ಬೆಂಗಳೂರು: ಬಿಜೆಪಿಯ ಭದ್ರಕೋಟೆಯಾಗಿರುವ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿಯೂ ಕೇಸರಿಪಡೆಯೇ ಗೆಲ್ಲುವ ಫೇವರಿಟ್. ಆದರೂ ಮೈತ್ರಿ ಅಭ್ಯರ್ಥಿ ಬಿ.ಕೆ. ಹರಿಪ್ರಸಾದ್ ತೀವ್ರ ಪೈಪೋಟಿ ಒಡ್ಡಿದ್ದಾರೆ. ಈ ಬಗ್ಗೆ ಕ್ಷೇತ್ರದ ಮತದಾರರು ಫಿಫ್ಟಿ ಫಿಫ್ಟಿ ಅಂತಿದಾರೆ.
1952 ರಿಂದ 2014ರವರೆಗೆ 16 ಚುನಾವಣೆಗಳು ನಡೆದಿದ್ದು, ಅದರಲ್ಲಿ ಮೊದಲ ಐದು ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದ್ದರೆ ನಂತರದ ಮೂರು ಚುನಾವಣೆಯಲ್ಲಿ ಜನತಾ ಪಕ್ಷದ ಅಭ್ಯರ್ಥಿ ಗೆಲುವಿನ ನಗೆ ಬೀರಿದ್ದರು. 1989ರಲ್ಲಿ ಆರ್.ಗುಂಡೂರಾವ್ ಮತ್ತೆ ಕಾಂಗ್ರೆಸ್ನಿಂದ ಗೆದ್ದಿದ್ದೇ ಈ ಕ್ಷೇತ್ರದಲ್ಲಿ. ಈವರೆಗೆ ಕಾಂಗ್ರೆಸ್ ಗೆದ್ದ ಕಡೆ ಚುನಾವಣೆಯಾಗಿದೆ. 1991 ರಿಂದ 2014 ವರೆಗೂ ನಡೆದ 7 ಚುನಾವಣೆಯಲ್ಲಿಯೂ ಬಿಜೆಪಿಯೇ ಗೆದ್ದಿದ್ದು ಕಳೆದ 6 ಚುನಾವಣೆಯಲ್ಲಿ ಅನಂತ್ ಕುಮಾರ್ ಈ ಕ್ಷೇತ್ರದ ಸಂಸದರಾಗಿದ್ದರು.
ಈ ಬಾರಿ ತೇಜಸ್ವಿ ಸೂರ್ಯ ಅದೃಷ್ಠ ಪರೀಕ್ಷೆ ಎದುರಿಸುತ್ತಿದ್ದು, ಕಾಂಗ್ರೆಸ್ನಿಂದ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಮೈತ್ರಿ ಅಭ್ಯರ್ಥಿಯಾಗಿ ಪೈಪೋಟಿ ಒಡ್ಡಿದ್ದಾರೆ. ಇನ್ನುಳಿದಂತೆ ಉತ್ತಮ ಪ್ರಜಾಕೀಯ ಸೇರಿ ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿದ್ದರೂ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಪೈಪೋಟಿ ಇದೆ.
