ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರ ಗಮನಕ್ಕೆ ಬಾರದಂತೆ ಯುವ ಕಾಂಗ್ರೆಸ್ ಪದಾಧಿಕಾರಿಗಳ ನೇಮಕ ಮಾಡಿರುವ ಹಿನ್ನೆಲೆ ಇಂದು ಡಿ.ಕೆ.ಶಿವಕುಮಾರ್ ಭೇಟಿ ಮಾಡಿದ ಬಸನಗೌಡ ಬಾದರ್ಲಿ, ವಿಷಯದ ಕುರಿತು ಸ್ಪಷ್ಟೀಕರಣ ನೀಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ತಮ್ಮ ಗಮನಕ್ಕೆ ಬಾರದ ರೀತಿ ಯುವ ಕಾಂಗ್ರೆಸ್ಗೆ ಪದಾಧಿಕಾರಿಗಳ ನೇಮಕ ಆಗಿದ್ದಕ್ಕೆ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಬಸನಗೌಡ ಬಾದರ್ಲಿ ವಿರುದ್ಧ ಬೇಸರಗೊಂಡಿದ್ದರು. ಇಂದು ಇದೇ ವಿಚಾರವಾಗಿ ಡಿಕೆಶಿ ಭೇಟಿ ಮಾಡಿದ ಬಾದರ್ಲಿ, ವಿಷಯ ಕುರಿತು ಚರ್ಚಿಸಿ ಸ್ಪಷ್ಟೀಕರಣ ನೀಡಿದ್ದಾರೆ.
ಡಿಕೆಶಿ ಭೇಟಿ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಬಸನಗೌಡ ಬಾದರ್ಲಿ, ಕೆಪಿಸಿಸಿ ಅಧ್ಯಕ್ಷರೇ ನಮಗೆ ವೇದವಾಕ್ಯ. ನಾವು ಏಕಾಏಕಿ ಪದಾಧಿಕಾರಿಗಳನ್ನು ನೇಮಕ ಮಾಡಿಲ್ಲ. ಈಗ ನಾನೇ ಅಧ್ಯಕ್ಷರ ಜೊತೆ ಮಾತನಾಡಿದ್ದೇನೆ. ನಮ್ಮಲ್ಲಿ ಯಾವುದೇ ರೀತಿಯ ಗೊಂದಲವಿಲ್ಲ. ರಾಷ್ಟ್ರೀಯ ನಾಯಕರು ಮಾಹಿತಿ ಕೇಳಿದ್ದಾರೆ. ನಮ್ಮ ಅಧ್ಯಕ್ಷರನ್ನು ಕೇಳಿಯೇ ಅವರಿಗೆ ಮಾಹಿತಿ ನೀಡುತ್ತೇನೆ ಎಂದರು.
ಪದಾಧಿಕಾರಿಗಳ ನೇಮಕ ಏಕಾಏಕಿ ಮಾಡೋಕೆ ಬರುವುದಿಲ್ಲ. ಎಲ್ಲವೂ ಸರಿ ಇದೆ, ಯಾವುದೇ ಗೊಂದಲಗಳಿಲ್ಲ. ಸಮಸ್ಯೆಯೂ ಇಲ್ಲ ಎಂದು ವಿವರಿಸಿದರು.