ಬೆಂಗಳೂರು: ನಗರದಲ್ಲಿ ಮಳೆ ಅನಾಹುತ ತಡೆಯುವ ಹಿನ್ನೆಲೆಯಲ್ಲಿ ಸಕ್ರಿಯರಾಗಿರುವ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, ಮಳೆ ನಡುವೆಯೇ ನಗರದಲ್ಲಿ ಸುತ್ತಾಡಿ ಪರಿಶೀಲನೆ ನಡೆಸಿದರು.
ಮಳೆಯಿಂದ ತೊಂದರೆಗೊಳಗಾದ ಪ್ರದೇಶಗಳಿಗೆ ಖುದ್ದು ಭೇಟಿ ನೀಡಿರುವ ಅವರು, ಮಳೆನೀರು ಸರಾಗವಾಗಿ ಹರಿಯುವಂತೆ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳಿಗೆ ತಿಳಿಸಿದರು.

ದೊಮ್ಮಲೂರು ಮೇಲುಸೇತುವೆ, ಈಜೀಪುರದ ಕಡೆ ಹೋಗುವ ರಸ್ತೆಗೆ ಭೇಟಿ ನೀಡಿ 3 ಕ್ರಾಸ್ ಕಲ್ವರ್ಟ್ಗಳಲ್ಲಿ ತುಂಬಿರುವ ಹೂಳು ತೆರವುಗೊಳಿಸಿ ಎಂದು ಇದೇ ವೇಳೆ ಖಡಕ್ ಸಂದೇಶ ರವಾನಿಸಿದರು. ರೀಮಾಡೆಲಿಂಗ್ ಮಾಡಿ ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಲು ಅಧಿಕಾರಿಗಳಿಗೆ ಆದೇಶಿಸಿದರು.

ಪರಿಶೀಲನೆ ವೇಳೆಯಲ್ಲಿ ಬೃಹತ್ ನೀರುಗಾಲುವೆ ವಿಭಾಗದ ಮುಖ್ಯ ಅಭಿಯಂತರ ಸುಗುಣ, ಯೋಜನಾ ವಿಭಾಗದ ಚೀಫ್ ಇಂಜಿನಿಯರ್ ಎಂ.ಲೋಕೇಶ್ ಅವರಿಗೆ ಮಳೆ ಸಂಬಂಧಿತ ದೂರುಗಳ ಸಂಬಂಧ ಅಲರ್ಟ್ ಆಗಿರುವಂತೆ ಗೌರವ್ ಗುಪ್ತಾ ತಾಕೀತು ಮಾಡಿದರು.