ಬೆಂಗಳೂರು: ರಾಜ್ಯ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಗೆಲ್ಲುವ ಫೇವರೆಟ್ ಅಭ್ಯರ್ಥಿಗಳಲ್ಲಿ ಒಬ್ಬರಾಗಿದ್ದ ಮಿಥುನ್ ರೈ ದಿಢೀರ್ ಸ್ಪರ್ಧಾ ಕಣದಿಂದ ಹಿಂದೆ ಸರಿದಿದ್ದಾರೆ.
ರಾಜ್ಯ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಂತಿಮ ಹದಿನಾರು ಅಭ್ಯರ್ಥಿಗಳಲ್ಲಿ ಮಿಥುನ್ ರೈ ಒಬ್ಬರಾಗಿದ್ದರು. ಗೆಲ್ಲುವ ಸಾಧ್ಯತೆ ಇರುವ ಪ್ರಥಮ 4 ಅಭ್ಯರ್ಥಿಗಳಲ್ಲಿ ಇವರು ಒಬ್ಬರಾಗಿದ್ದರು. ಆದರೆ ದಿಢೀರ್ ಕಣದಿಂದ ಹಿಂದೆ ಸರಿಯುವ ತೀರ್ಮಾನ ಕೈಗೊಂಡಿದ್ದು, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸೂಚನೆ ಹಿನ್ನೆಲೆ ಈ ನಿರ್ಧಾರ ಕೈಗೊಂಡಿದ್ದೇನೆ ಎಂದು ಹೇಳುವ ಮೂಲಕ ಭಾರಿ ಅಚ್ಚರಿ ಮೂಡಿಸಿದ್ದಾರೆ.
![Mithun Rai left, Mithun Rai left the Youth Congress presidential race, Youth Congress presidential election, Youth Congress presidential election 2021 news, Youth Congress presidential election 2021, ಸ್ಪರ್ಧೆಯಿಂದ ಹಿಂದೆ ಸರಿದ ಮಿಥುನ್ ರೈ, ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಸ್ಪರ್ಧೆಯಿಂದ ಹಿಂದೆ ಸರಿದ ಮಿಥುನ್ ರೈ, ರಾಜ್ಯ ಯುವ ಕಾಂಗ್ರೆಸ್ ಸಮಿತಿ ಚುನಾವಣೆ, ರಾಜ್ಯ ಯುವ ಕಾಂಗ್ರೆಸ್ ಸಮಿತಿ ಚುನಾವಣೆ 2021, ರಾಜ್ಯ ಯುವ ಕಾಂಗ್ರೆಸ್ ಸಮಿತಿ ಚುನಾವಣೆ 2021 ಸುದ್ದಿ,](https://etvbharatimages.akamaized.net/etvbharat/prod-images/kn-bng-07-mithun-rai-take-back-script-7208077_09012021233630_0901f_1610215590_617.jpg)
ಅಲ್ಲದೆ ತಾವು ಯಾವುದೇ ಅಭ್ಯರ್ಥಿ ಪರವಾಗಿ ಲಾಬಿ ನಡೆಸುತ್ತಿಲ್ಲ. ಪ್ರಚಾರ ಸೇರಿದಂತೆ ಯಾವುದೇ ರೀತಿಯ ಪ್ರಭಾವ ಬೀರುವ ಪ್ರಯತ್ನ ಯಾವುದೇ ಅಭ್ಯರ್ಥಿ ಪರ ಮಾಡುತ್ತಿಲ್ಲ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ಡಿಕೆಶಿ ನಿರ್ಧಾರ ಕೈಗೊಂಡಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಆರಂಭದಿಂದಲೂ ಸ್ಪರ್ಧಾ ಕಣದಲ್ಲಿರುವ ಮಂಜುನಾಥ್ ಗೌಡ ಹಾಗೂ ಮಹಮ್ಮದ್ ನಲಪಾಡ್ ಪರವಾಗಿ ತೆರೆಮರೆಯಲ್ಲಿ ಕಸರತ್ತು ನಡೆಸಿದ್ದಾರೆ ಎಂಬ ಮಾತು ಕೇಳಿಬರುತ್ತಿತ್ತು. ಇದೀಗ ಮಿಥುನ್ ರೈ ಕಣದಿಂದ ಹಿಂದೆ ಸರಿದಿರುವ ನಿರ್ಧಾರದ ಹಿಂದೆಯೂ ಡಿಕೆಶಿ ಒತ್ತಡ ಇರಬಹುದೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ.
ಯುವ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ ಆನ್ಲೈನ್ ಮೂಲಕ ಹಂತಹಂತವಾಗಿ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ನಿನ್ನೆ ಸಂಜೆಯವರೆಗೂ ಸಕ್ರಿಯವಾಗಿ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದ ಮಿಥುನ್ ಏಕಾಏಕಿ ಈ ರೀತಿ ನಿರ್ಧಾರ ಕೈಗೊಂಡಿರುವುದು ಎಲ್ಲರಿಗೂ ಅಚ್ಚರಿ ತರಿಸಿದೆ.
