ಬೆಂಗಳೂರು: ನಾನು 2016ರಲ್ಲಿ ಬಿಡಿಎ ಅವರಿಗೆ ಬದಲಿ ನಿವೇಶನ ಕೇಳಿದ್ದೆ. ನನಗೆ ಇದ್ದ ನಿವೇಶನವನ್ನು ಬೇರೊಬ್ಬ ವ್ಯಕ್ತಿಗೆ ನೀಡಿದ್ದು, ಅದನ್ನು ಅವರು ಮತ್ತೊಬ್ಬರಿಗೆ ಮಾರಾಟ ಮಾಡಿದ್ದಾರೆ ಎಂದು ಬಿಡಿಎ ಅಕ್ರಮದ ಬಗ್ಗೆ ಬಿಜೆಪಿ ಶಾಸಕ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 2006ರಲ್ಲಿ ಸಿ.ಟಿ.ರವಿಗೆ ಬಿಡಿಎ ನಗರದ ಎಚ್ಬಿಆರ್ ಬಡಾವಣೆಯಲ್ಲಿ 4000 ಚ.ಅಡಿ ವಿಸ್ತೀರ್ಣದ ನಿವೇಶನವನ್ನು ಹಂಚಿಕೆ ಮಾಡಿತ್ತು. ಅಕ್ಕಪಕ್ಕ ಕಾಡು ಪ್ರದೇಶವಿದ್ದರಿಂದ ನಾನು 2016ರಲ್ಲಿ ಬಿಡಿಎ ಬಳಿ ಬದಲಿ ನಿವೇಶನ ಕೇಳಿದ್ದೆ. ನನಗೆ ಬದಲಿ ನಿವೇಶನ ನೀಡುವ ಮೊದಲೇ ನನ್ನ ಖಾತೆಯಲ್ಲಿದ್ದ ನಿವೇಶನವನ್ನು 2018, ಏಪ್ರಿಲ್ನಲ್ಲಿ ಶಾಕುಂತಲಾದೇವಿ ಎಂಬುವವರಿಗೆ ಬಿಡಿಎ ನೋಂದಣಿ ಮಾಡಿಕೊಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಕುಂತಲಾ ದೇವಿಯವರು 45 ದಿನಗಳಲ್ಲಿ ಅದೇ ನಿವೇಶನವನ್ನು ಇನ್ನೊಬ್ಬ ವ್ಯಕ್ತಿಗೆ ಮಾರಾಟ ಮಾಡಿದ್ದು, ಆ ವ್ಯಕ್ತಿ ನಿವೇಶನದಲ್ಲಿ ಕೊಳವೆ ಬಾವಿ ತೋಡುತ್ತಿದ್ದಾರೆ. ಈ ಬಗ್ಗೆ ಪಕ್ಕದ ನಿವೇಶನದ ಮಾಲೀಕರು ನನಗೆ ಮಾಹಿತಿ ನೀಡಿ, ಪರಿಶೀಲಿಸಿದಾಗ ಬಿಡಿಎಯ ಕರ್ಮಕಾಂಡ ಬಯಲಾಗಿದೆ. ಈ ಸಂಬಂಧ ಬಿಡಿಎ ಕಚೇರಿಗೆ ತೆರಳಿ ಅಧಿಕಾರಿಗಳಲ್ಲಿ ಪರಿಶೀಲನೆ ನಡೆಸಿದ್ದೇನೆ. ನನಗೆ ಬದಲಿ ನಿವೇಶನ ಕೊಡುವ ಮೊದಲೇ ನನ್ನ ಹೆಸರಲ್ಲಿರುವ ನಿವೇಶನವನ್ನು ಇನ್ನೊಬ್ಬರಿಗೆ ಮಾರಾಟ ಮಾಡಿರುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಒಂದು ವಾರದಲ್ಲಿ ಆಗಿರುವ ಯಡವಟ್ಟು ಸರಿಪಡಿಸದಿದ್ದರೆ ಬಿಡಿಎ ಕಚೇರಿ ಮುಂದೆ ಪ್ರತಿಭಟನೆ ನಡೆಸಲಿದ್ದೇನೆ ಎಂದು ಶಾಸಕರು ಎಚ್ಚರಿಕೆ ನೀಡಿದರು.