ಬೆಂಗಳೂರು : ಪುಲಕೇಶಿನಗರ ಶಾಸಕ ಅಖಂಡ ಶ್ರೀನಿವಾಸಮೂರ್ತಿ ನಿವಾಸದ ಮೇಲಿನ ದಾಳಿಯ ಕೂಲಂಕಶ ತನಿಖೆ ನಡೆಯದಿದ್ದರೆ ರಾಜ್ಯಾದ್ಯಂತ ಸರ್ಕಾರದ ವಿರುದ್ಧ ಉಗ್ರ ಹೋರಾಟ ಮಾಡುತ್ತೇವೆ ಎಂದು ಭೋವಿ ಜನಾಂಗ ಪರಿಷತ್ತಿನ ರಾಷ್ಟ್ರೀಯ ಕಾರ್ಯಾಧ್ಯಕ್ಷ ಡಾ. ಎಚ್. ರವಿ ಮಾಕಳಿ ಹೇಳಿದರು.
ಬೆಂಗಳೂರಿನ ಜಸ್ಮಾದೇವಿ ಭವನದಲ್ಲಿ ಮಾತನಾಡಿ, ಇಡೀ ಭೋವಿ ಸಮಾಜ ಅವರ ಬೆನ್ನಿಗಿದೆ, ರಾಜಕೀಯ ಕ್ಷೇತ್ರದಲ್ಲಿ ಉತ್ತಮ ಭವಿಷ್ಯ ಕಂಡುಕೊಳ್ಳುತ್ತಿರುವ ಯುವ ರಾಜಕಾರಣಿಯ ನಿವಾಸದ ಮೇಲೆ ಉದ್ದೇಶಪೂರ್ವಕವಾಗಿ ದಾಳಿ ಮಾಡಲಾಗಿದೆ. ಅತ್ಯಂತ ಹಿಂದುಳಿದ ಸಮಾಜದ ನಾವು ಶ್ರಮಜೀವಿಗಳಾಗಿದ್ದು, ನಮ್ಮ ಸಮುದಾಯದ ನಾಯಕನ ಮನೆ ಮೇಲೆ ನಡೆದಿರುವ ದಾಳಿ ಆಘಾತ ತಂದಿದೆ. ಸರ್ಕಾರ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂಬ ವಿಶ್ವಾಸ ನಮಗಿದೆ. ಸ್ವಲ್ಪ ದಿನ ಕಾದು ನೋಡುತ್ತೇವೆ, ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ದೊಡ್ಡಮಟ್ಟದ ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಎಚ್ಚರಿಸಿದರು.
ಸರ್ಕಾರ ಯಾವ ಕ್ರಮ ಕೈಗೊಳ್ಳುತ್ತದೆ ಎಂದು 15 ದಿನ ಕಾದು ನೋಡುತ್ತೇವೆ. ಸರಿಯಾದ ತನಿಖೆ ನಡೆಸಿ ಯಾರು ನಿಜವಾದ ಅಪರಾಧಿಗಳು ಎಂಬುವುದನ್ನು ಸರ್ಕಾರ ಪತ್ತೆ ಮಾಡಬೇಕು. ಅಖಂಡ ಶ್ರೀನಿವಾಸಮೂರ್ತಿಯವರ ತಾತನ ಕಾಲದಿಂದ ಮಾಡಿಟ್ಟಿದ್ದ ಸುಮಾರು 4-5 ಕೋಟಿಯಷ್ಟು ಮೌಲ್ಯದ ಆಸ್ತಿ ದೋಚಲಾಗಿದೆ. ನಗರದ ಜನನಿಬಿಡ ಪ್ರದೇಶದಲ್ಲೇ ಈ ರೀತಿಯ ಪರಿಸ್ಥಿತಿಯಿದ್ದರೆ, ಎಲ್ಲೋ ದೂರದಲ್ಲಿರುವ ಸಮುದಾಯದ ಉಳಿದ ನಾಗರಿಕರ ಸ್ಥಿತಿ ಏನು ಎಂಬ ಆತಂಕ ಮೂಡುತ್ತಿದೆ ಎಂದರು.
ರಾಜಕೀಯವಾಗಿ ಬೆಳೆಯುತ್ತಿರುವ ಅಖಂಡ ಶ್ರೀನಿವಾಸಮೂರ್ತಿ ಜನಪ್ರಿಯತೆಯನ್ನು ಮೊಟಕುಗೊಳಿಸುವ ಉದ್ದೇಶದಿಂದಲೇ ಈ ದಾಳಿ ನಡೆಸಲಾಗಿದೆ. ಇದು ಉದ್ದೇಶಪೂರ್ವಕ ದಾಳಿಯಾಗಿದ್ದು, ಬೆಳೆಯುತ್ತಿರುವ ನಾಯಕನನ್ನ ಹತ್ತಿಕ್ಕುವ ರಾಜಕೀಯ ದುರುದ್ದೇಶ ಇದರ ಹಿಂದಿದೆ ಎಂದು ಆರೋಪಿಸಿದರು.