ದಕ್ಷಿಣ ಕನ್ನಡ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಮತ್ತು ಯುವ ನಾಯಕ ಮಿಥುನ್ ರೈ ಕಣದಿಂದ ಹಿಂದೆ ಸರಿದಿರುವ ಬಗ್ಗೆ ಅವರೇ ಸ್ವಯಂ ಘೋಷಣೆ ಮಾಡಿಕೊಂಡಿದ್ದಾರೆ.
![Mithun Rai left, Mithun Rai left the Youth Congress presidential race, Youth Congress presidential election, Youth Congress presidential election 2021 news, Youth Congress presidential election 2021, ಸ್ಪರ್ಧೆಯಿಂದ ಹಿಂದೆ ಸರಿದ ಮಿಥುನ್ ರೈ, ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಸ್ಪರ್ಧೆಯಿಂದ ಹಿಂದೆ ಸರಿದ ಮಿಥುನ್ ರೈ, ರಾಜ್ಯ ಯುವ ಕಾಂಗ್ರೆಸ್ ಸಮಿತಿ ಚುನಾವಣೆ, ರಾಜ್ಯ ಯುವ ಕಾಂಗ್ರೆಸ್ ಸಮಿತಿ ಚುನಾವಣೆ 2021, ರಾಜ್ಯ ಯುವ ಕಾಂಗ್ರೆಸ್ ಸಮಿತಿ ಚುನಾವಣೆ 2021 ಸುದ್ದಿ,](https://etvbharatimages.akamaized.net/etvbharat/prod-images/kn-bng-07-mithun-rai-take-back-script-7208077_09012021233630_0901f_1610215590_1025.jpg)
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಸಲಹೆ ಮೇರೆಗೆ ನಾಮಪತ್ರ ಹಿಂಪಡೆದಿರುವುದಾಗಿ ಮಿಥುನ್ ರೈ ಘೋಷಿಸಿದ್ದಾರೆ. ಚುನಾವಣೆಗೆ ಒಂದೇ ದಿನ ಬಾಕಿ ಇರುವಂತೆ ನಾಮಪತ್ರ ಹಿಂಪಡೆದಿರುವುದು ಅಚ್ಚರಿ ಮೂಡಿಸಿದೆ. ಜನವರಿ 10, 11 ಮತ್ತು 12 ರಂದು ಆನ್ಲೈನ್ ಮೂಲಕ ಮತದಾನ ನಡೆಯಲಿದ್ದು, ಒಂದು ದಿನ ಮುಂಚಿತವಾಗಿ ಮಿಥುನ್ ಕಣದಿಂದ ಹಿಂದೆ ಸರಿದಿರುವುದು ದೊಡ್ಡ ಅಚ್ಚರಿ ಮೂಡಿಸಿದ್ದುಮ ಡಿಕೆಶಿ ನಿಲುವಿನ ಬಗ್ಗೆ ಅನುಮಾನ ವ್ಯಕ್ತವಾಗಲು ಕಾರಣವಾಗಿದೆ.
ಮಿಥುನ್ ಕಣದಿಂದ ಹಿಂದೆ ಸರಿದಿರುವ ಹಿನ್ನೆಲೆ ಇದೀಗ ಸ್ಪರ್ಧಾಕಣದಲ್ಲಿ ಇರುವ ಶಾಸಕ ಹ್ಯಾರಿಸ್ ಪುತ್ರ ಮಹಮ್ಮದ್ ನಲಪಾಡ್, ಮಾಜಿ ಸಚಿವ ಎಂ.ಆರ್ ಸೀತಾರಾಮ್ ಪುತ್ರ ರಕ್ಷಾ ರಾಮಯ್ಯ ಹಾಗೂ ಕಳೆದ ವಿಧಾನಸಭೆ ಚುನಾವಣೆ ಮಹಾಲಕ್ಷ್ಮಿಲೇಔಟ್ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮಂಜುನಾಥ್ ಗೌಡ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ.
ಡಿಕೆಶಿ ಬಹುತೇಕ ಮಂಜುನಾಥ್ ಗೌಡ ಬೆನ್ನಿಗೆ ನಿಂತಿದ್ದಾರೆ ಎಂಬ ಮಾತು ಕೂಡ ಕೇಳಿ ಬರುತ್ತಿದೆ. ಇದಕ್ಕಾಗಿಯೇ ದಕ್ಷಿಣ ಕನ್ನಡ ಜಿಲ್ಲಾ ಭಾಗದಲ್ಲಿ ಹಾಗೂ ರಾಜ್ಯದ ವಿವಿಧ ಭಾಗಗಳಲ್ಲಿ ಅತ್ಯಂತ ಪ್ರಭಾವಿಯಾಗಿ ಗುರುತಿಸಿಕೊಂಡಿದ್ದ ಮಿಥುನ್ ರೈರನ್ನು ಉದ್ದೇಶಪೂರ್ವಕವಾಗಿ ಕಣದಿಂದ ಹಿಂದೆ ಸರಿಯುವಂತೆ ಬಲವಂತ ಮಾಡಿರಬಹುದು ಎಂಬ ಮಾತು ಕೇಳಿಬರುತ್ತಿದೆ.