ಬೆಂಗಳೂರು : ಸರ್ಕಾರದ ಜಾಗ ಒತ್ತುವರಿ ಕಾರ್ಯಾಚರಣೆ ಮುಂದುವರಿಸಿರುವ ಬಿಬಿಎಂಪಿ ಹಾಗೂ ಬೆಂಗಳೂರು ಜಿಲ್ಲಾಧಿಕಾರಿ ಜೆ. ಮಂಜುನಾಥ್ ನೇತೃತ್ವದ ತಂಡ 60 ಕೋಟಿ ರೂ. ಮೌಲ್ಯದ 27 ಎಕರೆಯನ್ನು ತೆರವುಗೊಳಿಸಿ ವಶಪಡಿಸಿಕೊಂಡಿದೆ.
ಬೆಂಗಳೂರು ನಗರ ಜಿಲ್ಲೆಯ ಐದು ತಾಲೂಕಿನಲ್ಲಿ ಅಕ್ರಮವಾಗಿ ಒತ್ತುವರಿಯಾಗಿದ್ದ 60.71 ಕೋಟಿ ರೂ. ಮೌಲ್ಯದ 27 ಎಕರೆ ಪ್ರದೇಶವನ್ನು ತೆರವುಗೊಳಿಸಲಾಗಿದೆ. ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ಕೆರೆ, ಕುಂಟೆ, ಗೋಮಾಳ, ಸ್ಮಶಾನ, ರಾಜಕಾಲುವೆಗಳನ್ನು ತೆರವು ಮಾಡಲಾಗಿದೆ ಎಂದು ಬೆಂಗಳೂರು ನಗರದ ಜಿಲ್ಲಾಧಿಕಾರಿ ಜೆ. ಮಂಜುನಾಥ್ ಮಾಹಿತಿ ನೀಡಿದ್ದಾರೆ.

ಯಲಹಂಕ ತಾಲೂಕಿನ ಜಾಲ ಹೋಬಳಿಯ ಬಾಗಲೂರು, ಅಮೃತಹಳ್ಳಿ, ಜಾಲ ಹೋಬಳಿಯ ಬಿ ಕೆ ಪಾಳ್ಯ ಗ್ರಾಮದದಲ್ಲಿ ಸರ್ಕಾರಿ ಗೋಮಾಳದ ಜಮೀನು ಸೇರಿದಂತೆ 35.28 ಕೋಟಿ ರೂ. ಮೌಲ್ಯದ ಒಟ್ಟು 6 ಎಕರೆ ಪ್ರದೇಶ ವಶಪಡಿಸಿಕೊಳ್ಳಲಾಗಿದೆ. ಆನೇಕಲ್ ತಾಲೂಕಿನ ಕಸಬಾ ಹೋಬಳಿಯ ಹೊನ್ನಕಳಸಾಪುರ, ರಾಚಮಾನಹಳ್ಳಿ, ಅತ್ತಿಬೆಲೆ ಹೋಬಳಿಯ ಗಿಡ್ಡೇನಹಳ್ಳಿ, ಜಿಗಣಿ ಹೋಬಳಿಯ ಹುಲ್ಲಹಳ್ಳಿ ಮತ್ತು ಹುಲಿಮಂಗಲ ಗ್ರಾಮದಲ್ಲಿ 2.17 ಎಕರೆ ಗೋಮಾಳ ಜಮೀನು ತೆರವುಗೊಳಿಸಲಾಗಿದೆ.

ಸರ್ಜಾಪುರ ಹೋಬಳಿಯ ದೊಡ್ಡ ತಿಮ್ಮಸಂದ್ರ, ಕೊಮ್ಮಸಂದ್ರ, ಚೊಕ್ಕಸಂದ್ರ ಹಾಗೂ ಅತ್ತಿಬೆಲೆ ಹೋಬಳಿಯ ಚಿಕ್ಕನಹಳ್ಳಿ ಗ್ರಾಮದಲ್ಲಿಮದಲ್ಲಿ 25 ರಾಜಕಾಲುವೆ ಸೇರಿದಂತೆ 19.61 ಕೋಟಿ ರೂ. ಮೌಲ್ಯದ ಒಟ್ಟು 17.12 ಎಕರೆ ಜಮೀನು ವಶಪಡಿಸಿಕೊಳ್ಳಲಾಗಿದೆ.
ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಹೋಬಳಿಯ ಗೋಪಾಲಪುರ, ಬೆಂಗಳೂರು ದಕ್ಷಿಣ ತಾಲೂಕಿನ ಉತ್ತರಹಳ್ಳಿ ಹೋಬಳಿಯ ತಟ್ಟಗುಪ್ಪೆ, ಮೈಲಸಂದ್ರ, ತಾವರೆಕೆರೆ ಸೇರಿದಂತೆ 5.77 ಕೋಟಿ ರೂ. ಮೌಲ್ಯದ ಒಟ್ಟು 4.10 ಎಕರೆ ಸರ್ಕಾರಿ ಪ್ರದೇಶದ ಒತ್ತುವರಿ ತೆರವುಗೊಳಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಜಿಲ್ಲಾಡಳಿತದ ಒತ್ತುವರಿ ತೆರವು ವಿವರ :
ವಿಭಾಗಗಳ ವಿಸ್ತೀರ್ಣ(ಎಕರೆ)
13 ಕೆರೆಗಳು 18.38
ಸರ್ಕಾರಿ ಖರಾಬು 1.20
ಸರ್ಕಾರಿ ಗೋಮಾಳ 7.07
ಹೈಕೋರ್ಟ್ ಆದೇಶದಂತೆ ಪಾಲಿಕೆಯಿಂದ ತೆರವು ಕಾರ್ಯ : ಯಲಹಂಕ ವಲಯದ ದೊಡ್ಡ ಬೊಮ್ಮಸಂದ್ರ ಕೆರೆ ಒಟ್ಟು 124 ಎಕರೆ 19 ಗುಂಟೆ ವಿಸ್ತೀರ್ಣದಲ್ಲಿದೆ. ಕೆರೆ ಅಂಗಳದ ಕೋಡಿಯ ಮುಂಭಾಗ ಒತ್ತುವರಿಗೆ ಯತ್ನಿಸಿದ್ದ 12 ಗುಂಟೆ ಜಮೀನು ವಶಪಡಿಸಿಕೊಂಡಿರುವ ಬಿಬಿಎಂಪಿ ಅಧಿಕಾರಿಗಳು, ತಂತಿ ಬೇಲಿ ಅಳವಡಿಸಿದ್ದಾರೆ.
ಹೈಕೋರ್ಟ್ ಆದೇಶ ಹಾಗೂ ನಗರಾಭಿವೃದ್ಧಿ ಇಲಾಖೆ ಸೂಚನೆಯಂತೆ ಖಾಸಗಿಯವರು ಒತ್ತುವರಿ ಮಾಡಿಕೊಂಡಿದ್ದ ಸರ್ಕಾರಿ ಜಮೀನನ್ನು ತೆರವುಗೊಳಿಸಲಾಗಿದೆ. ಅಲ್ಲದೆ ಕರ್ನಾಟಕ ಭೂ ಕಂದಾಯ ಅಧಿನಿಯಮ 1964ರ ಕಲಂ 94 ಮತ್ತು 104ರಡಿ ಪಾಲಿಕೆ, ಸರ್ಕಾರಿ ಜಮೀನು ಒತ್ತುವರಿ ಮಾಡಿದವವರಿಗೆ ನೋಟಿಸ್ ನೀಡಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
