ಬೆಂಗಳೂರು: ನಗರದಲ್ಲಿ ಕಳೆದ 29ನೇ ತಾರೀಖಿನಂದು ಮಳೆಯಿಂದಾದ ಅನಾಹುತದ ಸಂದರ್ಭದಲ್ಲಿ ಸಾರ್ವಜನಿಕರಿಂದ ದೂರು ಬಂದರೂ, ಸಮಸ್ಯೆಗೆ ಸ್ಪಂದಿಸದ ಪಾಲಿಕೆಯ ಅಧಿಕಾರಿಗಳನ್ನ ಅಮಾನತು ಮಾಡಲಾಗಿದೆ.


ಅಸಮರ್ಪಕ ಕಾರ್ಯ ನಿರ್ವಹಣೆ ಮಾಡಿದ ಪಾಲಿಕೆಯ ಇಬ್ಬರು ಅಧಿಕಾರಿಗಳಾದ ಶಿವಾಜಿನಗರ ಇಇ ವಾಸು.ಕೆ.ಎಂ ಮತ್ತು ವಸಂತನಗರ ವಿಭಾಗದ ಎಇಇ ಕೆ.ಬಿ.ತಾರಾನಾಥ್ ಇವರನ್ನು ಅಮಾನತು ಮಾಡಲಾಗಿದೆ. ಲೀ ಮೇರಿಡಿಯನ್ ಸೇತುವೆ ಮತ್ತು ವಿಂಡರ್ಸ್ ಮ್ಯಾನರ್ ಸೇತುವೆ ಬಳಿ ನೀರು ಸಂಗ್ರಹವಾಗಿ ಸಾರ್ವಜನಿಕರ ಓಡಾಟಕ್ಕೆ ಅಡಚಣೆ ಉಂಟಾಗಿತ್ತು. ಸದ್ಯ ಕಾರ್ಯವ್ಯಾಪ್ತಿ ಪ್ರದೇಶದಲ್ಲಿ ಸುರಿದ ಮಳೆಯಿಂದಾಗಿ ಸಾರ್ವಜನಿಕರಿಗೆ ತೊಂದರೆ ಉಂಟಾಗಿತ್ತು.
ತುರ್ತು ಸಂದರ್ಭದಲ್ಲಿ ಕರ್ತವ್ಯಕ್ಕೆ ಹಾಜರಾಗಿ ಸಾರ್ವಜನಿಕರಿಗೆ ಮಳೆಯಿಂದ ಯಾವುದೇ ರೀತಿಯ ತೊಂದರೆಯಾಗದಂತೆ ಕಾರ್ಯನಿರ್ವಹಿಸಬೇಕಾಗಿದ್ದರೂ ಸಹ ಅವರು ಹಾನಿಯಾದ ಪ್ರದೇಶಕ್ಕೆ ಭೇಟಿ ನೀಡಿಲ್ಲ ಎಂದು ಆರೋಪಿಸಲಾಗಿದೆ. ಹೀಗಾಗಿ ಪಾಲಿಕೆಯ ಆಯುಕ್ತರು ಅಮಾನತು ಮಾಡಿ ಆದೇಶಿಸಿದ್ದಾರೆ.