ಕಳೆದ ಬಾರಿ 11,13,726 ಮತದಾರರು ಮತ ಚಲಾಯಿಸಿದ್ದು, ಶೇ. 55.72 ರಷ್ಟು ಮತದಾನವಾಗಿತ್ತು. ಈ ಬಾರಿ ಕ್ಷೇತ್ರದಲ್ಲಿ 11,53,622 ಪುರುಷ ಮತದಾರರು, 10,61,796 ಮಹಿಳಾ ಮತದಾರರು, 340 ತೃತೀಯ ಲಿಂಗಿಗಳು ಸೇರಿ ಒಟ್ಟು 22,15,758 ಮತದಾರರಿದ್ದರು. ಇದರಲ್ಲಿ 6,15,805 ಪುರುಷ ಮತದಾರರು, 5,68,907 ಮಹಿಳಾ ಮತದಾರರು, 33 ತೃತೀಯ ಲಿಂಗಿಗಳು ಸೇರಿ ಒಟ್ಟು 11,84,745 ಮತದಾರರು ಮತ ಚಲಾವಣೆ ಮಾಡಿದ್ದು, ಶೇ 53.47ರಷ್ಟು ಮತದಾನವಾಗಿದೆ. ಕಳೆದ ಬಾರಿಗೆ ಹೋಲಿಸಿದರೆ ಶೇ.2ರಷ್ಟು ಕಡಿಮೆ ಮತದಾನವಾಗಿದೆ.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳು ಬರಲಿವೆ. ಇದರಲ್ಲಿ ಐದು ಕ್ಷೇತ್ರ ಬಿಜೆಪಿ ತೆಕ್ಕೆಯಲ್ಲಿದ್ದರೆ ಉಳಿದ ಮೂರು ಕ್ಷೇತ್ರ ಕಾಂಗ್ರೆಸ್ ತೆಕ್ಕೆಯಲ್ಲಿವೆ. ಗೋವಿಂದರಾಜನಗರದಲ್ಲಿ ಮಾಜಿ ಸಚಿವ ವಿ.ಸೋಮಣ್ಣ, ಚಿಕ್ಕಪೇಟೆಯಲ್ಲಿ ಉದಯ್ ಗರುಡಾಚಾರ್, ಬಸವನಗುಡಿಯಲ್ಲಿ ರವಿ ಸುಬ್ರಮಣ್ಯ, ಪದ್ಮನಾಭನಗರದಲ್ಲಿ ಮಾಜಿ ಡಿಸಿಎಂ ಆರ್.ಅಶೋಕ್, ಬೊಮ್ಮನಹಳ್ಳಿಯಲ್ಲಿ ಸತೀಶ್ ರೆಡ್ಡಿ ಬಿಜೆಪಿ ಶಾಸಕರಾಗಿದ್ದು ಪಕ್ಷದ ಪರ ಹೆಚ್ಚಿನ ಮತಗಳಿಸಿಕೊಡುವಲ್ಲಿ ಬಹುತೇಕ ಯಶಸ್ವಿಯಾಗುವ ವಿಶ್ವಾಸದಲ್ಲಿದ್ದಾರೆ. ಅದೇ ರೀತಿ ವಿಜಯನಗರದಲ್ಲಿ ಎಂ.ಕೃಷ್ಣಪ್ಪ, ಬಿಟಿಎಂ ಲೇಔಟ್ನಲ್ಲಿ ಮಾಜಿ ಗೃಹ ಸಚಿವ ರಾಮಲಿಂಗಾರೆಡ್ಡಿ ಮತ್ತು ಜಯನಗರದಲ್ಲಿ ಸೌಮ್ಯ ರೆಡ್ಡಿ ಕಾಂಗ್ರೆಸ್ ಶಾಸಕರಾಗಿದ್ದು, ಕಾಂಗ್ರೆಸ್ ಅಭ್ಯರ್ಥಿಗೆ ಹೆಚ್ಚಿನ ಮತಗಳನ್ನು ಕೊಡಿಸುವಲ್ಲಿ ಯಶಸ್ವಿಯಾಗಿರುವ ವಿಶ್ವಾಸದಲ್ಲಿದ್ದಾರೆ.
ಬಿಜೆಪಿ ಕಾಂಗ್ರೆಸ್ ನಡುವೆ ನೇರ ಪೈಪೋಟಿ ಇದ್ದರೂ ಬಿಜೆಪಿ ಪರ ಒಲವು ಸ್ವಲ್ಪ ಜಾಸ್ತಿ ಇದೆ. ಟ್ರೆಂಡ್ ಬಿಜೆಪಿ ಪರ ಇದೆ ಹಾಗಾಗಿ ಬಿಜೆಪಿ ಅಭ್ಯರ್ಥಿ ಗೆಲುವು ಖಚಿತ ಎನ್ನುವ ವಿಶ್ವಾಸವನ್ನು ಸ್ಥಳೀಯರ ವ್ಯಕ್ತಪಡಿಸಿದ್ದಾರೆ.
