ಬೆಂಗಳೂರು: ಸಿಗ್ನಲ್ ಜಂಪ್ ಮಾಡಿರುವುದನ್ನು ಪ್ರಶ್ನಿಸಿದ ಉಪ್ಪಾರ್ಪೇಟೆ ಸಂಚಾರ ಪೊಲೀಸ್ ಠಾಣೆಯ ಎಎಸ್ಐ ಕತ್ತುಪಟ್ಟಿ ಹಿಡಿದು ಕರ್ತವ್ಯಕ್ಕೆ ಅಡ್ಡಿಪಡಿಸಿದ ಮಹಿಳೆಯನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ.
ಉಪ್ಪಾರಪೇಟೆ ಸಂಚಾರ ಪೊಲೀಸ್ ಠಾಣೆಯ ಎಎಸ್ಐ ಬಸವಯ್ಯ ನೀಡಿದ ದೂರಿನ ಆಧಾರದ ಮೇರೆಗೆ ಗೋವಾ ಮೂಲದ ಅಪೂರ್ವಿ ಡೈಯಾಸ್ ಎಂಬಾಕೆಯನ್ನ ಪೊಲೀಸರು ಬಂಧಿಸಿದ್ದು, ಸದ್ಯ ಆಕೆ ನ್ಯಾಯಾಂಗ ಬಂಧನದಲ್ಲಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಓದಿ : ಸಿಗ್ನಲ್ ಜಂಪ್ ಪ್ರಶ್ನಿಸಿದ್ದಕ್ಕೆ ಟ್ರಾಫಿಕ್ ಎಎಸ್ಐ ಜತೆ ಮಹಿಳೆಯ ರಂಪಾಟ - ವಿಡಿಯೋ
ಶನಿವಾರ ಬಸವಯ್ಯ ಮೈಸೂರು ಬ್ಯಾಂಕ್ ವೃತ್ತದ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದರು. ವೇಗವಾಗಿ ಬಂದ ಕಾರೊಂದು ಕೆಜಿ ರಸ್ತೆಯಲ್ಲಿ ಸಿಗ್ನಲ್ ಜಂಪ್ ಮಾಡಿ ಪ್ಯಾಲೇಸ್ ರಸ್ತೆ ಕಡೆ ಬರುತ್ತಿರುವುದನ್ನು ಗಮನಿಸಿದ ಬಸವಯ್ಯ ಅದನ್ನು ತಡೆದು ನಿಲ್ಲಿಸಿದ್ದರು. ನಂತರ ದಂಡ ಪಾವತಿಸುವಂತೆ ಸೂಚಿಸಿದ್ದರು. ಆ ವೇಳೆ, ಕಾರಿನಿಂದ ಇಳಿದ ಆರೋಪಿ ಅಪೂರ್ವಿ, ಎಎಸ್ಐ ಬಸವಯ್ಯ ಅವರಿಗೆ ಅವಾಚ್ಯ ಶಬ್ದಗಳಿಂದ ಹಿಂದಿ ಭಾಷೆಯಲ್ಲಿ ನಿಂದಿಸಿದ್ದಳು. ಜತೆಗೆ ಆಕ್ರೋಶಗೊಂಡ ಎಎಸ್ಐ ಕೊರಳಪಟ್ಟಿ ಹಿಡಿದು ರಂಪಾಟ ನಡೆಸಿದ್ದಾಳೆ. ಈ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆಹಿಡಿಯುತ್ತಿದ್ದ ಪೊಲೀಸರ ವಿರುದ್ಧ ಕಿಡಿಕಾರಿದ್ದಳು. ಮಹಿಳೆ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿ ಎಎಸ್ಐ ನೀಡಿದ ದೂರಿನ ಮೇರೆಗೆ ಉಪ್ಪಾರಪೇಟೆ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.