ಬೆಂಗಳೂರು: ಅನರ್ಹ ಶಾಸಕರ ಪಕ್ಷ ಸೇರ್ಪಡೆ ಹಾಗೂ ಟಿಕೆಟ್ ಹಂಚಿಕೆ ಸಂಬಂಧ ನಡೆದ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ಬಳಿಕ ಪಕ್ಷದ ಪ್ರಮುಖರ ಸಭೆ ನಡೆಯಿತು.
ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಜಗದೀಶ್ ಶೆಟ್ಟರ್, ಸಿ.ಎಂ ಉದಾಸಿ, ಆರ್.ಅಶೋಕ್, ಪ್ರಹ್ಲಾದ್ ಜೋಶಿ, ಅರವಿಂದ ಲಿಂಬಾವಳಿ ಭಾಗಿಯಾಗಿದ್ದು, ಬಳಿಕ ಲಕ್ಷ್ಮಣ್ ಸವದಿಯನ್ನೂ ಸಭೆಗೆ ಕರೆಸಿಕೊಳ್ಳಲಾಯಿತು.
ಕೋರ್ ಕಮಿಟಿ ಸಭೆ ನಂತರ ನಿರ್ಗಮಿಸಿದ್ದ ಸಿಎಂ ಯಡಿಯೂರಪ್ಪ ಪೂರ್ವ ನಿಯೋಜಿತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮರಳಿ ಬಿಜೆಪಿ ಕಚೇರಿಗೆ ಆಗಮಿಸಿ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಅನರ್ಹ ಶಾಸಕರಿಗೆ ಬಿಜೆಪಿ ಟಿಕೆಟ್ ನೀಡುವ ಬಗ್ಗೆ ನಡೆಯುತ್ತಿರುವ ಚರ್ಚೆಯಲ್ಲಿ ಭಾಗಿಯಾಗಿದ್ದಾರೆ. ಪ್ರಮುಖವಾಗಿ ಅಥಣಿ ಕ್ಷೇತ್ರದ ಟಿಕೆಟ್ ಮಹೇಶ್ ಕುಮಟಳ್ಳಿಗೆ ಬಿಟ್ಟುಕೊಡುವಂತೆ ಲಕ್ಷ್ಮಣ ಸವದಿ ಮನವೊಲಿಸಲು ಖುದ್ದು ರಂಗಕ್ಕಿಳಿದ ಸಿಎಂ ಯಡಿಯೂರಪ್ಪ ಸವದಿ ಜೊತೆ ಮಾತುಕತೆ ನಡೆಸಿದರು.
ಬಿಜೆಪಿ ಪ್ರಮುಖರ ಸಭೆ ನಂತರ ಚುನಾವಣಾ ಉಸ್ತುವಾರಿಗಳ ಸಭೆ ನಡೆಸಲಾಯಿತು. ಕೆ.ಎಸ್.ಈಶ್ವರಪ್ಪ, ಆರ್.ಅಶೋಕ್, ಸಿ.ಟಿ ರವಿ, ಶಶಿಕಲಾ ಜೊಲ್ಲೆ ಸೇರಿದಂತೆ ಉಪ ಚುನಾವಣೆಗೆ ನೇಮಕಗೊಂಡ ಉಸ್ತುವಾರಿಗಳ ಜೊತೆ ಸಿಎಂ ಮತ್ತು ರಾಜ್ಯಾಧ್ಯಕ್ಷ ಕಟೀಲ್ ಸಭೆ ನಡೆಸಿದರು. ಉಪ ಚುನಾವಣಾ ತಯಾರಿ, ರೂಪಿಸಬೇಕಾದ ಕಾರ್ಯತಂತ್ರಗಳ ಕುರಿತು ಸಮಾಲೋಚನೆ ನಡೆಸಿದರು.
ರೋಷನ್ ಬೇಗ್ ಬಿಜೆಪಿ ಸೇರ್ಪಡೆಗೆ ಸಮ್ಮತಿಸಿದ್ದರೂ ರೋಷನ್ ಬೇಗ್ ಗೆ ಟಿಕೆಟ್ ನೀಡುವುದು ಅನುಮಾನ ಎನ್ನಲಾಗಿದೆ. ಐಎಂಎ ಹಗರಣದಿಂದ ಹಿನ್ನಡೆಯಾಗುವ ಸಾಧ್ಯತೆಯಿಂದ ರೋಷನ್ ಬೇಗ್ ಗೆ ಟಿಕೆಟ್ ನೀಡುವ ಬಗ್ಗೆ ಪರ ವಿರೋಧ ಕುರಿತು ಚರ್ಚೆ ನಡೆಸಲಾಯಿತು. ಕಟ್ಟಾ ಸುಬ್ರಹ್ಮಣ್ಯ ನಾಯ್ಡುಗೆ ಟಿಕೆಟ್ ನೀಡುವ ಒಲವು ಉಸ್ತುವಾರಿಗಳ ಸಭೆಯಲ್ಲಿ ವ್ಯಕ್ತವಾಗಿದೆ ಎಂದು ತಿಳಿದುಬಂದಿದೆ.
ಹುಣಸೂರಿನಿಂದ ಹೆಚ್.ವಿಶ್ವನಾಥ್ ಬದಲು ಸಿ.ಪಿ ಯೋಗೇಶ್ವರ್ ಸ್ಪರ್ಧೆ ಕುರಿತು ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು. ಹೆಚ್.ವಿಶ್ವನಾಥ್ ಪುತ್ರ ಅಮಿತ್ ದೇವರಹಟ್ಟಿ ಹೆಸರು ಚರ್ಚೆಗೆ ಬಂದಿದ್ದು, ವಿಶ್ವನಾಥ್ ಅಂತಿಮವಾಗಿ ಒಪ್ಪಿಗೆ ಕೊಟ್ಟರೆ ಹುಣಸೂರಿನಿಂದ ಸಿ. ಪಿ ಯೋಗೇಶ್ವರ್ ಸ್ಪರ್ಧೆಗೆ ಪಕ್ಷದ ಮುಖಂಡರು ಒಲವು ಹೊಂದಿದ್ದು, ಇನ್ನೂ ಅಂತಿಮ ನಿರ್ಧಾರ ಆಗಿಲ್ಲ.
ರಾಣೆಬೆನ್ನೂರು ಕ್ಷೇತ್ರದ ಅನರ್ಹ ಶಾಸಕ ಶಂಕರ್ ಬದಲು ಈಶ್ವರಪ್ಪ ಪುತ್ರ ಕಾಂತೇಶ್ ಕಣಕ್ಕಿಳಿಸುವ ಕುರಿತು ಸಹ ಪ್ರಸ್ತಾಪವಾಯಿತು. ಆದರೆ ನಾಳೆ ಅನರ್ಹ ಶಾಸಕರು ಮೊದಲು ಬಿಜೆಪಿ ಸೇರಲಿ ನಂತರ ಕೋರ್ ಕಮಿಟಿ ಸಭೆ ಸೇರಿ ಅಭ್ಯರ್ಥಿ ಆಯ್ಕೆ ಮಾಡೋಣ ಎನ್ನುವ ನಿರ್ಧಾರಕ್ಕೆ ಬರಲಾಯಿತು ಎನ್ನಲಾಗಿದೆ.