ಬೆಂಗಳೂರು: ರಾಜ್ಯದಲ್ಲಿ ನಾಲ್ಕನೇ ಬಾರಿ ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸಿದರು. ರಾಜಭವನದನ ಗಾಜಿನ ಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ವಜೂಬಾಯಿ ವಾಲಾ ನೂತನ ಸಿಎಂ ಆಗಿ ಪ್ರತಿಜ್ಞಾವಿಧಿ ಬೋಧಿಸಿದರು.
ರಾಜಭವನದಲ್ಲಿ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿದ್ದು, ರಾಜ್ಯಪಾಲರು ಪ್ರತಿಜ್ಞಾವಿಧಿ ಬೋಧಿಸಿದರು. ಹಸಿರು ಶಾಲು ಹೊದ್ದು, ದೇವರು ಹಾಗು ರೈತರ ಹೆಸರಿನಲ್ಲಿ ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸಿದ್ರು. ನಂತರ ರಾಜ್ಯಪಾಲರು ನೂತನ ಸಿಎಂಗೆ ಶುಭ ಕೋರಿದರು. ರಾಷ್ಟ್ರಗೀತೆಯೊಂದಿಗೆ ಸಮಾರಂಭವನ್ನು ಮುಗಿಸಲಾಯಿತು. ಸರಿಯಾಗಿ 6.28 ಕ್ಕೆ ಸಮಾರಂಭ ಆರಂಭಗೊಂಡು, ನಂತರ ಕೇವಲ 9 ನಿಮಿಷದೊಳಗೆ ಕಾರ್ಯಕ್ರಮ ಮುಗಿಯಿತು.
ಕಾರ್ಯಕ್ರಮದಲ್ಲಿ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್, ಹಿರಿಯ ನಾಯಕರಾದ ಎಸ್.ಎಂ. ಕೃಷ್ಣ, ರಾಜ್ಯ ಉಸ್ತುವಾರಿ ಮುರುಳೀಧರ ರಾವ್, ಜಗದೀಶ್ ಶೆಟ್ಟರ್, ಮಾಧುಸ್ವಾಮಿ, ಕೆ.ಎಸ್.ಈಶ್ವರಪ್ಪ, ಬಸವರಾಜ ಬೊಮ್ಮಾಯಿ, ಮುರುಗೇಶ್ ನಿರಾಣಿ, ರೇಣುಕಾಚಾರ್ಯ, ಅರವಿಂದ ಲಿಂಬಾವಳಿ, ಉಮೇಶ್ ಕತ್ತಿ, ಸೋಮಣ್ಣ, ಸುರೇಶ್ ಕುಮಾರ್, ಎಸ್.ಆರ್.ವಿಶ್ವನಾಥ್, ಮಾಡಾಳು ವಿರೂಪಾಕ್ಷಪ್ಪ, ರವಿಕುಮಾರ್,ಆಯನೂರು ಮಂಜುನಾಥ್, ಜೀವರಾಜ್, ಕರುಣಾಕರ ರೆಡ್ಡಿ, ಕಲ್ಲಡ್ಕ ಪ್ರಭಾಕರ ಭಟ್, ತಾರಾ, ಕೋಟಾ ಶ್ರೀನಿವಾಸ ಪೂಜಾರಿ, ರಾಮಚಂದ್ರ ಗೌಡ, ಯಡಿಯೂರಪ್ಪ ಪುತ್ರ, ಬಿ.ವೈ ವಿಜಯೇಂದ್ರ, ಬಿ.ಶ್ರೀರಾಮುಲು, ಸಿ.ಪಿಯೋಗೀಶ್ವರ್, ಶೋಭಾ ಕರಂದ್ಲಾಜೆ ಸೇರಿ ಹಲವರು ಸಂಭ್ರಮ ಕ್ಷಣಕ್ಕೆ ಸಾಕ್ಷಿಯಾದರು.
ಬಿಎಸ್ವೈ ಜೊತೆ ಸೆಲ್ಫಿ:
ಸರಿಯಾಗಿ 6 ಗಂಟೆಗೆ ಗಾಜಿನ ಮನೆಗೆ ಆಗಮಿಸಿದ ಯಡಿಯೂರಪ್ಪ ಮುಖಂಡರು ಕುಳಿತಿದ್ದ ಸ್ಥಳದ ಬಳಿಗೆ ಸ್ವತಃ ತೆರಳಿ ಮಾತನಾಡಿಸಿದರು, ಪರಸ್ಪರ ಶುಭವಿನಿಮಯ ಮಾಡಿಕೊಂಡರು. ಮುಖಂಡರು ಯಡಿಯೂರಪ್ಪ ಅವರ ಜೊತೆ ಸೆಲ್ಫಿಗೆ ಮುಗಿಬಿದ್ದು ಫೋಟೋ ಕ್ಲಿಕ್ಕಿಸಿಕೊಂಡರು.
ಕೈ ರೆಬೆಲ್ ಶಾಸಕ ಬೇಗ್ ಉಪಸ್ಥಿತಿ:
ಕಾಂಗ್ರೆಸ್ನ ಬಂಡಾಯ ಶಾಸಕ ರೋಷನ್ ಬೇಗ್ ಸಮಾರಂಭಕ್ಕೆ ಆಗಮಿಸಿದ್ದು ವಿಶೇಷವಾಗಿತ್ತು. ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಜೊತೆ ಶುಭಾಶಯ ವಿನಿಮಯ ಮಾಡಿಕೊಂಡ ಅವರು ನೂತನ ಸಿಎಂ ಯಡಿಯೂರಪ್ಪನವರಿಗೆ ಶುಭಕೋರುತ್ತಿದ್ದ ದೃಶ್ಯ ಕಂಡು ಬಂತು.
ರಾಜಭವನದಲ್ಲಿ ಸ್ಥಳಾವಕಾಶದ ಕೊರತೆ:
ಗಣ್ಯರಿಗಾಗಿ ಮೀಸಲಿರಿಸಿದ್ದ ಮುಂಭಾಗದ ಆಸನಗಳಲ್ಲಿ ಅತಿಥಿಗಳು ಆಸೀನರಾದರಾದರೂ ಶಾಸಕರು, ಸಂಸದರು ಸ್ಥಳಕ್ಕಾಗಿ ಹುಡುಕಾಡುತ್ತಿದ್ದ ದೃಶ್ಯ ಕಂಡು ಬಂದಿತು. ಗಣ್ಯರಿಗೆ ಸ್ಥಳಾವಕಾಶದ ಕೊರತೆ ಕಂಡುಬಂತು. ನಂತರ ಹೆಚ್ಚುವರಿ ಆಸನಗಳ ವ್ಯವಸ್ಥೆ ಕಲ್ಪಿಸಲಾಯಿತು.