸಲಾಗಿದೆ.
ಲೋಕೋಪಯೋಗಿ ಇಲಾಖೆ:
ಈಗಾಗಲೇ ನೆರೆಯಿಂದ ಲೋಕೋಪಯೋಗಿ ಇಲಾಖೆಗೆ ಭಾರಿ ಹೊರೆ ಬಿದ್ದಿದೆ. ಲೋಕೋಪಯೋಗಿ ಇಲಾಖೆಯ ರಸ್ತೆ, ಸೇತುವೆಗಳು ಕೊಚ್ಚಿ ಹೋಗಿದ್ದು, ಸುಮಾರು 7,020 ಕೋಟಿ ರೂ. ಹಾನಿಯಾಗಿದೆ. ಹೀಗಾಗಿ ಲೋಕೋಪಯೋಗಿ ಇಲಾಖೆ ಈ ಬಾರಿ ಸುಮಾರು 15,000 ಕೋಟಿ ರೂ. ಅನುದಾನ ಹಂಚಿಕೆ ಮಾಡುವಂತೆ ಪ್ರಸ್ತಾಪ ಸಲ್ಲಿಸಿತ್ತು.
ಲೋಕೋಪಯೋಗಿ ಇಲಾಖೆಗೆ ಈ ಬಾರಿ 11,463 ಕೋಟಿ ರೂ. ಅನುದಾನ ನೀಡಲಾಗಿದೆ. 2019-20ನೇ ಸಾಲಿನಲ್ಲಿ ಲೋಕೋಪಯೋಗಿ ಇಲಾಖೆಗೆ 11,405 ಕೋಟಿ ರೂ. ನೀಡಲಾಗಿತ್ತು. ಕಳೆದ ಬಾರಿಗಿಂತ ಕೇವಲ 58 ಕೋಟಿ ರೂ. ಅನುದಾನ ಹೆಚ್ಚಿಗೆ ಕೊಡಲಾಗಿದೆ. ಯಾವುದೇ ಹೊಸ ಯೋಜನೆಗಳಿಗೆ ಕೈ ಹಾಕಿಲ್ಲ. ಪ್ರಗತಿಯಲ್ಲಿರುವ ಪ್ರಮುಖ ಯೋಜನೆಗಳನ್ನು ಮಾತ್ರ ಮುಂದುವರಿಸಲಾಗುತ್ತದೆ.
ನಗರಾಭಿವೃದ್ಧಿ ಇಲಾಖೆ:
ಇನ್ನು ನಗರಾಭಿವೃದ್ಧಿ ಇಲಾಖೆಗೆ ಈ ಬಾರಿ 27,952 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ. ಕಳೆದ ಬಜೆಟ್ನಲ್ಲಿ 24,413 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿತ್ತು. ಈ ಬಜೆಟ್ನಲ್ಲಿ ರಾಜ್ಯದ 17 ನದಿ ಪಾತ್ರದ ಮಲಿನತೆಯನ್ನು ತಡೆಗಟ್ಟಲು 1690 ಕೋಟಿ ರೂ. ಮೊತ್ತದಲ್ಲಿ 20 ನಗರ ಪ್ರದೇಶಗಳಲ್ಲಿ ಒಳಚರಂಡಿ ವ್ಯವಸ್ಥೆ ಮತ್ತು ಒಂದು ಪಟ್ಟಣಕ್ಕೆ ಮಲತ್ಯಾಜ್ಯ ಸಂಸ್ಕರಣಾ ಘಟಕ. ಇದಕ್ಕಾಗಿ ಒಟ್ಟು 100 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಉಳಿದಂತೆ ಯಾವುದೇ ಪ್ರಮುಖ ಯೋಜನೆಗಳನ್ನು ಘೋಷಣೆ ಮಾಡಿಲ್ಲ.