ಬೆಂಗಳೂರು: ಪದೇ ಪದೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಹೇಳಿಕೆ ನೀಡುತ್ತಿರುವ ಕಾರಣಕ್ಕೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ
ನೋಟಿಸ್ ಜಾರಿ ಮಾಡಲಾಗಿದ್ದು, ಸೂಕ್ತ ಸಮಯದಲ್ಲಿ ಪಕ್ಷದ ಶಿಸ್ತು ಸಮಿತಿ ಕ್ರಮ ಕೈಗೊಳ್ಳುತ್ತದೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ.
ಕುಮಾರಕೃಪ ಅತಿಥಿ ಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋ ಕಾಲ್ಡ್ ಎಂಎಲ್ಎ ನೇಚರ್ ಎಲ್ಲರಿಗೂ ಗೊತ್ತಿದೆ. ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಯನ್ನ ರಿಜೆಕ್ಟ್ ಮಾಡುತ್ತೇನೆ. ಅವರು ಏನೇ ಮಾತಾಡಿದರೂ ಅದು ತಪ್ಪು, ಬಹಳ ವರ್ಷಗಳಿಂದ ಎಲ್ಲರೂ ಅವರನ್ನು ನೋಡಿದ್ದಾರೆ. ಸುಳ್ಳು ಹೇಳಿಕೆಗಳನ್ನ ಮಾಧ್ಯಮಗಳ ಮುಂದೆ ಕೊಡುತ್ತಿದ್ದಾರೆ. ಯತ್ನಾಳ್ ಮಾಡಿರುವ ಆರೋಪಗಳೆಲ್ಲಾ ಸತ್ಯಕ್ಕೆ ದೂರವಾದವು ಎಂದರು.
ಇಂತಹ ಗಂಭೀರ ಆರೋಪ ಮಾಡಿರುವ ಕಾರಣದಿಂದಲೇ ಈಗಾಗಲೇ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಯತ್ನಾಳ್ ನೀಡಿರುವ ಉತ್ತರವನ್ನು ರಾಷ್ಟ್ರೀಯ ಬಿಜೆಪಿ ಶಿಸ್ತು ಸಮಿತಿ ಪರಿಶೀಲಿಸುತ್ತದೆ. ಈ ವಿಚಾರದಲ್ಲಿ ಸೂಕ್ತ ಸಮಯದಲ್ಲಿ ಶಿಸ್ತು ಸಮಿತಿ ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿದರು.
ನಮ್ಮ ಉಪಾಧ್ಯಕ್ಷನನ್ನೇ ಬೆಂಬಲಿಸುತ್ತೇವೆ: ವಿಜಯೇಂದ್ರ ನಮ್ಮ ಪಕ್ಷದ ಉಪಾಧ್ಯಕ್ಷ, ಸಹಜವಾಗಿಯೇ ನಾವು ಉಪಾಧ್ಯಕ್ಷನನ್ನೇ ಬೆಂಬಲಿಸುತ್ತೇವೆ. ಯತ್ನಾಳ್ ಹೇಳಿಕೆ ಸರಿಯಲ್ಲ, ಒಬ್ಬ ಎಂಎಲ್ಎ ಹೇಳಿಕೆಗೆ ಏಕೆ ಇಷ್ಟು ಪ್ರಾಮುಖ್ಯತೆ ಕೊಡಬೇಕು? ಪದೇ ಪದೆ ಯತ್ನಾಳ್ ಬಗ್ಗೆ ಪ್ರಶ್ನೆ ಕೇಳ್ತಿರಾ!? ಅವರ ಹೇಳಿಕೆ ನಮ್ಮ ಪಕ್ಷಕ್ಕೆ ಪ್ರಸ್ತುತ ಅಲ್ಲ, ಅವರ ಹೇಳಿಕೆಯನ್ನ ನಂಬಬೇಡಿ ಎಂದರು.
ಓದಿ: ಮೀಸಲಾತಿ ಹೋರಾಟ.. ಸರ್ಕಾರ ಸಂವಿಧಾನ ಬದ್ಧವಾಗಿ ನಡೆದುಕೊಳ್ಳಲಿ; ಎಚ್ಡಿಕೆ
ಮೀಸಲಾತಿ ಹೋರಾಟದ ವಿಷಯ ಮುನ್ನಲೆಗೆ ಬಂದಿದೆ. ಇಡೀ ರಾಷ್ಟ್ರದ ಜನರನ್ನು ಸಮಾನವಾಗಿ ಕಾಣುತ್ತೇವೆ. ಬಡವರ ಕಲ್ಯಾಣವೇ ಮೋದಿ ಸರ್ಕಾರದ ಗುರಿಯಾಗಿದೆ ಎಂದು ಭರವಸೆ ನೀಡಿದರು.