ಇನ್ನು ಮೈತ್ರಿ ಅಭ್ಯರ್ಥಿ ಬಿ.ಕೆ.ಹರಿಪ್ರಸಾದ್ ಈ ಬಾರಿ ತೀವ್ರ ಪೈಪೋಟಿ ಒಡ್ಡಿದ್ದಾರೆ. ಕಾಂಗ್ರೆಸ್ ಹಾಗು ಜೆಡಿಎಸ್ ಮತಗಳನ್ನು ಕ್ರೂಢೀಕರಿಸಿ ಗೆಲ್ಲುವ ಲೆಕ್ಕಾಚಾರ ಹಾಕಲಾಗಿದೆ. ಜೊತೆಗೆ ಅನಂತ್ ಕುಮಾರ್ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಮುನಿಸಿಕೊಂಡಿದ್ದು ಕೂಡ ಮೈತ್ರಿ ಅಭ್ಯರ್ಥಿಗೆ ಪ್ಲಸ್ ಆಗಲಿದೆ ಎನ್ನುವ ಲೆಕ್ಕಾಚಾರದಲ್ಲಿ ಕೈ ನಾಯಕರಿದ್ದಾರೆ. ಬಿ.ಕೆ. ಹರಿಪ್ರಸಾದ್ ಹಿರಿಯ ನಾಯಕ ಅವರು ಗೆದ್ದರೆ ಕೈಗೆ ಸಿಗಲಿದ್ದಾರೆ, ಹಿಡಿದು ಕೆಲಸ ಮಾಡಿಸಿಕೊಳ್ಳಬಹುದು ಎನ್ನುವ ಕಾರಣಕ್ಕೆ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಬೇಕು ಎಂದು ಸ್ಥಳೀಯ ನಿವಾಸಿಗಳು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ತೇಜಸ್ವಿನಿ ಅನಂತ್ ಕುಮಾರ್ ಎಂದೇ ಪ್ರಚಾರ ಆರಂಭಿಸಿದ್ದರೂ ಕಡೇ ಕ್ಷಣದಲ್ಲಿ ತೇಜಸ್ವಿ ಸೂರ್ಯಗೆ ಟಿಕೆಟ್ ನೀಡಿದ್ದು ಆರಂಭದಲ್ಲಿ ಗೊಂದಲ ಸೃಷ್ಠಿಸಿತ್ತು. ಆದರೂ ನಂತರ ತೇಜಸ್ವಿ ಸೂರ್ಯ ಯುವ ರಾಜಕೀಯ ಕಾರ್ಯಕರ್ತ ಹೇಗಿರಬೇಕೋ ಆ ರೀತಿ ತಯಾರಾದರು. ತಮ್ಮ ವಾಕ್ಚಾತುರ್ಯದಿಂದ ಮೋದಿ ಕಾರ್ಯಕ್ರಮದಲ್ಲಿಯೂ ಚಪ್ಪಾಳೆ ಗಿಟ್ಟಿಸಿದ್ದರು. ಆದರೆ ಪ್ರತಿ ಸ್ಪರ್ಧಿ ಬಿ.ಕೆ.ಹರಿಪ್ರಸಾದ್ಗೆ ಕ್ಷೇತ್ರದಲ್ಲಿ ಬೇರು ಮಟ್ಟದ ಸಂಪರ್ಕ ಇಲ್ಲ, 40 ವರ್ಷದಿಂದ ರಾಜಕೀಯದಲ್ಲಿದ್ದರೂ ಈಗ ಅವರು ತಮ್ಮ ಸ್ಥಳೀಯ ವಾರ್ಡ್ ಕೂಡ ಗೆಲ್ಲಿಸಿ ಕೊಳ್ಳಲಾಗದವರಾಗಿದ್ದಾರೆ. ಚುನಾವಣೆಯ ಆರಂಭದಲ್ಲಿ ಜೋಷ್ ಇತ್ತಾದರೂ ಕ್ರಮೇಣ ಕಡಿಮೆಯಾಯಿತು. ಹಾಗಾಗಿ ತೇಜಸ್ವಿ ಸೂರ್ಯ ಗೆಲುವಿನ ಸಾಧ್ಯತೆಯೇ ಹೆಚ್ಚು ಎಂದು ಹಿರಿಯ ಪತ್ರಕರ್ತ ರವೀಂದ್ರ ರೇಶ್ಮೆ ವಿಶ್ಲೇಷಣೆ ಮಾಡಿದ್ದಾರೆ.
ಒಟ್ಟಿನಲ್ಲಿ ಬಿಜೆಪಿ ಭದ್ರಕೋಟೆಯನ್ನು ಈ ಬಾರಿಯೂ ಕಮಲ ಉಳಿಸಿಕೊಳ್ಳಲಿದೆ. ಅನಂತ್ ಕುಮಾರ್ ನಿಧನದ ಅನುಕಂಪ, ಪ್ರಧಾನಿ ನರೇಂದ್ರ ಮೋದಿ ಅಲೆಯಲ್ಲಿ ತೇಜಸ್ವಿ ಸೂರ್ಯ ತೇಲಲಿದ್ದಾರೆ ಎಂದು ಕೆಲ ಮತದಾರರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲ ಮತದಾರರು ಕಾಂಗ್ರೆಸ್ ಅಭ್ಯರ್ಥಿ ಪರವೂ ಒಲವು ವ್ಯಕ್ತಪಡಿಸಿದ್ದಾರೆ. ಆದರೆ ಅಂತಿಮವಾಗಿ ಯಾರಿಗೆ ವಿಜಯಲಕ್ಷ್ಮಿ ಒಲಿಯಲಿದ್ದಾಳೆ ಎನ್ನುವುದಕ್ಕೆ ಮೇ.23 ರವರೆಗೆ ಕಾಯಬೇಕಿದೆ.