ಬೆಂಗಳೂರು: ಕೋವಿಡ್-19 ಭೀತಿ ಹೆಚ್ಚಾದ ಹಿನ್ನೆಲೆ ವೈರಸ್ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಬಿಬಿಎಂಪಿ ಕೇಂದ್ರ ಕಚೇರಿ ಆವರಣ ಹಾಗೂ ನಗರದ ಕೆ.ಆರ್. ಮಾರುಕಟ್ಟೆಯಲ್ಲಿ ಜೆಟ್ಟಿಂಗ್ ಯಂತ್ರದ ಮೂಲಕ ಔಷಧ ಸಿಂಪಡಣೆ ಮಾಡಲಾಯಿತು. ಜೊತೆಗೆ ಡ್ರೋನ್ ಯಂತ್ರಗಳ ಮೂಲಕ ಸಹ ಔಷಧ ಸಿಂಪಡಿಸಲಾಯಿತು.
ಔಷಧ ಸಿಂಪಡಣೆ ಕಾರ್ಯಕ್ಕೆ ಚಾಲನೆ ನೀಡಿ ಈ ಕುರಿತು ವಿವರಣೆ ನೀಡಿದ ಮೇಯರ್ ಗೌತಮ್ ಕುಮಾರ್, ಬಿಬಿಎಂಪಿ ವ್ಯಾಪ್ತಿಯಲ್ಲಿ ಕೊರೊನಾ ವೈರೆಸ್ ಸೋಂಕು ಹಾಗೂ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ನಗರಾದ್ಯಂತ ಸೋಂಕು ನಿವಾರಕ ದ್ರಾವಣ (ಸೋಡಿಯಂ ಹೈಪೋಕ್ಲೋರೈಡ್) ಸಿಂಪಡಿಸಲು ಕ್ರಮ ವಹಿಸಲಾಗಿದೆ ಎಂದರು.
ಸ್ಥಳೀಯರ ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ ಪಾಲಿಕೆಯು ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಈಗಾಗಲೇ ವಾರ್ಡ್ಗಳಲ್ಲಿ ಸಿಬ್ಬಂದಿ ಹಾಗೂ ಟ್ಯಾಂಕರ್ಗಳಲ್ಲಿ ಡ್ರಮ್ಗಳನ್ನಿಟ್ಟು ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಗುತ್ತಿದೆ. ಅದರ ಜೊತೆಗೆ ಇಂದಿನಿಂದ ಜಲಮಂಡಳಿಯಿಂದ 7 ಸಾವಿರ ಲೀಟರ್ ಸಾಮರ್ಥ್ಯದ 10 ಜೆಟ್ಟಿಂಗ್ ಯಂತ್ರಗಳನ್ನು ಪಾಲಿಕೆಗೆ ತಾತ್ಕಾಲಿಕವಾಗಿ ಹಸ್ತಾಂತರಿಸಿಕೊಳ್ಳಲಾಗಿದ್ದು, ನಗರಾದ್ಯಂತ ಸಿಂಪಡಿಸಲು ಕ್ರಮ ವಹಿಸಲಾಗುತ್ತಿದೆ ಎಂದು ತಿಳಿಸಿದರು.
ಜೆಟ್ಟಿಂಗ್ ಯಂತ್ರಗಳ ಮೂಲಕ ಇಂದು ಹಡ್ಸನ್ ವೃತ್ತ, ಟೌನ್ ಹಾಲ್, ಕೆ.ಆರ್.ಮಾರುಕಟ್ಟೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೋಂಕು ನಿವಾರಕ ಸಿಂಪಡಿಸಲಾಗುತ್ತದೆ. ಇದಲ್ಲೆದೇ ಡ್ರೋನ್ ಮೂಲಕ ಸೋಂಕು ನಿವಾರಕ ಸಿಂಪಡಿಸಲು ಕ್ರಮವಹಿಸಲಾಗುತ್ತಿದೆ. ಅಗ್ನಿಶಾಮಕ ವಾಹನಗಳನ್ನೂ ಸೋಂಕು ನಿವಾರಕ ಸಿಂಪಡಿಸಲು ನಿಯೋಜಿಸಿಕೊಳ್ಳಲಾಗುತ್ತಿದೆ. ನಾಳೆಯಿಂದ ಎಲ್ಲ ಕಡೆ ಸೋಂಕು ನಿವಾರಕ ಸಿಂಪಡಿಸಲಾಗುವುದು ಎಂದರು.
ಆಯುಕ್ತರಾದ ಅನಿಲ್ ಕುಮಾರ್, ಹಿರಿಯ ಅಧಿಕಾರಿಗಳಾದ ರಂದೀಪ್, ಸರ್ಫರಾಜ್ ಖಾನ್ ಸೇರಿದಂತೆ ಇತರ ಅಧಿಕಾರಿಗಳು ಈ ವೇಳೆ ಹಾಜರಿದ್ದರು.