ಬೆಂಗಳೂರು : ಹಳೆ ದ್ವೇಷದ ಹಿನ್ನೆಲೆಯಲ್ಲಿ ನಡುರಸ್ತೆಯಲ್ಲಿ ಪತ್ನಿ ಮುಂದೆಯೇ ನಟೋರಿಯಸ್ ರೌಡಿಶೀಟರ್ಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದ ನಾಲ್ವರು ಆರೋಪಿಗಳನ್ನು ಪುಲಕೇಶಿನಗರ ಪೊಲೀಸರು ಬಂಧಿಸಿದ್ದಾರೆ.
ಮೊಯಿನುದ್ದಿನ್, ಅರ್ಬಾಜ್, ಅದ್ನಾನ್ ಹಾಗೂ ಅರ್ಫಾತ್ ಬಂಧಿತ ಆರೋಪಿಗಳು. ಘಟನೆಯಲ್ಲಿ ಶಿವಾಜಿನಗರದ ರೌಡಿಶೀಟರ್ ಮನ್ಸೂರ್ ಅಲಿಯಾಸ್ ದೂನ್ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ರೌಡಿಶೀಟರ್ ಮನ್ಸೂರ್ ವಿರುದ್ಧ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ 20ಕ್ಕೂ ಅಧಿಕ ಪ್ರಕರಣ ದಾಖಲಾಗಿವೆ. ಈತ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.
ಬಳಿಕ ಹೈಕೋರ್ಟ್ನಲ್ಲಿ ಈತನ ವಿರುದ್ಧ ದಾಖಲಾಗಿದ್ದ ಕೊಲೆ ಪ್ರಕರಣ ವಜಾಗೊಂಡಿದ್ದರಿಂದ 10 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿದ್ದ. ಕಳೆದ ರಂಜಾನ್ ಹಬ್ಬದ ವೇಳೆ ಬಂಧಿತ ಆರೋಪಿ ಮೊಯಿನುದ್ದಿನ್ ಮೇಲೆ ಕ್ಷುಲ್ಲಕ ಕಾರಣದ ಹಿನ್ನೆಲೆ ಮನ್ಸೂರ್ ಹಲ್ಲೆ ಮಾಡಿದ್ದ.
ನಂತರ ನವೆಂಬರ್ 27ರಂದು ಮನ್ಸೂರ್ ಬೈಕ್ ಸರ್ವಿಸ್ ಮಾಡಿಸಲೆಂದು ಶಿವಾಜಿನಗರದ ಗ್ಯಾರೇಜ್ಗೆ ಬಿಟ್ಟಿದ್ದ. ಅದೇ ಗ್ಯಾರೇಜ್ನಲ್ಲಿ ಆರೋಪಿ ಮೊಯಿನುದ್ದಿನ್ ಕೆಲಸ ಮಾಡುತ್ತಿದ್ದ.
ಮನ್ಸೂರ್ನನ್ನು ಗಮಸುತ್ತಿದ್ದ. ಬಳಿಕ ಆರೋಪಿ ತಮ್ಮ ಗ್ಯಾಂಗ್ ಸದಸ್ಯರೊಂದಿಗೆ ಕೊಲೆಗೆ ಸಂಚು ರೂಪಿಸಿ ಪತ್ನಿಯೊಂದಿಗೆ ರೌಡಿಶೀಟರ್ ಮನ್ಸೂರ್ ಬೈಕ್ನಲ್ಲಿ ಹೋಗುತ್ತಿದ್ದ ವೇಳೆ ಚಾಕುವಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದರು.
ಈ ಸಂಬಂಧ ಪುಲಕೇಶಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಜೆಡಿಎಸ್ ಅಭ್ಯರ್ಥಿ ಸೂರಜ್ ರೇವಣ್ಣ ನಾಮಪತ್ರ ರದ್ದು ಕೋರಿದ್ದ ಅರ್ಜಿ ವಜಾ